ಕೇಶವಾನಂದ ಭಾರತಿ ಐತಿಹಾಸಿಕ ತೀರ್ಪು ಕನ್ನಡದಲ್ಲೂ ಲಭ್ಯ, ಈ ತೀರ್ಪಿಗೆ ಏಕೆ ಅಷ್ಟೊಂದು ಮಹತ್ವ

By Suvarna NewsFirst Published Dec 8, 2023, 8:55 AM IST
Highlights

 ಕೇಶವಾನಂದ ಭಾರತಿ ಐತಿಹಾಸಿಕ ತೀರ್ಪಿನ ಸಾರಾಂಶ ಇದೀಗ ಕನ್ನಡದಲ್ಲೂ ಲಭ್ಯ. ಸಂವಿಧಾನದ ಮೂಲಸ್ವರೂಪ ಬದಲಿಸಲಾಗದು ಎಂಬ ತೀರ್ಪು

ನವದೆಹಲಿ (ಡಿ.8): ಸಂಸತ್ತು, ಸಂವಿಧಾನಕ್ಕೆ ತಿದ್ದುಪಡಿ ತರಬಹುದೇ ಹೊರತೂ ಅದರ ತತ್ವ ಮತ್ತು ಮೂಲರಚನೆಯನ್ನು ಬದಲಾವಣೆ ಮಾಡುವಂತಿಲ್ಲ ಎಂಬ ಕುರಿತು 1973ರಲ್ಲಿ ಸುಪ್ರೀಂಕೋರ್ಟ್‌ನ 13 ಸದಸ್ಯರ ಸಾಂವಿಧಾನಿಕ ಪೀಠ ನೀಡಿದ್ದ ಐತಿಹಾಸಿಕ ತೀರ್ಪಿನ ಸಾರಾಂಶ ಇದೀಗ ಕನ್ನಡದಲ್ಲೂ ಲಭ್ಯವಿದೆ.

ತೀರ್ಪು ಪ್ರಕಟವಾಗಿ 50ನೇ ವರ್ಷಾಚರಣೆ ವೇಳೆಯೇ ತೀರ್ಪಿನ ಸಾರಾಂಶವನ್ನು ಕನ್ನಡ ಸೇರಿದಂತೆ 10 ಭಾಷೆಗಳಿಗೆ ಭಾಷಾಂತರ ಮಾಡಲಾಗಿದ್ದು, ಅದರ ವಿಡಿಯೋ ಬಿಡುಗಡೆ ಮಾಡಲಾಗಿದೆ.

Latest Videos

ಈ ತೀರ್ಪು ಸಂಸತ್ತಿನ ಅಧಿಕಾರಕ್ಕೆ ಕಡಿವಾಣ ಹಾಕುವ ಜೊತೆಗೆ ಸಂಸತ್ತು ನಿಯಮ ಮೀರಿ ತೆಗೆದುಕೊಂಡ ನಿರ್ಣಯವನ್ನು ಮರುಪರಿಶೀಲಿಸುವ ಅಧಿಕಾರವನ್ನು ಸುಪ್ರೀಂಕೋರ್ಟ್‌ಗೆ ನೀಡಿತ್ತು.

ಜಿಯೋ ಏರ್‌ಫೈಬರ್‌ಗೆ ಬೂಸ್ಟರ್ ಪ್ಲಾನ್ ಘೋಷಿಸಿದ ಆಕಾಶ್ ಅಂಬಾನಿ, ಅತ್ಯಂತ ಕಡಿಮೆ ದರಕ್ಕೆ 1000GB ಡೇಟಾ ಲಭ್ಯ!

ಈ ಕುರಿತು ಮಾಹಿತಿ ನೀಡಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ಕೇಶವಾನಂದ ಭಾರತಿ ತೀರ್ಪಿಗೆ 50 ವರ್ಷ ತುಂಬಿರುವ ಹೊತ್ತಿನಲ್ಲೇ ಅದರ ಮಾಹಿತಿಯು ಇನ್ನಷ್ಟು ಜನರಿಗೆ ತಲಪಲಿ ಎಂಬ ಉದ್ದೇಶದಿಂದ ನಾವು ಹೊಸ ವೆಬ್‌ಸೈಟ್‌ ಆರಂಭಿಸಿದ್ದೇವೆ. ಅದರಲ್ಲಿ 10 ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಿದ್ದಾರೆ.

ಎಲ್ಲಿ ಲಭ್ಯ?: ಗೂಗಲ್‌ನಲ್ಲಿ ದ ಬೇಸಿಕ್‌ ಸ್ಟ್ರಕ್ಚರ್ ಜಡ್ಜ್‌ಮೆಂಟ್‌ (The Basic Structure Judgement) ಎಂದು ಟೈಪ್ ಮಾಡಿದರೆ ಅಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ತೀರ್ಪಿನ ಪ್ರತಿ ಲಭ್ಯವಿದೆ. ವೆಬ್‌ಸೈಟ್‌ನ ಬಲಭಾಗದಲ್ಲಿ ವಿಡಿಯೋ ಎಂಬ ಭಾಗ ಇದ್ದು, ಅದನ್ನು ಕ್ಲಿಕ್‌ ಮಾಡಿದಲ್ಲಿ ವಿವಿಧ ಭಾಷೆಗಳಲ್ಲಿ ತೀರ್ಪಿನ ಮಾಹಿತಿ ಲಭ್ಯ.

ದೇಶದ ಸಂವಿಧಾನದ ಮೂಲ ವಿನ್ಯಾಸಕ್ಕೆ ತಿದ್ದುಪಡಿ ತರುವಂತಿಲ್ಲ ಎಂಬ ಐತಿಹಾಸಿಕ ‘ಕೇಶವಾನಂದ ಭಾರತಿ ಪ್ರಕರಣದ ತೀರ್ಪು’ ಪ್ರಕಟವಾಗಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಾನೂನು ಅಭ್ಯಾಸಿಗಳಿಗೆ ಅನುಕೂಲವಾಗಲೆಂದು ಆ ಪ್ರಕರಣದ ಸಂಪೂರ್ಣ ವಾದ ಹಾಗೂ ವಿವರಗಳುಳ್ಳ ವೆಬ್‌ ಪುಟವನ್ನು ಸುಪ್ರೀಂಕೋರ್ಚ್‌ ಕಳೆದ ಎಪ್ರಿಲ್‌ನಲ್ಲಿ ಬಿಡುಗಡೆ ಮಾಡಿತ್ತು. ಸುಪ್ರೀಂಕೋರ್ಟ್ ವೆಬ್‌ಸೈಟಿನಲ್ಲಿ ಈ ಪುಟ ಲಭ್ಯವಿದೆ.

ಫಸ್ಟ್ ಟೈಂ ಶ್ರೀಮಂತರ ಪಟ್ಟಿ ಸೇರಿ ನಾರಾಯಣ ಮೂರ್ತಿ, ಪ್ರೇಮ್‌ಜಿ, ಮಜುಂದಾರ್-ಶಾ ಹಿಂದಿಕ್ಕಿದ ಬೆಂಗಳೂರು ಉದ್ಯಮಿ!

ಏನಿದು ಪ್ರಕರಣ:  ದೇಶದ ಸಂವಿಧಾನದಲ್ಲಿರುವ ಯಾವುದೇ ಅಂಶಗಳಿಗೆ ಬೇಕಾದರೂ ಸಂಸತ್ತು ತಿದ್ದುಪಡಿ ತರಬಹುದು ಎಂಬ ಅಭಿಪ್ರಾಯ 1973ರವರೆಗೂ ಇತ್ತು. ಆದರೆ, ಕಾಸರಗೋಡಿನ ಕೇಶವಾನಂದ ಭಾರತಿ(Kesavananda Bharati Case) ಸ್ವಾಮಿಗಳು ಭೂಸುಧಾರಣೆ ಕಾಯ್ದೆಯಡಿ ಕೇರಳ ಸರ್ಕಾರ ತಮ್ಮ ಮಠದ ಆಸ್ತಿ ವಶಪಡಿಸಿಕೊಳ್ಳಲು ಬಂದಾಗ ಧಾರ್ಮಿಕ ಹಕ್ಕಿನ ಪ್ರಶ್ನೆ ಮುಂದಿಟ್ಟು ಕೋರ್ಟ್ ಹೋಗಿದ್ದರು.

ಆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ 13 ನ್ಯಾಯಾಧೀಶರ ಪೀಠ 7:6 ಬಹುಮತದಲ್ಲಿ ಕೇಶವನಾಂದ ಸ್ವಾಮಿಗಳ ಪರ ತೀರ್ಪು ನೀಡಿತ್ತು. ಆ ತೀರ್ಪಿನಲ್ಲಿ ‘ಸಂವಿಧಾನಕ್ಕೆ ತಿದ್ದುಪಡಿ ತರಲು ಸಂಸತ್ತಿಗೆ ಅಧಿಕಾರ ಇದೆಯಾದರೂ, ಸಂವಿಧಾನದ ಮೂಲ ವಿನ್ಯಾಸವನ್ನು ರೂಪಿಸಿರುವ ಪ್ರಜಾಪ್ರಭುತ್ವ, ಮೂಲಭೂತ ಹಕ್ಕುಗಳು( fundamental rights ), ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರ ವಿಂಗಡಣೆ, ಜಾತ್ಯತೀತತೆ ಮುಂತಾದ ಸಂಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿ ತರುವಂತಿಲ್ಲ’ ಎಂದು ಹೇಳಲಾಗಿತ್ತು. ಅದು ‘ಮೂಲ ವಿನ್ಯಾಸ’ ತೀರ್ಪು ಅಥವಾ ‘ಮೂಲಭೂತ ಹಕ್ಕುಗಳ’ ತೀರ್ಪು ಎಂದು ಖ್ಯಾತಿ ಪಡೆದಿದೆ.

ಕೇಶವಾನಂದ ಭಾರತೀ ತೀರ್ಪು ಕುರಿತು ಗೋವಾ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ಉಪನ್ಯಾಸ
ಮಂಗಳೂರು: ಮಂಗಳೂರು ವಕೀಲರ ಸಂಘ, ಕೇಶವಾನಂದ ಭಾರತೀ ತೀರ್ಪು ಸುವರ್ಣ ಮಹೋತ್ಸವ ಸಂಘಟನಾ ಸಮಿತಿ ಮತ್ತು ಮಂಗಳೂರು ಎಸ್‌ಡಿಎಂ ಕಾನೂನು ಕಾಲೇಜು ಜಂಟಿ ಆಶ್ರಯದಲ್ಲಿ ‘ಕೇಶವಾನಂದ ಭಾರತಿ ತೀರ್ಪು ಮತ್ತು ಭಾರತೀಯ ಸಾಂವಿಧಾನಿಕ ಕಾನೂನಿನ ಬೆಳವಣಿಗೆ’ ಕುರಿತು ಡಿ.9 ರಂದು ಬೆಳಗ್ಗೆ 9.30 ಕ್ಕೆ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಗೋವಾ ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೆ ಅವರಿಂದ ಉಪನ್ಯಾಸ ನಡೆಯಲಿದೆ.

ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಪೃಥ್ವಿರಾಜ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ದೀಪ ಬೆಳಗುವರು. ನಿಟ್ಟೆ ವಿವಿ ಕುಲಾಧಿಪತಿ ಎನ್‌.ವಿನಯ ಹೆಗ್ಡೆ, ಉಜಿರೆಯ ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್‌. ಮುಖ್ಯ ಅತಿಥಿಗಳಾಗಿರುವರು ಎಂದರು.

ಸುಪ್ರೀಂ ಕೋರ್ಚ್‌ನ 13 ನ್ಯಾಯಾಧೀಶರ ಪೀಠ 66 ದಿನಗಳ ಅತಿದೊಡ್ಡ ವಿಚಾರಣೆಯ ನಂತರ 24 ಏಪ್ರಿಲ್‌ 1973 ರಂದು ಕೇಶವಾನಂದ ಭಾರತಿ ಅವರ ಪ್ರಕರಣವನ್ನು ಇತ್ಯರ್ಥಗೊಳಿಸಿತು. ಸಂಸತ್ತು ಸಂವಿಧಾನದ ತಿದ್ದುಪಡಿಯ ಮೂಲಕ ಸಂವಿಧಾನದ ಮೂಲಭೂತ ರಚನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ತತ್ವವನ್ನು ಬಲವಾಗಿ ಪ್ರತಿಪಾದಿಸಿದ ಕೇಶವಾನಂದ ಭಾರತಿ ತೀರ್ಪು ಪ್ರಕರಣ ನ್ಯಾಯಶಾಸ್ತ್ರ ಕ್ಷೇತ್ರದಲ್ಲಿ ಒಂದು ದೊಡ್ಡ ಮೈಲಿಗಲ್ಲು ಎಂದು ಅವರು ಹೇಳಿದರು. ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಎಣ್ಮಕಜೆ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ತಾರನಾಥ ಇದ್ದರು.

click me!