ಭಾರತದಲ್ಲಿ 100 ಮಿಲಿಯನ್ ದಾಟಿದ ಡಯಾಬಿಟಿಸ್ ರೋಗಿಗಳ ಸಂಖ್ಯೆ, ಆರೋಗ್ಯದ ಕಾಳಜಿ ವಹಿಸೋದು ಹೇಗೆ?

By Vinutha PerlaFirst Published Jun 10, 2023, 9:25 AM IST
Highlights

ಡಯಾಬಿಟಿಸ್ ಇತ್ತೀಚಿನ ವರ್ಷಗಳಲ್ಲಿ ಹಲವರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆ. ಎಲ್ಲರೂ ಈ ಸಮಸ್ಯೆಯೊಂದಿಗೆ ಹೆಣಗಾಡುವವರೇ. ICMR ನ ಸಂಶೋಧನೆಯ ಪ್ರಕಾರ, 2019ರಲ್ಲಿ 70 ಮಿಲಿಯನ್ ಜನರಿಗೆ ಹೋಲಿಸಿದರೆ ಭಾರತದಲ್ಲಿ ಈಗ 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಧುಮೇಹವು ಮಹಾಮಾರಿಯಾಗಿ ಪರಿಣಮಿಸುತ್ತಿದೆ. ಡಯಾಬಿಟಿಸ್ ಇತ್ತೀಚಿನ ವರ್ಷಗಳಲ್ಲಿ ಹಲವರಲ್ಲಿ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆ. ಎಲ್ಲರೂ ಈ ಸಮಸ್ಯೆಯೊಂದಿಗೆ ಹೆಣಗಾಡುವವರೇ. ಮಧುಮೇಹ ರೋಗಿಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿದ್ದಾರೆ. ಭಾರತದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ.ಇಲ್ಲಿಯವರೆಗೆ ದೇಶದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಜನರು ಈ ಡಯಾಬಿಟಿಸ್‌ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಹೌದು, UK ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ICMR ನ ಸಂಶೋಧನೆಯ ಪ್ರಕಾರ, 2019ರಲ್ಲಿ 70 ಮಿಲಿಯನ್ ಜನರಿಗೆ ಹೋಲಿಸಿದರೆ ಭಾರತದಲ್ಲಿ ಈಗ 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.

ಭಾರತದ ಈ ರಾಜ್ಯಗಳಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚುತ್ತಿವೆ
ಅದೇ ಸಂಶೋಧನೆಯು ಕನಿಷ್ಟ 136 ಮಿಲಿಯನ್ ಜನರು ಅಥವಾ ಜನಸಂಖ್ಯೆಯ 15.3% ಜನರು ಪೂರ್ವ-ಮಧುಮೇಹವನ್ನು (Pre diabetics) ಹೊಂದಿದ್ದಾರೆಂದು ಸೂಚಿಸುತ್ತದೆ. ಇಲ್ಲಿಯವರೆಗೆ, ಗೋವಾ (26.4%), ಪುದುಚೇರಿ (26.3%) ಮತ್ತು ಕೇರಳ (25.5%) ನಲ್ಲಿ ಅತಿ ಹೆಚ್ಚು ಮಧುಮೇಹ ಪ್ರಕರಣಗಳು ವರದಿಯಾಗುತ್ತಿವೆ. ಪುದುಚೇರಿ ಮತ್ತು ದೆಹಲಿಯಲ್ಲಿ ಅಂಕಿಅಂಶಗಳು ಬಹುತೇಕ ಸಮಾನವಾಗಿವೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಅರುಣಾಚಲ ಪ್ರದೇಶದಂತಹ ಕಡಿಮೆ-ಪ್ರಚಲಿತ ರಾಜ್ಯಗಳಲ್ಲಿಯೂ ಸಹ ಮುಂದಿನ ಕೆಲವು ವರ್ಷಗಳಲ್ಲಿ ಮಧುಮೇಹದ (Diabetes) ಹೆಚ್ಚಳದ ಬಗ್ಗೆ ಇದೇ ಸಂಶೋಧನೆ (Study) ಎಚ್ಚರಿಸಿದೆ.

Latest Videos

Health and COVID: ಕೋವಿಡ್‌ನಿಂದಾಗಿ ಮಧುಮೇಹ ಹೆಚ್ಚಾಗಿದೆ, 20ರಲ್ಲಿ ಒಬ್ಬರಿಗೆ ಬಂತು ಶುಗರ್

ಮಧುಮೇಹವು ಮೂತ್ರಪಿಂಡ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ
ದೇಶದ ಅರ್ಧದಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮತ್ತಷ್ಟು ಜನರಿಗೆ ಇದರ ಬಗ್ಗೆ ತಿಳಿದಿಲ್ಲ. ಮಧುಮೇಹವು ಹೃದಯ (Heart), ಹೊಟ್ಟೆ, ಯಕೃತ್ತು, ಮೂತ್ರಪಿಂಡ, ಕಣ್ಣು ಮತ್ತು ಮೆದುಳನ್ನು (Brain) ಕ್ರಮೇಣ ಬಾಧಿಸುವ ಕಾಯಿಲೆಯಾಗಿದೆ. ಸಮೀಕ್ಷೆಯ ಪ್ರಕಾರ, ಜನಸಂಖ್ಯೆಯ ಕನಿಷ್ಠ 35.5% ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ ಮತ್ತು 81.2% ರಷ್ಟು ಕೊಲೆಸ್ಟ್ರಾಲ್ ಅಸಹಜ ಮಟ್ಟವನ್ನು ಹೊಂದಿದ್ದಾರೆ. 28.6% ಸಾಮಾನ್ಯ ಬೊಜ್ಜು (Obesity) ಹೊಂದಿದ್ದರೆ, 39.5% ಕಿಬ್ಬೊಟ್ಟೆಯ ಬೊಜ್ಜು ಹೊಂದಿದೆ.

ಮಧುಮೇಹ ಪ್ರಕರಣಗಳು ನಿರಂತರವಾಗಿ ಏಕೆ ಹೆಚ್ಚುತ್ತಿವೆ?
ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಅಥವಾ ಬಳಸಲು ಅಸಮರ್ಥತೆಯಿಂದ ಮಧುಮೇಹ ಉಂಟಾಗುತ್ತದೆ. ಮಧುಮೇಹವು ಜೀವನಶೈಲಿಯ ಅಸ್ವಸ್ಥತೆಯಾಗಿದೆ. ತಪ್ಪಾದ ಆಹಾರ ಮತ್ತು ಜೀವನಶೈಲಿಯಿಂದ ಇದು ಬೆಳವಣಿಗೆಯಾಗುತ್ತದೆ. ಮಧುಮೇಹವನ್ನು ತಪ್ಪಿಸಲು, ಪ್ರತಿಯೊಬ್ಬ ವ್ಯಕ್ತಿಯು ತನ್ನ  ಪ್ರಮುಖ ದೈಹಿಕ ಚಟುವಟಿಕೆಗಳನ್ನು (Exercise) ಮಾಡುವುದರ ಜೊತೆಗೆ ಆಹಾರವನ್ನು (Food) ಸಮತೋಲನಗೊಳಿಸಿ ಸೇವಿಸುವುದು ಮುಖ್ಯ.

Health Tips: ಈ ಅಭ್ಯಾಸಗಳಿದ್ದರೆ ರಕ್ತದಲ್ಲಿ ಸಕ್ಕರೆ ಮಟ್ಟ ಇಳಿಯೋದೇ ಇಲ್ಲ

ಮಧುಮೇಹ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮಧುಮೇಹ ಕಾಣಿಸಿಕೊಳ್ಳೋ ಆರಂಭದಲ್ಲೇ ಎಚ್ಚರಿಕೆಯಿಂದ ಇರಬೇಕು. ಮಧುಮೇಹ ಹೊಂದಿರಬಹುದು ಎಂದು ಸೂಚಿಸುವ ಚಿಹ್ನೆಗಳು ಯಾವುವು?

ಹಸಿವು ಮತ್ತು ಆಯಾಸ: ಹಲವು ಸಂದರ್ಭಗಳಲ್ಲಿ ಸಾಮಾನ್ಯವಾಗಿ ಹಸಿವು (Hunger) ಮತ್ತು ಆಯಾಸ ಕಂಡು ಬರುತ್ತದೆ. ಆದರೆ ಡಯಾಬಿಟಿಸ್‌ ಇರುವವರು ಹೆಚ್ಚು ಹಸಿವು ಮತ್ತು ದಣಿವನ್ನು ಅನುಭವಿಸುತ್ತಾರೆ. ನೀವು ಸ್ವಲ್ಪ ಸಮಯದವರೆಗೆ ಈ ರೋಗ ಲಕ್ಷಣಗಳನ್ನು ಗಮನಿಸುವುದನ್ನು ಮುಂದುವರಿಸಿದರೆ, ನೀವು ಮಧುಮೇಹ ಟೆಸ್ಟ್ ಮಾಡಿಸಿಕೊಳ್ಳುವುದನ್ನು ಮರೆಯದಿರಿ. 

ಆಗಾಗ ಮೂತ್ರ ವಿಸರ್ಜನೆ, ವಿಪರೀತ ಬಾಯಾರಿಕೆ: ಮಧುಮೇಹದಿಂದ ಬಳಲುತ್ತಿರುವಾಗ, ನಿಮ್ಮ ದೇಹವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದ್ರವಗಳನ್ನು ಬಳಸುತ್ತದ. ನಿಮ್ಮ ದೇಹವು ಹೆಚ್ಚು ಮೂತ್ರವನ್ನು ಮಾಡಲು ಕಾರಣವಾಗುತ್ತದೆ. ಅಲ್ಲದೆ, ನೀವು ಹೆಚ್ಚಾಗಿ ಮೂತ್ರ ವಿಸರ್ಜಿಸುತ್ತಿರುವ ಕಾರಣ, ನೀವು ಸಾಮಾನ್ಯಕ್ಕಿಂತ ಹೆಚ್ಚು ಬಾಯಾರಿಕೆಯನ್ನು ಅನುಭವಿಸಬಹುದು.

ಒಣ ಬಾಯಿ ಮತ್ತು ಚರ್ಮದಲ್ಲಿ ತುರಿಕೆ: ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಿರುವುದರಿಂದ, ಆಗಾಗ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಲ್ಲಿ ತೇವಾಂಶದ ಕೊರತೆ ಕಂಡು ಬರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ನಿಮ್ಮ ಬಾಯಿ ಆಗಾಗ ಒಣಗಲು ಶುರುವಾಗಬಹುದು. ಚರ್ಮದಲ್ಲಿ (Skin) ತೇವಾಂಶದ ಕೊರತೆ ಕಂಡು ಬಂದಾಗ ತುರಿಕೆ ಸಹ ಕಾಣಿಸಿಕೊಳ್ಳಬಹುದು.

ಮಂದ ದೃಷ್ಟಿ: ದೇಹವು ದ್ರವಗಳ ಏರಿಳಿತದ ಮಟ್ಟವನ್ನು ಹೊಂದಿರುವಾಗ, ಕಣ್ಣುಗಳಲ್ಲಿನ ಮಸೂರಗಳು ಊತವನ್ನು ಅನುಭವಿಸಬಹುದು. ಇದು ನಿಮ್ಮ ಕಣ್ಣುಗಳ ದೃಷ್ಟಿಯಲ್ಲಿ ವ್ಯತ್ಯಾಸವನ್ನು ತರಬಹುದು. ಇದು ದೃಷ್ಟಿ ಮಂದವಾಗಲು ಕಾರಣವಾಗುತ್ತದೆ. ಮುಂದಿನ ಬಾರಿ ನೀವು ಕಣ್ಣಿನಲ್ಲಿ (Eyes) ಯಾವುದೇ ಸಮಸ್ಯೆಯನ್ನು ಗಮನಿಸಿದಾಗ ಅಥವಾ ಸರಿಯಾಗಿ ನೋಡಲು ಸಾಧ್ಯವಾಗದಿದ್ದಾಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

click me!