ಎಂಎಸ್ಎನ್ ಬಿದ್ದಿದ್ದೂ ಆಯ್ತು, ಈಗ ಸ್ವಲ್ಪ ಮಟ್ಟಿಗೆ ಎದ್ದಿದ್ದೂ ಆಯ್ತು.. ಮುಂದೆ ಆದಷ್ಟೂ ಬೇಗ ಸರಿಹೋಗಲಿ, ಮೊದಲಿನಂತೆ ಓಡಾಡಿಕೊಂಡು, ಮಾತಾಡಿಕೊಂಡು, ತಾವೂ ನಕ್ಕು, ಬೇರೆಯವರನ್ನೂ ನಗಿಸುವ ಕಾಯಕ ಮುಂದುವರಿಸಲಿ ಎಂಬ ಕೂಗೂ ಇಡೀ ಕರ್ನಾಟಕದ ಮೂಲೆಮೂಲೆಯಿಂದ ಕೇಳಿ ಬರುತ್ತಿದೆ..
'ಎಂಎಸ್ಎನ್' ಬಿದ್ದು-ಎದ್ದಿರುವ ಸುದ್ದಿಯೀಗ ಕರ್ನಾಟಕದ ತುಂಬೆಲ್ಲಾ ಸೌಂಡ್ ಮಾಡುತ್ತಿದೆ. 'ಎಂಎಸ್ಎನ್' ಎಂದೇ ಪ್ರಸಿದ್ಧರಾಗಿರುವ ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಮೊನ್ನೆ ವಾಕಿಂಗ್ ಮಾಡುವಾಗ ಬಿದ್ದು,ಈಗ ಚೇತರಸಿಕೊಳ್ಳುತ್ತಿದ್ದಾರೆ. ತಾವು ಬಿದ್ದದ್ದನ್ನೂ ಓದುಗರು ಬಿದ್ದು ಬಿದ್ದು ನಗುವಂತೆ ಬರೆದಿರುವುದು ಅವರ ಅದ್ಭುತ ಹಾಸ್ಯಪ್ರಜ್ಞೆಗೆ ಸಾಕ್ಷಿ. ನೋವಿನಲ್ಲೂ ನಗು. ಜೀವನೋತ್ಸಾಹ ಅಂದರೆ ಇದು ಎನ್ನಲೇಬೇಕು.. 'ಬೇಗ ತುಟಿ ತೆರೆಯಿರಿ. ಹರಟೆ ಹೊಡೆಯೋಣ' ಅಂತಿದೆ ಇಡೀ ಕರ್ನಾಟಕ..
ಎಂಎಸ್ಎನ್ (MS Narasimhamurthy) ಅದೇನು ಬರೆದುಕೊಂಡಿದ್ದಾರೆ ನೋಡಿ..
ನಟ ಉಪೇಂದ್ರ ಊಟ ಮಾಡೋ ರೀತಿಯೂ ವಿಚಿತ್ರ! ಶಿವಣ್ಣ ವಿವರಿಸಿದ್ದು ಕೇಳಿ ಅಬ್ಬಬ್ಬಾ ಅಂತಿರೋ ಫ್ಯಾನ್ಸ್
***
ಬಿದ್ದೆ ಎದ್ದೆ
————-
ಎಲ್ಲೆಲ್ಲೋ ಬೀಳುವ ಜಾಯಮಾನ ನನ್ನದಲ್ಲ. ಅದರೂ ಇಂದು 17 ಕ್ರಾಸಲ್ಲಿ ವಾಕ್ ಮಾಡುವಾಗ ಬಿದ್ದೆ, ಬಲವಾಗಿ ಬಿದ್ದೆ. 8 ನೇ ಕ್ರಾಸಲ್ಲಿ ಬಿದ್ದಿದ್ದರೆ ಇಷ್ಟು ಗಾಯ ಆಗುತ್ತಿರಲಿಲ್ಲ ಎಂಬ ಮಾತು ಬಂತು. ಶುಶ್ರೂಷೆಗೆ ನಿಂತ ನನ್ನ ಮಗ ಶ್ರೀಹರ್ಷ, ಸೊಸೆ ಅನುಷಾ ಎಡಬಿಡದೆ ಜೊತೇಲಿದ್ದಿದ್ದು ಮಾನಸಿಕ ಮತ್ತು ಆರ್ಥಿಕ ಧೈರ್ಯ ತುಂಬಿತು. ಮೂರು ಆಸ್ಪತ್ರೆ ಗಳನ್ನು ಸುತ್ತಿಸಿ ರಿಪೇರಿ ಮಾಡಿಸಿದರು. ಈಗ ಅರ್ಧ ವಾಸಿ ಆಗಿದೆ.
ನಿಮ್ಮಲ್ಲರ ಶುಭಹಾರೈಕೆಗಳ ಮಹಾಪೂರದದಲ್ಲಿ ಕೊಚ್ಚಿ ಹೋದೆ. ನನಗೇ ನೇರವಾಗಿ ಪೋನು/ ಮೆಸೇಜ್ ಮಾಡಿ ಧೈರ್ಯ ತುಂಬಿದವರು ಅದೆಷ್ಟೋ ಮಂದಿ. ಬಿದ್ದ ವಿಷಯ ಹೇಗೆ ಹಬ್ಬಿತು ಎಂಬುದೇ ತಿಳಿಯಲಿಲ್ಲ. ನೀವು ಬಿದ್ದಿದ್ದು ನನಗೆ ಹೇಳಲೇ ಇಲ್ಲ ಎಂದು ಆಕ್ಷೇಪ ಮಾಡಿದವರು ಗೆಳೆಯ ಪತ್ತಂಗಿ ಅವರು. ಮನೋಹರ ಗೋಖಲೆ ನಾನು ಬಿದ್ದ ವಿಷಯದ ಬಗ್ಗೆ ಸೊಗಸಾದ ಕವನ ರಚಿಸಿ ಹಾಡಿದರು.
ಆತ್ಮೀಯ ಗೆಳೆಯ ಬಿ ಎಸ್ ರವೀಂದ್ರ ಇದನ್ನು ಸ್ಟೇಟ್ ಲೆವೆಲ್ ನ್ಯೂಸ್ ಮಾಡುವಂತೆ, ಮರುಗಿ ಕರ್ನಾಟವಿಲ್ಲಿ ಹರಸುವುದು ಸುಧಾರಿಸಿಕೊಳ್ಳಿ ಎಂದು ಸೊಗಸಾದ ಪದ್ಯ ರಚಿಸಿ, ತಮ್ಮ ಮುಂಬರುವ ಸಂಕಲದಲ್ಲಿ ಅಳವಡಿಸಲು ಎಂಎಸ್ಎನ್ ಬಿದ್ದಾಗ ಎಂಬ ಶೀರ್ಷಿಕೆ ಇಟ್ಟರು.
ಸೋದರಿ ಶಾಂತಾ ನಾಗಮಂಗಲ ನೈಜ ಕಳಕಳಿಯಿಂದ ಅನೇಕ ಮೆಸೇಜುಗಳು ಕಳಿಸಿ ಮತ್ತೆ ಬೀಳಬೇಡಿ, ಈಗ ವಿಶ್ರಾಂತಿ ತೊಗೊಳ್ಳಿ ಎಂದು ಮಮತೆಯ ಕಿವಿ ಮಾತು ಹೇಳಿದರು. ಗಿರಿಜಾರಾವ್ ಕಮಲಾಕ್ಷಿ , ಗೋನವಾರ, ಹುವಾಶ್ರೀ, ಸಹೋದ್ಯೋಗಿ ಶಶಿಧರ, ತುಂಗಾ, ಮುಂತಾದ ಅನೇಕ ಅನೇಕರ ಶುಭ ಹಾರೈಕೆ ಫಲ ನೀಡಿದೆ.
,
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಎಂದು ಆಗಾಗ ಭಾಷಣದಲ್ಲಿ ಹೇಳುತ್ತಿದ್ದೆ. ಮಣಿಪಾಲ ಆಸ್ಪತ್ರೆ ಯಲ್ಲಿ ನನ್ನ ಒಳ ತುಟಿ ಹೊಲಿದರು. 10 ಹೊಲಿಗೆ. ಹೊಲಿಗೆ ಅಲ್ಲ, ಎಂಬ್ರಾಯಿಡಿರಿ ಎನ್ನಬಹುದು.. 6 ದಿನಕ್ಕೆ ಮಾತ್ರೆಗಳು ಬರೆದು, ಮನೆಯವರ ಜೊತೆ 3 ದಿನ ಮಾತಾಡಬೇಡಿ ಎಂದು ಸಲಹೆ ಕೊಟ್ಟರು.
ರಾಘವಾಂಕನ ಹಲ್ಲಿನ ಬಗ್ಗೆ ನಾನು ಭಾಷಣ ಮಾಡಿದ್ದೆ. ನಾನು ಬಿದ್ದ ರಭಸಕ್ಕೆ ಮೇಲಿನ ಎರಡು ಹಲ್ಲು ಬಾಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಸರಿ, ನಾ ಹೋಗಿ ಬರುವೆ ಎಂದು ಹಾಡುತ್ತಿತ್ತು. ಮಲ್ಲಿಗೆ ನರ್ಸಿಂಗ್ ಹೋಂ ನ ಅನುಭವಿ ವೈದ್ಯರು , ನಮ್ಮ ಹಲ್ಲು ನಾವೇ ಉದುರಿಸಿ ಕೊಳ್ಳಬಾರದು, ಅದಕ್ಕೆ ಬೇರೆ ಜನ ಇರುತ್ತಾರೆ ಎಂದು ತಿಳಿ ಹೇಳಿ ಕಂಬಿ ಕಟ್ಟಿ ಹಲ್ಲು ಉಳಿಸಿದರು. ಮಾಮೂಲಿ ಜೀವನದತ್ತ ಹೊರಟಿರುವೆ. ದ್ರವಾಹಾರ ಬಿಟ್ಟು ಈಗತಾನೇ ಎರಡು ಸ್ಪೂನ್ ಉಪ್ಪಿಟ್ಟು ತಿಂದೆ
ಬದುಕು ಹೈವೇಲಿ ಓಡಾಡುವ ಗಾಡಿ ಇದ್ದಂತೆ. ಯಾವಾಗ ಏನು ಬೇಕಾದರೂ ಆಗಬಹುದು. ತಪ್ಪು ನಮ್ಮದೇ ಆಗಿರಬೇಕು ಎಂದೇನಿಲ್ಲ. ಎ ಎನ್ ಮೂರ್ತಿರಾಯರು ಇಳಿ ವಯಸ್ಸಿನನಲ್ಲಿ ಬೆಳಿಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಸ್ಕೂಟರ್ ಗುದ್ದಿ ಬೀಳಿಸಿತ್ತು .
ನೋವಿದ್ದರೂ ನೆಮ್ಮದಿ ತಂದಿದ್ದು ನಿಮೆಲ್ಲರ ಮೆಸೇಜುಗಳು. ಗೆಳೆಯರ ಪ್ರೀತಿಗೆ ಹೀಲಿಂಗ್ ಎಫೆಕ್ಟ್ ಇರುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಕಲಿತ ಪಾಟ: ವಾಕಿಂಗ್ ಮಾಡುವಾಗ ವೇಗವಾಗಿ ಹೆಜ್ಜೆ ಹಾಕಬಾರದು, ನೆಲ ನೋಡಿ ನಡೆಯಬೇಕು, ಮೊಬೈಲ್ ಜೊತೆಗಿರಬೇಕು.
ಮತ್ತೊಮ್ಮೆ ತಮ್ಮೆಲ್ಲರಿಗೂ ಪ್ರೀತಿಯ ವಂದನೆಗಳು.
ಎಂಎಸ್ಎನ್
---
ಸುಧಾರಾಣಿ ಉಟ್ಟ ಸೀರೆಯ ವಯಸ್ಸೆಷ್ಟು ಅಂತ ಗೊತ್ತಾದ್ರೆ ಕಂಗಾಲಾಗೋದು ಗ್ಯಾರಂಟಿ..!?
ಎಂದು ಬರೆದುಕೊಂಡಿದ್ದಾರೆ ಹಾಸ್ಯ ಸಾಹಿತಿ ಎಂಎಸ್ ನರಸಿಂಹಮೂರ್ತಿ. ನೋವಿನಲ್ಲೂ ನಗುವ, ನಗಿಸುವ ಅವರ ಜೀವನೋತ್ಸಾಹಕ್ಕೆ ದೊಡ್ಡದೊಂದು ಸಲಾಮ್ ಎನ್ನಲೇಬೇಕು. ಎಂಎಸ್ಎನ್ ಬಿದ್ದಿದ್ದೂ ಆಯ್ತು, ಈಗ ಸ್ವಲ್ಪ ಮಟ್ಟಿಗೆ ಎದ್ದಿದ್ದೂ ಆಯ್ತು.. ಮುಂದೆ ಆದಷ್ಟೂ ಬೇಗ ಸರಿಹೋಗಲಿ, ಮೊದಲಿನಂತೆ ಓಡಾಡಿಕೊಂಡು, ಮಾತಾಡಿಕೊಂಡು, ತಾವೂ ನಕ್ಕು, ಬೇರೆಯವರನ್ನೂ ನಗಿಸುವ ಕಾಯಕ ಮುಂದುವರಿಸಲಿ ಎಂಬ ಕೂಗೂ ಇಡೀ ಕರ್ನಾಟಕದ ಮೂಲೆಮೂಲೆಯಿಂದ ಕೇಳಿ ಬರುತ್ತಿದೆ.. ಪ್ಲೀಸ್ ಕೇಳಿಸಿಕೊಳ್ಳಿ ಎಂಎಸ್ಎನ್ ಸರ್..