ಕಾಲ ಬದಲಾದಂತೆ ಜೀವನಶೈಲಿ ಹಾಗೂ ಡಯಟ್ ಬದಲಾಯಿಸಿಕೊಳ್ಳಲು ಹೇಳುತ್ತದೆ ಋತುಚರ್ಯ. ಅದರ ಸಲಹೆಗಳಂತೆ ನಡೆದರೆ ಆರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.
ಋತುಚರ್ಯ(Ritucharya) ಎಂಬುದು ಜೈನ ವೈದ್ಯಕೀಯ ಪದ್ಧತಿ. ಪ್ರತಿ ಋತು(season)ವಿಗೂ ಜೀವನಶೈಲಿ ಹೇಗಿರಬೇಕೆಂದು ಇದು ಹೇಳುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಲ್ಲದರಲ್ಲೂ ಒಂದೇ ರೀತಿಯ ದಿನಚರಿ ಸರಿಯಲ್ಲ. ಕಾಲ ಬದಲಾದಂತ ಜೀವನಶೈಲಿ ಬದಲಾಗಬೇಕು. ಋತುಚರ್ಯ ಹೇಳಿದಂತೆ ಜೀವನಶೈಲಿಯನ್ನು ಎಲ್ಲ ಋತುವಿನಲ್ಲಿ ಬದಲಿಸಿಕೊಳ್ಳುತ್ತಾ ಹೋದರೆ ದೇಹದಲ್ಲಿ ದೋಷಗಳು ಸಮತೋಲನವಾಗಿ ಆರೋಗ್ಯ ಚೆನ್ನಾಗಿರುತ್ತದೆ.
ಚಳಿಗಾಲವೆಂದರೆ ಒಣಗಿದ ತಣ್ಣನೆ ಹವೆ, ಬೀಸು ಗಾಳಿ. ಜನವರಿಯಿಂದ ಮಾರ್ಚ್ವರೆಗೆ ಈ ಎಲ್ಲ ಚಳಿಗಾಲದ ಗುಣಗಳು ದೇಹದಲ್ಲಿ ವಾತ ದೋಷಕ್ಕೆ ಕಾರಣವಾಗುತ್ತವೆ. ಹಾಗಾಗಿ, ಈ ಸಂದರ್ಭದಲ್ಲಿ ನಮ್ಮ ಆಹಾರಶೈಲಿ(diet) ಹಾಗೂ ಜೀವನಶೈಲಿ(lifestyle) ಕೂಡಾ ವಾತವನ್ನು ಬ್ಯಾಲೆನ್ಸ್ ಮಾಡುವ ರೀತಿ ಇರಬೇಕು. ಇದಕ್ಕಾಗಿ ಋತುಚರ್ಯ ವಿಶೇಷವಾದ ದಿನಚರಿ ಹೇಳುತ್ತದೆ. ನಾವೂ ಕೂಡಾ ಇದನ್ನು ಪಾಸಿಲಿ ಆರೋಗ್ಯ ಕಾಪಾಡಿಕೊಳ್ಳೋಣ.
ಎಣ್ಣೆ ಮಸಾಜ್
ಪ್ರತಿ ಬೆಳಗ್ಗೆ ಎದ್ದ ನಂತರ ತಲೆ ಕೂದಲಿಂದ ಹಿಡಿದು ಕಾಲ್ಬೆರಳ ತುದಿಯವರೆಗೆ ಎಳ್ಳೆಣ್ಣೆ(sesame oil) ಹಚ್ಚಿ ಮಸಾಜ್ ಮಾಡಿಕೊಳ್ಳಿ. ಈ ಎಣ್ಣೆಯನ್ನು 10-15 ನಿಮಿಷ ಬಿಟ್ಟು ನಂತರ ಸೋಪು ಹಚ್ಚದೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಇದರಿಂದ ಸ್ವಲ್ಪ ಎಣ್ಣೆಯು ತ್ವಚೆಯಲ್ಲೇ ಉಳಿಯುತ್ತದೆ. ಇದು ಬಾಡಿ ಲೋಶನ್ ಬದಲಿಗೆ ಇಡೀ ದಿನ ಮೈಲಿದ್ದು ಚರ್ಮವನ್ನು ಕಾಂತಿಯುಕ್ತವಾಗಿಡುತ್ತದೆ.
ಗಂಧವನ್ನು(sandalwood paste) ಅರೆದು ದೇಹಕ್ಕೆ ಹಚ್ಚಿಕೊಳ್ಳಬೇಕು. ಕನಿಷ್ಠ ಪಕ್ಷ ಮುಖಕ್ಕಾದರೂ ಹಚ್ಚಿಕೊಳ್ಳಿ.
ಬೆಳಗಿನ ಹೊತ್ತಿನಲ್ಲಿ ನಿದ್ರಿಸಬಾರದು.
ಅತಿಯಾದ ಗಾಳಿ ಹಾಗೂ ಮಂಜಿಗೆ ಮೈಯ್ಯನ್ನು ಒಡ್ಡಬಾರದು.
ಈ ಸಂದರ್ಭದಲ್ಲಿ ಒಮ್ಮೆಯಾದರೂ ಪಂಚಕರ್ಮ ಚಿಕಿತ್ಸೆ ಪಡೆಯಬೇಕು.
ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿ ತಪ್ಪಿಸಬಾರದು. ಬಿಸಿ ಬಿಸಿಯಾದ ಓಟ್ಮೀಲ್ ಇಲ್ಲವೇ ಅನ್ನಕ್ಕೆ ತುಪ್ಪ ಅಥವಾ ಬೆಣ್ಣೆ ಹಚ್ಚಿಕೊಂಡು ತಿನ್ನುವುದು ಉತ್ತಮ. ಬೇರೆ ಏನೇ ತಿಂಡಿ ಮಾಡಿದರೂ ಹೆಚ್ಚು ತುಪ್ಪ, ಬೆಣ್ಣೆ ಸೇವಿಸಬೇಕು.
ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಅನ್ನ ಹಾಗೂ ಬೇಯಿಸಿದ ತರಕಾರಿಗಳನ್ನು(vegetables) ಸೇವಿಸಬೇಕು. ದಪ್ಪನೆಯ ಬಿಸಿ ಸೂಪ್ ಬಹಳ ಒಳ್ಳೆಯದು. ಆಹಾರ ಉತ್ತಮವಾಗಿದ್ದು, ಸುಲಭವಾಗಿ ಜೀರ್ಣವಾಗುವಂತಿರಬೇಕು.
ಹಸಿ ತರಕಾರಿಗಳು ಈ ಕಾಲಕ್ಕಲ್ಲ. ಅವುಗಳಿಂದ ವಾತ ಹೆಚ್ಚುತ್ತದೆ. ಸೊಪ್ಪಿನ ಸೇವನೆಯನ್ನೂ ಮಿತಿಯಲ್ಲಿಡಬೇಕು.
ಹಸಿವಾದಾಗ ಮಾತ್ರ ಊಟ ಮಾಡಬೇಕು. ಊಟವನ್ನೇ ಹೊಟ್ಟೆ ತುಂಬುವಷ್ಟು ತಿನ್ನಬೇಕು. ಸ್ನ್ಯಾಕ್ಸ್ ಸೇವನೆ ಬೇಡ.
ಹಾಲು ಹಾಗೂ ಹಾಲಿನ ಪದಾರ್ಥಗಳ ಬಳಕೆಯನ್ನು ಸಂಪೂರ್ಣ ಮಿತಿಯಲ್ಲಿಡಬೇಕು. ಅವು ಕಫಕ್ಕೆ ಕಾರಣವಾಗುತ್ತವೆ. ಇದರಿಂದ ಶೀತ, ಕೆಮ್ಮು ಹೆಚ್ಚುತ್ತದೆ.
ಚಳಿಗಾಲದಲ್ಲಿ ಕಹಿ(bitter) ಹಾಗೂ ಸಿಹಿ(sweet)ಯಾದ ಪದಾರ್ಥಗಳ ಸೇವನೆ ಹೆಚ್ಚಿಸಬೇಕು.
ತಣ್ಣಗಿರುವ ಹಾಗೂ ಒಣದಾದ ಪದಾರ್ಥಗಳನ್ನು ಸೇವಿಸಬಾರದು. ಜ್ಯೂಸ್ ಸೇವನೆ ಈಗ ಬೇಡ.
ಹರ್ಬಲ್ ಟೀ ಇಲ್ಲವೇ ಶುಂಠಿಯ ಟೀ ಸೇವನೆ ಮಾಡಿ. ರಾತ್ರಿ ಮಲಗುವ ಮುನ್ನ ಬೆಚ್ಚನೆಯ ಹಾಲನ್ನು ಒಂದು ಲೋಟ ಸೇವಿಸಿ. ಇದಕ್ಕೆ ಬೇಕಿದ್ದರೆ ಶುಂಠಿ, ಅರಿಶಿನ, ಏಲಕ್ಕಿ ಸೇರಿಸಿಕೊಳ್ಳಬಹುದು.
ಕಲರ್ ಥೆರಪಿ(Color therapy) ಕೆಂಪು, ಹಳದಿ ಹಾಗೂ ಕಿತ್ತಳೆ ಬಣ್ಣಗಳು ವಾತವನ್ನು ತಣಿಸಲು ಒಳ್ಳೆಯದು. ಆದಷ್ಟು ಈ ಬಣ್ಣದ ಬಟ್ಟೆಗಳನ್ನು ಚಳಿಗಾಲದಲ್ಲಿ ಧರಿಸಿ. ಜೊತೆಗೆ, ನಿಮ್ಮ ಸುತ್ತ ಮುತ್ತ ಇದೇ ಬಣ್ಣ ಹೆಚ್ಚಿರುವಂತೆ ನೋಡಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.