ಕಾಡಾನೆ ದಾಳಿ ನಿಯಂತ್ರಣಕ್ಕೆ ಬಂದಿದೆ ಉಕ್ಕಿನ ತಂತಿ ಬೇಲಿ..!

By Kannadaprabha NewsFirst Published Jun 23, 2022, 11:18 AM IST
Highlights

*  ನಾಗರಹೊಳೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗ
*  ಮಾಮೂಲಿ ತಂತಿ ಬೇಲಿಯಂತೆ ಕಂಡರೂ ಸುಲಭವಾಗಿ ಮುರಿಯಲ್ಲ
* ಈ ಬೇಲಿ ಕಾಡಂಚಿನ ಗ್ರಾಮಗಳಿಗೆ ಆನೆಗಳು ದಾಳಿಯಿಡುಯುವುದನ್ನು ತಡೆಯುವಲ್ಲಿ ಯಶಸ್ವಿ
 

ಹುಣಸೂರು(ಜೂ.23):  ನಾಡಿಗೆ ಲಗ್ಗೆ ಇಡುವ ಕಾಡಾನೆಗಳ ನಿಯಂತ್ರಣಕ್ಕೆ ರಾಜ್ಯದಲ್ಲೇ ಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ‘ಸ್ಟೀಲ್‌ ವಯರ್‌ ರೋಪ್‌ ಬ್ಯಾರಿಕೇಡ್‌’ (ಉಕ್ಕಿನ ತಂತಿ ಹಗ್ಗದ ಬೇಲಿ) ಅಳವಡಿಸಲಾಗುತ್ತಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಈ ವಿಶೇಷ ಬ್ಯಾರಿಕೇಡ್‌ ಅನ್ನು ಅಳವಡಿಕೆ ಮಾಡಲಾಗಿದೆ. ಕೆಲಕಡೆ ರೈಲ್ವೆ ಹಳಿ ಬ್ಯಾರಿಕೇಡ್‌ಗಳನ್ನು ಆನೆಗಳು ದಾಟಿ ನಾಡಿನತ್ತ ಬರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸ್ಟೀಲ್‌ ವೈಯರ್‌ ರೋಪ್‌ ಬ್ಯಾರಿಕೇಡ್‌ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದೆ. ಆನೆಗಳ ತಡೆಗೆ ಈ ಬ್ಯಾರಿಕೇಡ್‌ ಹೇಗೆ ಸಹಕಾರಿಯಾಗಲಿದೆ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ಬುಧವಾರ ಅಧಿಕಾರಿಗಳು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಕುಶಾಲನಗರ: ಕಾಡಾನೆ ಹಾವಳಿ ತಡೆಗೆ ‘ವೈಲ್ಡ್‌ ಎಲಿಫೆಂಟ್‌ ಫುಡ್‌ ಪ್ಯಾಕೇಜ್‌’

ಕಡಿಮೆ ವೆಚ್ಚ:

ಕೊಡಗು ಸೇರಿ ಹಲವೆಡೆ ಈಗಾಗಲೇ ರೈಲ್ವೆ ಹಳಿಗಳ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇದೀಗ ಹಳಿಗಳ ಕೊರತೆ ಹಾಗೂ ಹಳಿಗಳ ದರ ದುಬಾರಿಯಾಗಿ ಪರಿಣಮಿಸಿರುವುದರಿಂದ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ರೋಪ್‌ ಬ್ಯಾರಿಯರ್‌ ಅಳವಡಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ 13 ಅಡಿ ಉದ್ದದ 1.5 ಟನ್‌ ತೂಕದ ಸಿಮೆಂಟ್‌ ಕಂಬಗಳನ್ನು ನಿರ್ಮಿಸಿ ಅದನ್ನು ಭೂಮಿಯಿಂದ 5 ಅಡಿ ಆಳದಲ್ಲಿ ನೆಡಲಾಗುತ್ತದೆ. ನಂತರ ಅದಕ್ಕೆ ಸ್ಟೀಲ್‌ ತಂತಿಗಳನ್ನು ಜೋಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಮಿಳುನಾಡು ಮಾದರಿ:

ಕರ್ನಾಟಕದಲ್ಲಿ ಈ ರೀತಿಯ ಬೇಲಿ ಹೊಸತಾದರೂ ತಮಿಳುನಾಡಿನ ಜವಳಗಿರಿ ಅರಣ್ಯ ಪ್ರದೇಶದಲ್ಲಿ ಈ ರೀತಿಯ ಬೇಲಿಯನ್ನು ಅಳವಡಿಸಲಾಗಿದೆ. ಈ ಬೇಲಿ ಕಾಡಂಚಿನ ಗ್ರಾಮಗಳಿಗೆ ಆನೆಗಳು ದಾಳಿಯಿಡುಯುವುದನ್ನು ತಡೆಯುವಲ್ಲಿ ಅಲ್ಲಿ ಯಶಸ್ವಿಯಾಗಿವೆ.

ಕೊಡಗು: ಕಾಡಾನೆ ಹಾವಳಿ ತಪ್ಪಿಸಲು ಆನೆಗಳಿಗೆ ರೇಡಿಯೋ ಕಾಲರ್

ವಿಶೇಷತೆ ಏನು?

- ಮಾಮೂಲಿ ತಂತಿ ಬೇಲಿಯಂತೆ ಕಂಡರೂ ಸುಲಭವಾಗಿ ಮುರಿಯಲ್ಲ
- ರೈಲು ಹಳಿ ಬ್ಯಾರಿಕೇಡ್‌ಗೆ ಕಿ.ಮೀ.ಗೆ .1.50 ಕೋಟಿ ವೆಚ್ಚ ತಗುಲುತ್ತದೆ
- ಈ ರೀತಿಯ ಬ್ಯಾರಿಕೇಡ್‌ಗಳಿಗೆ ಕಿ.ಮೀ.ಗೆ .60 ಲಕ್ಷ ಖರ್ಚಾಗುತ್ತದೆ

ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಕಾಡಿನಿಂದ ನಾಡಿಗೆ ಆನೆಗಳ ದಾಳಿ ತಡೆಗೆ ರೈಲ್ವೆ ಹಳಿಗಳ ಬ್ಯಾರಿಕೇಡ್‌, ಸೋಲಾರ್‌ ತಂತಿ ಬೇಲಿ ಸೇರಿ ಹಲವು ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಂಡಿದೆ. ಈಗ ಸ್ಟೀಲ್‌ ವೈಯರ್‌ ರೋಪ್‌ ಬ್ಯಾರಿಕೇಡ್‌ ಅಳವಡಿಕೆ ಮಾಡಿದ್ದು, ಇದರಿಂದ ಆನೆಗಳು ನಾಡಿಗೆ ಆಗಮಿಸುವುದನ್ನು ತಡೆಯಲು ಸಹಕಾರಿಯಾಗುತ್ತದೆ ಎಂದರು.
 

click me!