Hijab Case: ಹಿಂದುಗಳು ಬಂದು ಕೋರ್ಟ್‌, ಇಂಡಿಯಾಗೇಟ್‌ನಲ್ಲಿ ಹೋಮ ಮಾಡ್ತೀನಿ ಅಂದ್ರೆ ಏನಾಗಬಹುದು?

By Santosh NaikFirst Published Sep 21, 2022, 7:14 PM IST
Highlights

ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣದ ವಿಚಾರಣೆ 9ನೇ ದಿನಕ್ಕೆ ಮುಂದುವರಿದಿದೆ. ಬುಧವಾರ ಸರ್ಕಾರಿ ಪರ ವಕೀಲರು ತಮ್ಮ 2ನೇ ದಿನದ ವಾದ ಮಂಡಿಸಿದರು. ಈ ವೇಳೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಾದ ಮಾಡಿದ್ದ ಎಜಿ ಪ್ರಭುಲಿಂಗ ನಾವದಗಿ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ವಾದ ಮಂಡಿಸಿದರು.
 

ನವದೆಹಲಿ (ಸೆ. 21): ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಪ್ರಕರಣದ ವಿಚಾರಣೆಯ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ ನಟರಾಜ್ ಅವರಿಗೆ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮಹತ್ವದ ಪ್ರಶ್ನೆ ಮಾಡಿದರು. ಶಾಲೆಗಳಲ್ಲಿ ಹಿಜಾಬ್‌ ಧರಿಸಲು ವಿರೋಧಿಸುವ ನೀವು, ಸಾರ್ವಜನಿಕ ಸ್ಥಳಗಳಲ್ಲಿ ಅದಕ್ಕೆ ತೊಂದರೆ ಇಲ್ಲ ಎನ್ನುತ್ತಿದ್ದೀರಿ. ಹಾಗಿದ್ದಾಗ ಶಾಲೆಗಳಲ್ಲಿ ಏಕೆ ಇದಕ್ಕೆ ವಿರೋಧ ವ್ಯಕ್ತಪಡಿಸಬೇಕು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಹಿರಿಯ ವಕೀಲ ಕೆಎಂ ನಟರಾಜ್‌ ಮಹತ್ವದ ಉತ್ತರ ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳ ವಿಷಯಕ್ಕೆ ಬಂದರೆ, ಸಾರ್ವಜನಿಕರು ಒಂದಾಗಬಹುದು. ಸಾಂವಿಧಾನಿಕ ನೀತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿರ್ಬಂಧಗಳನ್ನು ಈ ವೇಳೆ ಒಪ್ಪಿಕೊಳ್ಳಬೇಕಾಗುತ್ತದೆ. ನಾಳೆ ಒಬ್ಬ ವ್ಯಕ್ತಿ ಬರುತ್ತಾರೆ. ಹಿಜಾಬ್‌ ನನ್ನ ಸಂಪೂರ್ಣ ಹಕ್ಕು. ಹಿಜಾಬ್‌ ಧರಿಸಿಕೊಂಡೇ, ನನ್ನ ಮುಖವನ್ನು ತೋರಿಸದೆಯೇ ಏರ್‌ಪೋರ್ಟ್‌ಗೆ ಹೋಗಬೇಕು ಎಂದು ಹೇಳುತ್ತಾನೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆಯೇ? ಆಗ ತ್ಯಾಗವನ್ನು ಧಾರ್ಮಿಕ ಹಕ್ಕು ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ನಾಳೆ ಇನ್ನೊಬ್ಬ ಹಿಂದು ವ್ಯಕ್ತಿ ಬಂದು, ಕೋರ್ಟ್‌ನ ಹಾಲ್‌ನಲ್ಲಿ ಇಂಡಿಯಾ ಗೇಟ್‌ನಲ್ಲಿ ಹೋಮವನ್ನು ಮಾಡುತ್ತೇನೆ ಎನ್ನುತ್ತಾನೆ. ಆಗ ಏನು ಹೇಳಲು ಸಾಧ್ಯ ಎಂದು ವಾದ ಮಂಡಿಸಿದ್ದಾರೆ. ಎಲ್ಲಾ ಧಾರ್ಮಿಕ ಹಕ್ಕುಗಳನ್ನು ಸಮತೋಲನಗೊಳಿಸಬೇಕು. ನನಗೆ ಸಂಪೂರ್ಣ ಹಕ್ಕಿದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದರು.

ಅರ್ಜಿದಾರರು ಹಿಜಾಬ್ (Hijab)ಧಾರಣೆ ವಿಷಯದಲ್ಲಿ ತಮಗೆ ಸಂಪೂರ್ಣ ಹಕ್ಕಿದೆ ಎಂಬ ಭ್ರಮೆಯನ್ನು ಆಧರಿಸಿದೆ. ಶಾಲೆಯಲ್ಲಿ ಏಕರೂಪತೆ ಕಾಪಾಡುವುದು ಸರ್ಕಾರದ ಉದ್ದೇಶ. ಹಿಜಾಬ್ ಅನ್ನು ನಿಷೇಧಿಸಲಾಗಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆಯನ್ನು ನಿಷೇಧಿಸಿಲ್ಲ  ಎನ್ನುವುದನ್ನು ಕೋರ್ಟ್‌ನ ಗಮನಕ್ಕೆ ಮತ್ತೆ ತರುತ್ತೇನೆ ಎಂದು ಹೇಳಿದರು. ಶಾಲೆಯು ಸುರಕ್ಷಿತ ಸ್ಥಳ. ಅಲ್ಲಿ ಖಂಡಿತವಾಗಿ ಹಿಜಾಬ್‌ನ ಅಗತ್ಯವಿರುವುದಿಲ್ಲ.  ಧರ್ಮದ ಆಧಾರದ ಮೇಲೆ ವರ್ಗೀಕರಣಕ್ಕೆ ನಮ್ಮ ಸಮ್ಮತಿ ಇಲ್ಲ. ಶಾಲೆ ಒಂದು ಸುರಕ್ಷಿತ ಸಂಸ್ಥೆ,  ಸುರಕ್ಷಿತ ಸಂಸ್ಥೆಗೆ ಬಂದಾಗ ಎಲ್ಲರೂ ಸಮವಸ್ತ್ರದೊಂದಿಗೆ ಬರಬೇಕು. ಏಕತೆಯನ್ನು ಉತ್ತೇಜಿಸಲು ರಾಜ್ಯವು ಕ್ರಮ ಕೈಗೊಂಡಿದೆ ಎಂದು ವಾದ (KM Natraj) ಮಾಡಿದರು. 

ನೀವು ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುತ್ತಿರುವ ಕಾರಣದಿಂದಾಗಿ ವಿದ್ಯಾರ್ಥಿನಿಯರು (Students)ಶಾಲೆಗೆ ಬರುವುದನ್ನು ತಡೆಯುತ್ತಿದ್ದೀರಾ? ಎಂದು ನ್ಯಾಯಮೂರ್ತಿ ಧುಲಿಯಾ (Justice Dhulia) ಪ್ರಶ್ನೆ ಮಾಡಿದರು. ಇದಕ್ಕೆ ವಕೀಲ ನಟರಾಜ್‌, ಇಲ್ಲ, ನಾವು ಯಾರನ್ನೂ ತಡೆಯುತ್ತಿಲ್ಲ. ನಿಗದಿತ ಸಮವಸ್ತ್ರ ನೀತಿ ಅನುಸರಿಸುತ್ತಿದ್ದೇವೆ. ಹಿಜಾಬ್ ಒಂದು ಪ್ರಾಸಂಗಿಕ ಪ್ರಶ್ನೆಯಾಗಿರಬಹುದು. ಇಲ್ಲಿ ನಾವು ಯಾವುದೇ ಧರ್ಮವನ್ನು ಹುಡುಕುತ್ತಿಲ್ಲ ಎಂದರು.

ಮುಸ್ಲಿಂ ದೇಶ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ ವಿರುದ್ಧ ಪ್ರತಿಭಟಿಸ್ತಿದ್ದಾರೆ, ಇದು ಅಗತ್ಯ ಆಚರಣೆಯಲ್ಲ: ಎಸ್‌ಜಿ

ಯಾರಾದರೂ ಹಿಜಾಬ್ ಧರಿಸಿ ಪ್ರವೇಶಿಸಲು ಬಯಸಿದರೆ ನೀವು ಅದನ್ನು ಅನುಮತಿಸುವುದಿಲ್ಲವೇ?  ಹೌದು ಅಥವಾ ಇಲ್ಲ ಎಂದು ಹೇಳಿ. ನೀವು ಏಕೆ ನೇರ ಉತ್ತರವನ್ನು ನೀಡುವುದಿಲ್ಲ? ಎಂದು ನ್ಯಾಯಮೂರ್ತಿ ಈ ವೇಳೆ ಪ್ರಶ್ನಿಸಿದರು. ಅದಕ್ಕೆ ನಟರಾಜ್‌.  ಅದನ್ನ ಶಾಲೆಯ ಆಡಳಿತ ಮಂಡಳಿ ನಿರ್ಧರಿಸುತ್ತದೆ. ರಾಜ್ಯ ಸರ್ಕಾರವಾಗಿ ನಾವು ಎಲ್ಲವನ್ನೂ ಗೌರವಿಸುತ್ತದೆ ಎಂದರು. ಇದು ಸಂಸ್ಥೆಯಲ್ಲಿ ಶಿಸ್ತಿನ ಸರಳ ಪ್ರಕರಣವಾಗಿದೆ. ಯಾವುದೇ ಧರ್ಮ ಅಥವಾ ವ್ಯಕ್ತಿಯ ವಿರುದ್ಧ ತಾರತಮ್ಯ ಮಾಡಿಲ್ಲ. ಎಲ್ಲರಿಗೂ ಸಮಾನವಾಗಿ ರಕ್ಷಣೆ ನೀಡಲಾಗಿದೆ ಎಂದು ಹೇಳಿ ರಾಜ್ಯ ಸರ್ಕಾರ (State)ತನ್ನ ಬುಧವಾರದ ವಾದ ಮುಗಿಸಿದೆ.

ಅಲ್ಪ ಸಂಖ್ಯಾತ ಮುಸ್ಲಿಮರ ಧರ್ಮಾಚರಣೆಗೆ ಬೆಲೆ ಕೊಟ್ಟರೇನು ತಪ್ಪು?: ದವೆ ವಾದ

ಶಿಕ್ಷಕರು ಹಾಗೂ ಪ್ರತಿವಾದಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಆರ್‌.ವೆಂಕಟರಮಣಿ, ಯಾವುದೇ ಪ್ರತ್ಯೇಕತೆಯ ಗೋಡೆಗಳಿಲ್ಲದೆ ನಾನು ವಿದ್ಯಾರ್ಥಿಗಳೊಂದಿಗೆ ಉಚಿತ ಸಂವಾದ ಶಾಲೆಯಲ್ಲಿರಬೇಕು ಎಂದು ಬಯಸುತ್ತೇನೆ ಎಂದರು. ಅದಕ್ಕೆ ನ್ಯಾಯಮೂರ್ತಿ, ಹಿಜಾಬ್‌ ಅಂಥದ್ದೊಂದು ಗೋಡೆ ಸೃಷ್ಟಿಸಿದೆಯೇ ಎಂದು ಪ್ರಶ್ನೆ ಮಾಡಿದರು. ಹೌದು, ಶಾಲೆಯು ಈ ಎಲ್ಲ ಅಂಶಗಳಿಂದ, ಗೊಂದಲಗಳಿಂದ ಮುಕ್ತವಾಗಿರಬೇಕು ಎಂದರು.

click me!