ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

Suvarna News   | Asianet News
Published : Jan 22, 2020, 12:09 PM ISTUpdated : Jan 22, 2020, 12:41 PM IST
ಮಕ್ಕಳಲ್ಲಿ ದೇಶ ಪ್ರೇಮದ ಬೀಜ ಬಿತ್ತೋದು ಹೇಗೆ?

ಸಾರಾಂಶ

ಮತ್ತೊಂದು ಗಣರಾಜ್ಯೋತ್ಸವದ ಸಂಭ್ರಮ ಹತ್ತಿರ ಬರುತ್ತಿದೆ.ಪ್ರತಿ ರಾಷ್ಟ್ರೀಯ ಹಬ್ಬದ ಹಿಂದೊಂದು ಕಥೆಯಿರುತ್ತದೆ,ದೇಶಭಕ್ತಿಯ ಕಿಡಿಯಿರುತ್ತದೆ.ಇದನ್ನು ಮಕ್ಕಳಿಗೆ ತಿಳಿಸುವ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯೆಂಬ ಮೊದಲ ಪಾಠಶಾಲೆಯಲ್ಲೇ ಮಕ್ಕಳಿಗೆ ದೇಶಭಕ್ತಿಯ ಪಾಠ ಮಾಡಬೇಕಾದದ್ದು ಪೋಷಕರ ಆದ್ಯ ಕರ್ತವ್ಯವಾಗಿರುವ ಜೊತೆಗೆ ಇಂದಿನ ತುರ್ತು ಅಗತ್ಯವೂ ಹೌದು.

ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ನೀವು ಹಳ್ಳಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದವರಾಗಿದ್ದರೆ ಸ್ವಲ್ಪ ಆ ದಿನಗಳತ್ತ ತಿರುಗಿ ನೋಡಿ. ಆಗಸ್ಟ್ 15, ಜನವರಿ 26 ಈ ಎರಡು ದಿನಗಳು ನಿಮ್ಮ ಪಾಲಿಗೆ ಅತಿದೊಡ್ಡ ಸಂಭ್ರಮದ ದಿನಗಳಾಗಿದ್ದವೋ ಇಲ್ಲವೋ? ಇಡೀ ಹಳ್ಳಿ ಅಂದು ಶಾಲೆಯಲ್ಲಿ ನೆರೆಯುತ್ತಿತ್ತು. ಈ ಮೂಲಕ ರಾಷ್ಟ್ರೀಯ ಹಬ್ಬ ಊರ ಹಬ್ಬವಾಗಿ ಪರಿವರ್ತಿತವಾಗುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಅವರ ತ್ಯಾಗ, ಬಲಿದಾನಗಳ ಬಗ್ಗೆ ಮಕ್ಕಳಿಗೆ ಸಾಕಷ್ಟು ಮಾಹಿತಿ ಸಿಗುತ್ತಿತ್ತು. ಇನ್ನು ಆ ದಿನಗಳಂದು ಮಾರ್ಚ್‍ಪಾಸ್ಟ್, ದೇಶಭಕ್ತಿ ಗೀತೆಗಳ ಗಾಯನ ಸೇರಿದಂತೆ ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಅಂದು ಬಾನಂಗಳದಲ್ಲಿ ಹಾರಾಡುವ ತ್ರಿವರ್ಣ ಧ್ವಜವನ್ನು ಕಣ್ತುಂಬಿಕೊಳ್ಳುವುದೇ ಮಕ್ಕಳಿಗೆ ಹೆಮ್ಮೆಯ ವಿಚಾರವಾಗಿತ್ತು. ಅಂದು ಪ್ರತಿ ಮಗುವೂ ತಾನೊಬ್ಬ ದೇಶರಕ್ಷಕನೆಂಬಂತೆ ದೇಶಭಕ್ತಿಯನ್ನು ನರನಾಡಿಗಳಲ್ಲಿ ತುಂಬಿಸಿಕೊಂಡು ಬೀಗುತ್ತಿತ್ತು. ಆದರೆ, ಇಂದು? ಇಂಥ ಸಂಭ್ರಮ ನೋಡಲು ಸಿಗುವುದು ಬಲು ವಿರಳ. ನಗರಗಳಂತೂ ರಾಷ್ಟ್ರೀಯ ಹಬ್ಬಗಳಂದು ಬಹುತೇಕ ಶಾಲೆಗಳು ಬಾಗಿಲು ಮುಚ್ಚಿರುತ್ತವೆ,ಇನ್ನು ಧ್ವಜಾರೋಹಣ ಕಣ್ತುಂಬಿಕೊಳ್ಳುವ,ದೇಶಭಕ್ತಿಯನ್ನು ನರನಾಡಿಗಳಲ್ಲಿ ತುಂಬಿಸಿಕೊಳ್ಳುವ ಅವಕಾಶ ಎಲ್ಲಿಂದ ಸಿಗಬೇಕು? ಹಾಗಾದ್ರೆ ಮಕ್ಕಳಿಗೆ ರಾಷ್ಟ್ರೀಯ ಹಬ್ಬಗಳ ಮಹತ್ವ,ದೇಶಭಕ್ತಿಯ ಬಗ್ಗೆ ತಿಳಿಸುವುದು ಯಾರು? ಎಂಬ ಪ್ರಶ್ನೆ ಇಂದಿನ ಪೋಷಕರಲ್ಲಿ ಮೂಡಬಹುದು.ಶಾಲೆಗಳಲ್ಲಿ ಈ ಕೆಲಸ ನಡೆಯುತ್ತೋ,ಇಲ್ಲವೋ ಗೊತ್ತಿಲ್ಲ.ಆದರೆ,ಮನೆಯಲ್ಲಿ ನೀವೇ ಏಕೆ ಈ ಕೆಲಸ ಮಾಡಬಾರದು?

ಪುಟಾಣಿ ಕಂದಮ್ಮಗಳೇಕೆ ಕೂಕ್ ಆಟಕ್ಕೆ ಕೇಕೆ ಹಾಕುತ್ತವೆ?

ಸ್ವಾತಂತ್ರ್ಯ ಹೋರಾಟಗಾರರ ಕಥೆ ಹೇಳಿ: ಮಕ್ಕಳಿಗೆ ಕಥೆ ಹೇಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಹೀಗಿರುವಾಗ ನೀತಿಕಥೆಗಳ ಜೊತೆಗೆ ಸ್ವಾತಂತ್ರ್ಯಹೋರಾಟ ಹಾಗೂ ಹೋರಾಟಗಾರರ ಕುರಿತ ಪುಟ್ಟ ಪುಟ್ಟ ಕಥೆಗಳನ್ನು ಮಕ್ಕಳಿಗೆ ಹೇಳಿ.ಇದರಿಂದ ಮಕ್ಕಳಿಗೆ ಸ್ವಾತಂತ್ರ್ಯಹೋರಾಟಗಾರರ ಜೀವನ, ಆದರ್ಶ ಹಾಗೂ ಶೌರ್ಯದ ಪರಿಚಯವಾಗುತ್ತದೆ. ದೇಶಭಕ್ತಿ ಎಂದರೆ ಏನು ಎಂಬುದು ಕ್ರಮೇಣ ಅರ್ಥವಾಗುತ್ತದೆ.

ದೇಶಕ್ಕಾಗಿ ಪ್ರಾಣತೆತ್ತ ವೀರರ ಬಗ್ಗೆ ತಿಳಿಸಿ: ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ ಸೈನಿಕರ ಬಗ್ಗೆ ಮಕ್ಕಳಿಗೆ ತಿಳಿಸಿ. ಸೈನಿಕರು ದೇಶರಕ್ಷಣೆಗಾಗಿ ಶತ್ರುಗಳ ವಿರುದ್ಧ ಹೇಗೆ ಹೋರಾಟ ನಡೆಸುತ್ತಾರೆ ಎಂಬುದನ್ನು ತಿಳಿಸುವ ಜೊತೆಗೆ ಅವರ ತ್ಯಾಗ, ಬಲಿದಾನಗಳ ಬಗ್ಗೆಯೂ ಮಾಹಿತಿ ನೀಡಿ.ದೇಶಕ್ಕಾಗಿ ಪ್ರಾಣತೆತ್ತ ವೀರಯೋಧರ ಸಾಹಸಗಾಥೆಗಳನ್ನು ಹೇಳಿ. 

ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?

ಮಹಾನೀಯರ ಜೀವನಚರಿತ್ರೆಗಳನ್ನು ಓದಲು ಪ್ರೇರೇಪಿಸಿ: ದೇಶದ ಅಭಿವೃದ್ಧಿಗಾಗಿ ದುಡಿದ ಮಹಾನೀಯರ ಜೀವನಚರಿತ್ರೆಗಳನ್ನು ಮಕ್ಕಳಿಗೆ ತಂದು ಕೊಟ್ಟು ಓದಲು ಪ್ರೇರೇಪಿಸಿ.ಇದರಿಂದ ದೇಶದ ಅಭಿವೃದ್ಧಿಗೆ ನಾನು ಕೂಡ ಏನಾದರೂ ಮಾಡಬೇಕೆಂಬ ದುಡಿತ ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತದೆ.

ದೇಶದ ಇತಿಹಾಸ ಪರಿಚಯಿಸಿ: ನಮ್ಮ ದೇಶದ ಇತಿಹಾಸದ ಬಗ್ಗೆಯೂ ಮಕ್ಕಳಿಗೆ ತಿಳಿ ಹೇಳುವ ಕೆಲಸವಾಗಬೇಕು.ಶಾಲೆಯ ಪಠ್ಯಪುಸ್ತಕದಲ್ಲಿ ದೇಶದ ಇತಿಹಾಸದ ಬಗ್ಗೆ ಸಾಕಷ್ಟು ಮಾಹಿತಿಯಿರಬಹುದು.ಆದರೆ, ಅಲ್ಲಿರದ ಎಷ್ಟೋ ಸಂಗತಿಗಳಿವೆ.ಅದನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಿ.ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪುರಾಣ,ಭಾರತವನ್ನಾಳಿದ ರಾಜ-ಮಹಾರಾಜರ ಕಥೆಗಳನ್ನು ಹೇಳಿ.

ಸಂಸ್ಕತಿಯ ಹಿರಿಮೆ ತಿಳಿಸಿ: ಭಾರತ ವಿಭಿನ್ನ ಸಂಸ್ಕøತಿಯ ತವರೂರು.ಇಲ್ಲಿನ ಪ್ರಾದೇಶಿಕ ವೈವಿಧ್ಯತೆ, ಜನಜೀವನ, ಸಾಂಸ್ಕøತಿಕ ಮಹಿಮೆ, ಹಬ್ಬ ಹರಿದಿನಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸಿ. ನಮ್ಮ ಸಂಸ್ಕøತಿ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಗೌರವ, ಹೆಮ್ಮೆ ಮೂಡುವಂತಹ ವಿಚಾರಗಳನ್ನು ಅವರಿಗೆ ತಿಳಿಸಿ.

ಮಗುವಿನ ಜೊತೆ ಇಂಗ್ಲಿಷ್‌ನಲ್ಲೇ ಹೆಚ್ಚು ಮಾತಾಡ್ತೀರಾ?

ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವ ನೀಡುವುದನ್ನು ಕಲಿಸಿ: ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಬಗ್ಗೆ ಮಕ್ಕಳ ಮನಸ್ಸಿನಲ್ಲಿ ಅಭಿಮಾನ, ಗೌರವ ಮೂಡಿಸುವ ಕಾರ್ಯವನ್ನು ಪೋಷಕರು ಮಾಡಬೇಕು.ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಗೌರವ ನೀಡುವುದನ್ನು ಮಕ್ಕಳಿಗೆ ಕಲಿಸಬೇಕು. 

ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹತ್ವ ತಿಳಿಸಿ: ಪ್ರತಿ ರಾಷ್ಟ್ರೀಯ ಹಬ್ಬದ ಹಿಂದೆ ಒಂದು ಕಥೆಯಿದೆ ಅದನ್ನು ಮಕ್ಕಳಿಗೆ ತಿಳಿಸಿ. ಆ ಹಬ್ಬವನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವವೇನು ಎಂಬುದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ.

ಪ್ರಜೆಯ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ: ಭಾರತೀಯ ಪ್ರಜೆಯಾಗಿ ಅವರಿಗೆ ಕೆಲವೊಂದು ಕರ್ತವ್ಯಗಳಿರುತ್ತವೆ ಎಂಬುದನ್ನು ಅರ್ಥವಾಗುವ ರೀತಿಯಲ್ಲಿ ವಿವರಿಸಿ. ಇದರಿಂದ ಮಕ್ಕಳಲ್ಲಿ ಕರ್ತವ್ಯಪ್ರಜ್ಞೆ ಬೆಳೆಯುತ್ತದೆ. 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?