ಮೈಸೂರು ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಆರಂಭವಾದದ್ದೆ ವಿಜಯನಗರ ಅರಸರಿಂದ.ಈ ವಿಜಯನಗರ ಸಾಮ್ರಾಜ್ಯ ಎಂಬುದಿರಲಿಲ್ಲ. ಕರ್ನಾಟಕ ಸಾಮ್ರಾಜ್ಯ ಎಂದೇ ಕರೆಯಲಾಗುತ್ತಿತ್ತು. ನಂತರ ಸಂಶೋಧನೆ ಕೈಗೊಂಡ ಬ್ರಿಟಿಷರು ಕರ್ನಾಟಕ ಸಾಮ್ರಾಜ್ಯದ ರಾಜಧಾನಿಯಾಗಿದ್ದ ವಿಜಯನಗರವನ್ನೇ ಸಾಮ್ರಾಜ್ಯ ಎಂಬುದಾಗಿ ಕರೆದರು ಎಂಬ ವಾದ ಮಂಡಿಸುತ್ತಾರೆ ಮೈಸೂರಿನ ಇತಿಹಾಸಜ್ಞೆ ಡಾ. ವಸುಂಧರಾ ಕವಲಿ. ಅವರೊಂದಿಗಿನ ಸಂದರ್ಶನ
ಸಂದರ್ಶನ : ಉತ್ತನಹಳ್ಳಿ ಮಹದೇವ
ಪ್ರಶ್ನೆ: ನಿಮ್ಮ ಹೆನ್ನಲೆಯ ಬಗ್ಗೆ ಹೇಳಿಕೊಳ್ಳುವಿರಾ?
ವಸುಂಧರಾ: ನಾನು ಮೂಲತಃ ಶಿವಮೊಗ್ಗದ ಕವಲಿ ಗ್ರಾಮದವಳು. ನೇಕಾರ ಸಮುದಾಯಕ್ಕೆ ಸೇರಿದ ನನ್ನ ಪೂರ್ವಜರು ಶಿವಮೊಗ್ಗದಿಂದ ಹಾವೇರಿಯ ಬ್ಯಾಡಗಿ ಪಟ್ಟಣಕ್ಕೆ ಹೋಗಿ ನೆಲೆಸಿದರು. ನನ್ನ ತಂದೆ ಪಂ. ಚನ್ನಬಸಪ್ಪ ಯಲ್ಲಪ್ಪ ಕವಲಿ. ನಮ್ಮ ತಂದೆಗೆ ನಾವು 7 ಜನ ಮಕ್ಕಳು. ಮೊದಲನೆ ಅಣ್ಣ ವಸಂತ್ ಕವಲಿ ಉತ್ತಮ ಹಿಂದೂಸ್ತಾನಿ ಗಾಯಕ. ನಾನು ಓದಿನಲ್ಲಿ ಮುಂದಿದ್ದರಿಂದ ನಮ್ಮ ತಂದೆ ಎಲ್ಲರನ್ನೂ ಧಾರವಾಡದಲ್ಲೆ ಓದಿಸಿದರು. ಕರ್ನಾಟಕ ವಿವಿಯಲ್ಲಿ ಎಂಎ
(ಇತಿಹಾಸ) ಮುಗಿಸಿದೆ. ನನ್ನ ತಂದೆ ಪಂಡಿತ್ ಕವಲಿ ಅವರು ಕನ್ನಡ ನಿಘಂಟು ಬರೆದು ಹೆಸರುವಾಸಿಯಾದವರು. ಸುಮಾರು 40 ಸಾವಿರ ಪದಗಳನ್ನು ನಿಘಂಟಿನಲ್ಲಿ ಹೆಸರಿಸಿದ್ದಾರೆ.
ಪ್ರಶ್ನೆ: ಇತಿಹಾದಲ್ಲಿ ಎಂ.ಎ. ಪಡೆದ ನೀವು ನಿಮ್ಮ ಮುಂದಿನ ಸಂಶೋಧನಾ ಕ್ಷೇತ್ರವನ್ನು ಹೇಗೆ ವಿಸ್ತರಿಸಿಕೊಂಡಿರಿ?
ವಸುಂಧರಾ: ನಾನು ಕರ್ನಾಟಕ ವಿವಿಯಲ್ಲಿ ಇತಿಹಾಸ ಸ್ವನಾತಕೋತ್ತರ ಪದವಿ ಮುಗಿಸಿದ ತಕ್ಷಣ ಪ್ಯಾರೀಸಿನಿಂದ ಸ್ಕಾಲರ್ ಶಿಪ್ ದೊರೆಯಿತು. ನಮ್ಮ ಗುರುಗಳಾಗಿದ್ದ ಜಿ.ಎ. ದೀಕ್ಷಿತರು ಫ್ರೆಂಚ್ ದೇಶಕ್ಕೆ ಹೋಗಿ ಅಲ್ಲಿನ ವಿದ್ವಾಂಸ ಜೀ ಫಿಲಿಯೋಜಾ (Jean Filliozat)ಅವರ ಬಳಿ ಪಿಚ್.ಡಿ ಮಾಡುವಂತೆ ಸೂಚಿಸಿದರು. 1965ರಲ್ಲಿ ಪ್ಯಾರೀಸ್ ಗೆ ಹೋಗಿ ಫ್ರೆಂಚ್ ಕಲಿತು 1968 ರವರೆಗೆ ಅವರ ಬಳಿಯೇ ಪಿಎಚ್ .ಡಿ ಮಾಡಿದೆ. ಜೀನ್ ಅವರು ಬಾದಾಮಿ, ಪಟ್ಟದಕಲ್ಲು ನೋಡಿ ಹೋಗಿದ್ದ ರಿಂದ ಹಂಪಿ ಕುರಿತು ಅಧ್ಯಯನ ನಡೆಸುವಂತೆ ಸಲಹೆ ನೀಡಿದರು. ಹಾಗಾಗಿ ನಾನು ವಿಜಯನಗರ ಅರಸರ ಕುರಿತು ಪಿಎಚ್ .ಡಿ ಮಾಡಲು ಆರಂಭಿಸಿದೆ.
ಪ್ರಶ್ನೆ: ಪ್ಯಾರೀಸ್ ನಲ್ಲಿ ಗುರುಗಳಾಗಿದ್ದ ಜೀನ್ ಫಿಲಿಯೋಜಾ ಅವರ ಮಗನನ್ನ ವರಿಸಿದ್ದು ಹೇಗೆ?
ವಸುಂಧರಾ: ಜಾನ್ ಅವರು ಸಂಸ್ಕೃತ , ತಮಿಳು ಭಾಷೆಯಲ್ಲಿ ವಿದ್ವತ್ ಹೊಂದಿದ್ದರಿಂದ ತಮಿಳುನಾಡಿನಲ್ಲಿ ನಡೆದ ತಮಿಳು ಸಮ್ಮೇಳನದಲ್ಲಿ ಭಾಗವಹಿಸಲು ಬಂದಿದ್ದರು. ಅಂದೇ ತಮ್ಮ ಮಗ ಪಿಯ ರ್-ಸಿವೈನ್ -ಫಿಲಿಯೋಜಾ (Pierre-Sylvain-Filliozat)ನನ್ನು ಮದುವೆಯಾಗುವಂತೆ ಕೇಳಿಕೊಂಡರು. ನಮ್ಮ ಮನೆಯಲ್ಲೂ ಒಪ್ಪಿಗೆ ನೀಡಿದ್ದರಿಂದ 1968ರ ಸೆ. 23 ರಂದು ಮದುವೆಯಾದೆ. ಇಂದಿಗೆ 50 ವರ್ಷ ಪೂರೈಸಿದ್ದೇವೆ. ಆ ಕಾಲದಲ್ಲೆ ನಮ್ಮ ಮನೆಯಲ್ಲಿ ಅಂತರ್ಜಾತಿ ವಿವಾಹಗಳು ನಡೆದಿದ್ದರಿಂದ ನಮ್ಮ ಅಂತರಾಷ್ಟ್ರೀಯ, ಅಂತರ್ ರ್ಧರ್ಮೀಯ ಮದುವೆಯಾಯಿತು. ನನ್ನ ಪತಿ ಕೂಡ ಸಂಸ್ಕೃದಲ್ಲಿ ವಿದ್ವಾನ್ ಆದ್ದರಿಂದ ಜವಹರಲಾ ನೆಹರು ಸ್ಥಾಪಿಸಿದ ‘ಫ್ರೆಂಚ್ ಇಸ್ಟಿಟ್ಯೂಟ್ ಆಫ್ ಪಾಂಡಿಚೇರಿ’ದಲ್ಲಿ ನನ್ನ ಪತಿ ಸೇವೆ ಆರಂಭಿಸಿ, ಈಗ ಮೈಸೂರಿನಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ನಾನು ಶಿಕ್ಷಣ ಕ್ಷೇತ್ರಕ್ಕೆ ಹೋಗದಿದ್ದರಿಂದ ಸಂಶೋಧನಾ ಕ್ಷೇತ್ರದಲ್ಲೆ ಮುಂದುವರೆದೆ.
ಪ್ರಶ್ನೆ: ದೇಶೀ ಇತಿಹಾಸಕಾರರು ರಾಬರ್ಟ್ ಸಿವೆಲ್ ಬರೆದಿರುವ ಎ ಫರ್ಗಾಟನ್ ಎಂಪೈರ್ ವಿಜಯನಗರ (1962)’ ಕೃತಿಯನ್ನೇ ಆಧರಿಸಿ ವಿಜಯನಗರ ಸಾಮ್ರಾಜ್ಯ ಎಂಬುದಾಗಿಯೇ ಹೇಳುತ್ತಾರಲ್ಲಾ?
ವಸುಂಧರಾ : ವಿಜಯನಗರ ಎಂಬುದು ಕೇವಲ ರಾಜಧಾನಿ. ಕರ್ನಾಟಕ ಎಂಬುದು ದೇಶ (ಅಂದಿನ ಕಾಲದಲ್ಲಿ ಪ್ರಾಂತ್ಯಕ್ಕೆ ಕರೆಯುತ್ತಿದ್ದ ಹೆಸರು). ನಾನು ಹಂಪಿಯಲ್ಲಿ 1973 ರಿಂದ 77 ರವರೆಗೂ ಸಂಶೋಧನೆ ಕೈಗೊಂಡು ಅಲ್ಲಿನ 30ಕ್ಕೂ ಹೆಚ್ಚು ಶಾಸನಗಳನ್ನು ಅಧ್ಯಯನ ಮಾಡಿದೆ. ಒಂದೇ ಒಂದೂ ಶಾಸನದಲ್ಲೂ ವಿಜಯನಗರದ ಉಲ್ಲೇಖವಿಲ್ಲ. ಅಲ್ಲಿ ‘ಕರ್ನಾಟಕ’ ಎಂದೇ ಬರೆಯಲಾಗಿದೆ. ಅಂದ ಮೇಲೆ ಬ್ರಿಟಿಷ್ ಇತಿಹಾಸಕಾರರು ಈ ವಿಚಾರ ಯಾಕೆ ಮರೆಮಾಚಿದರು ಎಂಬುದು ತಿಳಿಯುತ್ತಿಲ್ಲ. ಇದನ್ನೇ ನಮ್ಮ ದೇಶೀಯ ಇತಿಹಾಸಕರಾರರೂ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಯಾರೂ ಸಹ ಸತ್ಯ ಹೇಳುವ ಧೈರ್ಯ ಮಾಡಲಿಲ್ಲ. ಹಾಗಿದ್ದರೆ ತಂಜಾವೂರು, ವೆಲ್ಲೂರನ್ನು ಕರ್ನಾಟಿಕ್ ಅಂತ ಯಾಕೆ ಕರೆಯುಾಕ್ತರೆ? ಅಂದಮೇಲೆ ಕರ್ನಾಟಕ ಅಂತ ಮೊದಲೆ ಇತ್ತು ಅಲ್ಲವೆ. ಅದನ್ನು ಡಿ. ದೇವರಾಜ ಅರಸು 1973ರ ನವೆಂಬ 1 ರಂದು ನಾಮಕರಣ ಮಾಡಿದ್ದು.
ಪ್ರಶ್ನೆ: ಅಂದರೆ ನೀವು ಹೇಳಿವಂತೆ, ಕರ್ನಾಟಕ ಸಾಮ್ರಾಜ್ಯ ಎಂದು ಕರೆಯಲು ಈಗಿರುವ ಅಡೆತಡೆ ಏನು?
ವಸುಂಧರಾ: ನಾನು ಸಂಶೋಧನೆ ನಡೆಸಿ ಬರೆದ ‘ವಿಜಯನಗರ (1977 ಮೊದಲ ಮುದ್ರಣ, ಪರಿಷ್ಕೃ ಮುದ್ರಣ 1999)’ ಕೃತಿಯಲ್ಲಿಯೂ ವಿಜಯನಗರ ಒಂದು ರಾಜಧಾನಿ, ಕರ್ನಾಟಕ ಎಂಬುದು ಸಾಮ್ರಾಜ್ಯವಾ ಗಿತ್ತು ಎಂದೇ ಹೇಳಿದ್ದೇನೆ. ಈ ಕೃತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿಕೊಂಡುವಂತೆ ಸಾಹಿತಿ ಡಾ.ಎಂ.ಎಂ. ಕಲ್ಬುರ್ಗಿ ಅವರಿಗೂ ಕೋರಿಕೊಂಡಿದ್ದೆ. ಅವರೂ ರಾಬರ್ ಸಿವೆ ಅವರದನ್ನೇ ಉಲ್ಲೇಖಿಸಿ ಸುಮ್ಮನಾದರು. ನಾವು ಸತ್ಯ ಹೇಳಲು ಹೊರಟರೆ ನಂಬದ ಮಟ್ಟಿಗೆ ಬ್ರಿಟಿಷ್ ಇತಿಹಾಸಜ್ಞರು ವಿಷಯ ತುಂಬಿ ಹೋಗಿದ್ದಾರೆ. ಗಳಗನಾಥರು ‘ಕನ್ನಡಿಗರ ಕರ್ಮಕಥೆ’ ಪುಸ್ತಕದಲ್ಲಿ ಇದನ್ನೇ ಉಲ್ಲೇಖಿಸಿದ್ದಾರೆ. ಏನು ಮಾಡುವುದು?
ಪ್ರಶ್ನೆ: ವಿಜಯನಗರ ಸ್ಥಾಪನೆಗೆ ಯಾರು ಕಾರಣ ಕರ್ತರು ? ವಿದ್ಯಾರಣ್ಯರೇ ಆದ್ಯಕರ್ತರೆ?
ವಸುಂಧರಾ: ನಾನು ಸಂಶೋಧನೆ ನಡೆಸಿದ ಪ್ರಕಾರ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಲ್ಲ. ಅವರ ವಿದ್ಯಾಗುರು ವಿದ್ಯಾತೀರ್ಥರು ಕಾರಣಕರ್ತರು. ಹುಕ್ಕಾ- ಬುಕ್ಕಾ (ಇಂಗ್ಲಿಷಿಗೆ ತರ್ಜುಮೆಯಾಗುವಾಗ ಹಕ್ಕಾ- ಬುಕ್ಕಾ ಎಂದಾಗಿದೆ) 1336ರಲ್ಲಿ ಸ್ಥಾಪಿಸಿದರು. ಹೊಯ್ಸಳರ 3ನೇ ಬಲ್ಲಾಳನ ಕಾಲದಲ್ಲಿ ವಿದ್ಯಾತೀರ್ಥರು ದಕ್ಷಿಣ ಪ್ರಾಂತ್ಯಕ್ಕೆ ಒಂದೇ ಹಿಂದವೀ ಸಾಮ್ರಾಜ್ಯ ಇರಬೇಕೆಂಬ ಕಾರಣಕ್ಕೆ ಬನ್ನಿಮರದ ಕೆಳಗೆ ಕುಳಿತು ಚರ್ಚೆ ಮಾಡಿ ಈ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ. ಹಲವು ಮಂದಿ ಇತಿಹಾಸಕಾರರಿಗೆ ಇದು ಕರ್ನಾಟಕ ಸಾಮ್ರಾಜ್ಯ ಎಂದು ತಿಳಿದಿದ್ದರೂ ಅವರಾರು ಹೇಳುವ ಧೈರ್ಯ ಮಾಡದೆ, ವಿಜಯನಗರ ಸಾಮ್ರಾಜ್ಯ ಎಂದೇ ಕರೆದುಕೊಂಡು ಬಂದರು. ಬಿ.ಎ. ಸಾಲತೊರೆ, ಪಿ.ಬಿ. ದೇಸಾಯಿ, ರಾವ ಶರ್ಮಾ ಕೂಡ ವಿಜಯನಗರ ಅಂತಾನೆ ಕರೆದಿದ್ದಾರೆ. ಡಾ. ಶ್ರೀನಿವಾಸ ರಿಟ್ಟಿ ಅವರು 30 ಶಾಸನಗಳನ್ನು ಪ್ರಸ್ತಾಪಿಸಿ ಕರ್ನಾಟಕ ಸಾಮ್ರಾಜ್ಯ ಎಂದೇ ಕರೆದಿದ್ದಾರೆ!
ಪ್ರಶ್ನೆ: ಹಂಪಿಯ ಬಗ್ಗೆ ನೀವೇನು ಹೇಳುವಿರಿ?
ವಸುಂಧರಾ: ಹಂಪಿಯಲ್ಲಿ ದೊರಕಿದ ಶಾಸನಗಳನ್ನು ಓದುಾಕ್ತ ಹೋದೆಂತಲ್ಲ ಕರ್ನಾಟಕ ಸಾಮ್ರಾಜ್ಯದ ವಿಸ್ತಾರ ತಿಳಿಯುತ್ತದೆ. ಈಗ ಪೂಜಿಸುವ ಭುವನೇಶ್ವರಿ ತಾಯಿಯ ಬಗ್ಗೆ ಕರ್ನಾಟಕ ಸಾಮ್ರಾಜ್ಯದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಸರಸ್ವತಿಯ ಕೈಯಲ್ಲೂ ಪಾಶಂಕುಶವಿದೆ. ಭುವನೇಶ್ವರಿಯ ಕೈಯಲ್ಲೂ ಪಾಶಂಕುಶವಿದೆ. ನಮ್ಮ ಜನ ಸರಸ್ವತಿಯನ್ನೇ ಭುವನೇಶ್ವರಿ ಎಂಬುದಾಗಿ ಪರಿವರ್ತಿಸಿದ್ದಾರೆ. ರಾಬರ್ ಸಿವೆ ಸಂಶೋಧನೆ ನಡೆಸಿ ‘ಎ ಫೆದಗಾಟನ್ ಎಂಪೈರ್ ವಿಜಯನಗರ’ ಕೃತಿ ಬರೆದರೂ, ಕನ್ನಡ ಮತ್ತು ತೆಲುಗು ಶಾಸನಗಳಲ್ಲಿ ವಿಜಯನಗರ ಸಾಮ್ರಾಜ್ಯ ಅಂತ ಎಲ್ಲೂ ಇಲ್ಲ. ಅಲ್ಲೆಲ್ಲ ಇರುವುದು ಕರ್ನಾಟಕ ಸಾಮ್ರಾಜ್ಯ ಅಂತಾನೆ. ನಾನು ಪ್ರಾಗೈತಿಸಿದ ದಾಖಲೆಗಳ ಆಧಾರದ ಮೇಲೆ ಈ ಮಾತುಗಳನ್ನು ಆಡುತ್ತಿದ್ದೇನೆ. ಹಂಪಿ ಒಂದು ಕೊಂಪೆ ಎನ್ನುವ ಕಾಲ ಹೋಗಿ ಈಗ ಪ್ರವಾಸಿಗರು ಹೆಚ್ಚೆಚ್ಚು ಜನರು ಬರುತ್ತಿದ್ದಾರೆ. ನಾನು ಸಂಶೋಧನೆ ನಡೆಸುವಾಗ ಅಲ್ಲಿ ಜನರೆ ತಿರುಗಾಡುತ್ತಿರಲಿಲ್ಲ.
ಪ್ರಶ್ನೆ: ಸರ್ಕಾರ ಇತ್ತೀಚಿಗೆ ಹಂಪಿ ಉತ್ಸವ ಹಮ್ಮಿಕೊಳ್ಳುತ್ತಿದೆ. ಸರ್ಕಾರಕ್ಕೆ ನೀವು ನೀಡುವ ಸಲಹೆ?
ವಸುಂಧರಾ: ನಾನು ಮೊದಲೆ ಹೇಳಿದ ಹಾಗೆ ಹಂಪಿ ಒಂದು ಕೊಂಪೆ ಎನ್ನುವ ಕಾಲವೊಂದಿತ್ತು. ನಾನು, ನನ್ನ ಪತಿ ಇಬ್ಬರು ಸಹ ಸಂಶೋಧಕರು, ಇಬ್ಬರು ಸಹಾಯಕರು ಮತ್ತುಒಬ್ಬ ಡ್ರೈವರ್ ಇಷ್ಟೇ ಜನ ಹಂಪಿಯಲ್ಲಿ ಸುತ್ತಾಡಿದ್ದೇವೆ. ಶಾಸನಗಳನ್ನು ದಿನಗಟ್ಟಲೆ ಓದಲು ಕುಳಿತಾಗ ಅಲ್ಲಿನ ಜನ ಇವೆಲ್ಲ ಯಾಕೆ ಮಾಡುತ್ತೀರಿ, ಏನು ಪ್ರಯೋಜನ ಎನ್ನುತ್ತಿದ್ದರು. ಬೆರಳೆಣಿಕೆಯಷ್ಟು ಪ್ರವಾಸಿಗರು ಬಂದು ಹೋಗುತ್ತಿದ್ದರು. ಈಗ ಕಾಲ ಬದಲಾಗಿ ಹಂಪಿಗೆ ಹೆಸರು ಬಂದಿದೆ. ಹಂಪಿ ಉತ್ಸವವು ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಹೇಳುವುದು, ಈ ಹಂಪಿ ಕರ್ನಾಟಕದಲ್ಲಿ ಉಳಿಯಲು ಟಿಪ್ಪು ಸುಲ್ತಾನ ಕಾರಣ. ಅತ್ತಾ ಮಹಾರಾಷ್ಟ್ರದವರು ಇತ್ತಾ ಹೈದರಾಬಾದ್ ನಿಜಾಮರು ಹಂಪಿಯನ್ನು ತಮ್ಮ ವ್ಯಾಪ್ತಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುವಾಗ ಹಂಪಿ ಕರ್ನಾಟಕದ ಆಸ್ತಿ ಎಂಬಂತೆ ಟಿಪ್ಪು ಸುಲ್ತಾನ್ ನಮ್ಮಲ್ಲೆ ಉಳಿಸಿಕೊಂಡರು. ಮುಂದಿನ ದಿನಗಳಲ್ಲಿ ಟಿಪ್ಪು ಸುಲ್ತಾನ್ ನೆನಪಿನಲ್ಲಿ ಹಂಪಿ ಉತ್ಸವ ನಡೆಯಲಿ ಎಂದಷ್ಟೇ ಸರ್ಕಾರಕ್ಕೆ ಸಲಹೆ ನೀಡುತ್ತೇನೆ.
(ಭಾನುಪ್ರಭದ ವಿಶೇಷ ಲೇಖನ)