ರೇಪ್ ಸಂತ್ರಸ್ತೆಗೆ ನ್ಯಾಯ ಕೊಡಿ: 20 ನಿಮಿಷ ಬಾಲಾಜಿ ದೇಗುಲ ಬಾಗಿಲು ಮುಚ್ಚಿ ಪ್ರತಿಭಟನೆ!

By Web DeskFirst Published Dec 1, 2019, 12:54 PM IST
Highlights

ಹೈದರಾಬಾದ್‌ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ| ದೇಶದಾದ್ಯಂತ ಪ್ರತಿಭಟನೆ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ| ಹೈದರಾಬಾದ್ ಬಾಲಾಜಿ ದೇಗುಲದ ಬಾಗಿಲು ಮುಚ್ಚಿ ಪ್ರತಿಭಟನೆ

ಹೈದರಾಬಾದ್[ಡಿ.01]: ಹೈದರಾಬಾದ್‌ನಲ್ಲಿ ವೈದ್ಯೆ ಮೇಲೆ ನಡೆದ ರೇಪ್ ಹಾಗೂ ಕೊಕೆ ಪ್ರಕರಣಕ್ಕೆ ಇಡೀ ದೇಶವೇ ಒಗ್ಗೂಡಿ ನ್ಯಾಯ ಒದಗಿಸುವಂತೆ ಒತ್ತಾಯಿಸುತ್ತಿದೆ. ಆರೋಪಿಯೊಬ್ಬನ ತಾಯಿಯೂ ಸಂತ್ರಸ್ತೆ ಪರ ಧ್ವ ನಿ ಎತ್ತಿದ್ದು, ಮಗನನ್ನು ಸುಟ್ಟು ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ನಡುವೆ ಚಿಲ್ಕೂರ್‌ನ ಬಾಲಾಜಿ ದೇವಸ್ಥಾನದಲ್ಲೂ ಶನಿವಾರದಂದು 20 ನಿಮಿಷಗಳ ಕಾಲ ಪ್ರತಿಭಟನೆ ನಡೆದಿದೆ.

ಹೌದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು 20 ನಿಮಿಷಗಳ ಕಾಲ ದೇವಸ್ಥಾನದ ಬಾಗಿಲು ಮುಚ್ಚಿ, ಸಂತ್ರಸ್ತೆ ಪರ ಪ್ರತಿಭಟನೆ ನಡೆಸಿದರು. ಈ ವೇಳೆ ದೇವಸ್ಥಾನಕ್ಕೆಂದು ಬಂದ ಭಕ್ತರನ್ನು ಒಳ ಹೋಗದಂತೆ ಅರ್ಚಕರು ತಡೆದಿದ್ದಾರೆ. ಕಾರಣ ತಿಳಿದ ಭಕ್ತರೂ ಈ ಪ್ರತಿಭಟನೆಯಲ್ಲಿ ಪಾಗ್ಲೊಂಡಿದ್ದಾರೆ. ಇಷ್ಟೇ ಅಲ್ಲದೇ ಅರ್ಚಕರು ದೇವಸ್ಥಾನದ ಹೊರಗೇ ಮಹಿಳೆಯರ ಹಾಗೂ ಹೆಣ್ಮಕ್ಕಳ ಸುರಕ್ಷತೆಗಾಗಿ 'ಮಹಾ ಪ್ರದಕ್ಷಿಣಂ' ಪ್ರಾರ್ಥನೆ ಮಾಡಿದ್ದಾರೆ.

'ನನ್ನ ಮಗ ಮಾಡಿದ್ದು ಕ್ಷಮಿಸಲಾರದ ತಪ್ಪು: ವೈದ್ಯೆಯನ್ನು ಕೊಂದಂತೆ ಆತನನ್ನೂ ಸುಟ್ಟಾಕಿ'

ಏನಿದು ಪ್ರಕರಣ?:

ಸಂತ್ರಸ್ತ 27 ವರ್ಷದ ಪಶುವೈದ್ಯೆ ಶಂಶಾಬಾದ್‌ನಲ್ಲಿರುವ ತನ್ನ ಮನೆಯಿಂದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಗೆ ಬುಧವಾರ ಕರ್ತವ್ಯಕ್ಕೆ ದ್ವಿಚಕ್ರ ವಾಹನದ ಮೂಲಕ ತೆರಳಿದ್ದಳು. ಸಂಜೆ ಕರ್ತವ್ಯದಿಂದ ವಾಪಸು ಬರುವಾಗ ಗಚ್ಚಿಬೌಲಿಯಲ್ಲಿ ಚರ್ಮರೋಗ ತಜ್ಞರ ಭೇಟಿ ಮಾಡಬೇಕಿತ್ತು. ಹೀಗಾಗಿ ಸಂಜೆ 6ಕ್ಕೆ ತೊಂಡುಪಲ್ಲಿ ಎಂಬಲ್ಲಿನ ಟೋಲ್‌ ಪ್ಲಾಜಾದಲ್ಲಿ ತನ್ನ ದ್ವಿಚಕ್ರ ವಾಹನ ನಿಲ್ಲಿಸಿದ ಈಕೆ, ಅಲ್ಲಿಂದ ಬಾಡಿಗೆ ಕಾರಿನಲ್ಲಿ ಗಚ್ಚಿಬೌಲಿಗೆ ತೆರಳಿದಳು. ಆದರೆ ರಾತ್ರಿ 9ರ ಸುಮಾರಿಗೆ ಟೋಲ್‌ ಪ್ಲಾಜಾಗೆ ಮರಳುವ ವೇಳೆ ಆಕೆಯ ಸ್ಕೂಟರ್‌ ಪಂಕ್ಚರ್‌ ಆಗಿತ್ತು.

ಈ ವೇಳೆ ಸ್ಥಳದಲ್ಲಿಯೇ ಇದ್ದ ಕೆಲ ಟ್ರಕ್‌ ಚಾಲಕರು ಹಾಗೂ ಕ್ಲೀನರ್‌ಗಳು, ‘ನಿಮ್ಮ ವಾಹನದ ಪಂಕ್ಚರ್‌ ಹಾಕಿಸಿಕೊಡುತ್ತೇವೆ’ ಎಂದು ಸಹಾಯಕ್ಕೆ ಧಾವಿಸಿದ್ದರು. ಈ ಪೈಕಿ ಒಬ್ಬ ಸ್ಕೂಟರ್‌ ಅನ್ನು ಸಮೀಪದ ಪಂಕ್ಚರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದ. ಈ ವೇಳೆ, ತನ್ನ ಸೋದರಿಗೆ ಕರೆ ಮಾಡಿದ ಪಶುವೈದ್ಯೆ, ‘ನನ್ನ ಗಾಡಿ ಪಂಕ್ಚರ್‌ ಆಗಿದೆ. ಇಲ್ಲೊಬ್ಬರು ಬಂದು ವಾಹನವನ್ನು ಪಂಕ್ಚರ್‌ ಶಾಪ್‌ಗೆ ತೆಗೆದುಕೊಂಡು ಹೋಗಿದ್ದಾರೆ. ನನ್ನ ಸುತ್ತ ಕೆಲವು ಟ್ರಕ್‌ ಡ್ರೈವರ್‌ಗಳಿದ್ದು, ಅವರನ್ನು ನೋಡಿ ನನಗೆ ಭಯವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಳು. ಈ ವೇಳೆ ‘ಗಾಡಿಯನ್ನು ಟೋಲ್‌ ಪ್ಲಾಜಾದಲ್ಲೇ ಬಿಡು. ಬಾಡಿಗೆ ಕಾರಿನಲ್ಲಿ ಮನೆಗೆ ಮರಳು’ ಎಂದು ಸೂಚಿಸಿ ಸೋದರಿ ಫೋನ್‌ ಇಟ್ಟಳು. ಇದಾದ ಕೆಲವು ಹೊತ್ತಿನ ಬಳಿಕ ಮತ್ತೆ ಸೋದರಿ ಪಶುವೈದ್ಯೆಗೆ ಕರೆ ಮಾಡಿದಾಗ, ಆಕೆಯ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು.

ವೈದ್ಯೆ ಮೇಲೆ ರೇಪ್: ಸಂತ್ರಸ್ತೆ ತಂದೆಯನ್ನು ಠಾಣೆಯಿಂದ ಠಾಣೆಗೆ ಅಲೆಸಿದ್ದ ಪೊಲೀಸರು!

ಇದೇ ಸಂದರ್ಭ ಬಳಸಿಕೊಂಡ ಟ್ರಕ್‌ ಚಾಲಕರು ಹಾಗೂ ಕ್ಲೀನರ್‌ಗಳು, ಪಶುವೈದ್ಯೆಯನ್ನು ಟೋಲ್‌ ಪ್ಲಾಜಾ ಸಮೀಪದ ನಿರ್ಜನ ಕೋಣೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು 25 ಕಿ.ಮೀ. ದೂರದ ಚಾತನಪಲ್ಲಿ ಎಂಬಲ್ಲಿಗೆ ಸಾಗಿಸಿ, ಅದನ್ನು ಶಾದ್‌ನಗರ ಪ್ರದೇಶದ ಹೈದರಾಬಾದ್‌-ಬೆಂಗಳೂರು ಹೈವೇ ಬ್ರಿಜ್‌ ಕೆಳಗೆ ಎಸೆದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ನಡುವೆ ಪಶುವೈದ್ಯೆ ನಾಪತ್ತೆಯಾಗಿದ್ದರಿಂದ ಆತಂಕಿತರಾದ ಆಕೆಯ ಕುಟುಂಬದವರು 11 ಗಂಟೆ ಸುಮಾರಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ಹುಡುಕಾಟ ನಡೆಸಿದಾಗ ಶಾದ್‌ನಗರ ಬ್ರಿಜ್‌ ಕೆಳಗೆ ಗುರುವಾರ ಸುಟ್ಟಮೃತದೇಹ ಪತ್ತೆಯಾಗಿದೆ.

ಉದ್ದೇಶಪೂರ್ವಕ ಪಂಕ್ಚರ್‌:

‘ಬಂಧಿತ ನಾಲ್ವರೂ ದುರುಳರು ಉದ್ದೇಶಪೂರ್ವಕವಾಗಿ ಪಶುವೈದ್ಯೆಯ ದ್ವಿಚಕ್ರವಾಹನವನ್ನು ಪಂಕ್ಚರ್‌ ಮಾಡಿದ್ದರು ಎಂದು ದೃಢಪಟ್ಟಿದೆ. ಬಳಿಕ ಸಹಾಯ ಮಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು’ ಎಂದು ಪೊಲೀಸರು ಹೇಳಿದ್ದಾರೆ.

ಬಿಡಿ ಒಳಗೆ: ಅತ್ಯಾಚಾರ ಆರೋಪಿಗಳಿರುವ ಜೈಲಿನ ಮುಂಭಾಗದಲ್ಲಿ ಜನಾಕ್ರೋಶ!

ಸಿಸಿಟೀವಿಯಲ್ಲಿ ಸುಳಿವು:

‘ಟೋಲ್‌ನಾಕಾದ ಸಿಸಿಟೀವಿಯನ್ನು ಪೊಲೀಸರು ಪರಿಶೀಲಿಸಿದಾಗ, ಗಾಡಿ ರಿಪೇರಿ ಮಾಡಿಸಿಕೊಡುವ ನೆಪದಲ್ಲಿ ನಾಲ್ವರು ಬಂದಿದ್ದು ಕಂಡುಬಂದಿದೆ. ಇದರ ಜಾಡನ್ನು ಹಿಡಿದು ಪೊಲೀಸರು ಶೋಧಿಸಿದಾಗ ಇಬ್ಬರು ಟ್ರಕ್‌ ಚಾಲಕರು ಹಾಗೂ ಇಬ್ಬರು ಕ್ಲೀನರ್‌ಗಳನ್ನು ಬಂಧಿಸಿದ್ದಾರೆ. ಇವರೆಲ್ಲರೂ ಕೃತ್ಯ ಎಸಗಿದಾಗ ಪಾನಮತ್ತರಾಗಿದ್ದು ಹಾಗೂ ಸಾಮೂಹಿಕ ಅತ್ಯಾಚಾರ ನಡೆಸಿದ್ದು ದೃಢಪಟ್ಟಿದೆ’ ಎಂದು ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿ.ಸಿ. ಸಜ್ಜನರ ಹೇಳಿದರು.

ವೈದ್ಯೆ ಮೇಲೆ ಅತ್ಯಾಚಾರ, ಕೊಲೆ: ಈವರೆಗೆ ಏನೇನಾಯ್ತು? ಇಲ್ಲಿದೆ ಎಲ್ಲಾ ಸುದ್ದಿಗಳು

click me!