ಕೋವಿಡ್ ಬಳಿಕ ಇದೀಗ ಚೀನಾದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಸೋಂಕು ವಿಶ್ವದ ನಿದ್ದೆಗೆಡಿಸಿದೆ. ನಿಗೂಢ ಸ್ವರೂಪದ ನ್ಯುಮೋನಿಯಾ H9n2 ಸೋಂಕು ಚೀನಾ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ. ದಿನದಂದ ದಿನಕ್ಕೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಆರೋಗ್ಯ ಇಲಾಖೆ, ಪ್ರಕರಣದ ಕುರಿತು ತೀವ್ರ ನಿಘಾವಹಿಸಲು ಸೂಚಿಸಲಾಗಿದೆ.
ನವದೆಹಲಿ(ನ.24) ಚೀನಾದಲ್ಲಿ ಕಾಣಿಸಿಕೊಂಡಿರುವ ನಿಗೂಢ ಸ್ವರೂಪದ ನ್ಯುಮೋನಿಯಾ H9n2 ಸೋಂಕು ಹಲವು ದೇಶಗಳ ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಈ ಪ್ರಕರಣದ ಕುರಿತು ತೀವ್ರ ನಿಘಾವಹಿಸಲು ಸೂಚನೆ ನೀಡಿದೆ. ಇದೇ ವೇಳೆ ಈ ಸೋಂಕಿನಿಂದ ಭಾರತಕ್ಕೆ ಹೆಚ್ಚಿನ ಅಪಾಯವಿಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಗಂಭೀರತೆಯನ್ನು ಅರಿತಿರುವ ಭಾರತ ಸರ್ವ ಸನ್ನದ್ಧವಾಗಿದೆ. ಮುನ್ನಚ್ಚೆರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದೆ.
ಭಾರತ ಯಾವುದೇ ತುರ್ತು ಪರಿಸ್ಥಿತಿಗೆ ಸಜ್ಜಾಗಿದೆ. ಆರೋಗ್ಯ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಭಾರತದಲ್ಲಿ ಈ ಸೋಂಕು ಹರಡುವ ಸಾಧ್ಯತೆಗಳು ಕ್ಷೀಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವಾಲಯಕ್ಕೆ ಎಚ್ಚರಿಕೆ ನೀಡಿದೆ. ಪ್ರಕರಣದ ಕುರಿತು ತೀವ್ರ ನಿಘಾವಹಿಸುವಂತೆ ಸೂಚಿಸಿದೆ.
ಚೀನಾದಲ್ಲಿ ಕೋವಿಡ್ ನಂತ್ರ ಮತ್ತೊಂದು ನಿಗೂಢ ಸಾಂಕ್ರಾಮಿಕ, ನಮ್ ದೇಶಕ್ಕೂ ಕಾಲಿಡುತ್ತಾ?
H9n2 ಸೋಂಕಿನಿಂದ ಆಸ್ಪತ್ರೆ ದಾಖಲಾಗುವ ಮಕ್ಕಳ ದಿಡೀರ್ ಏರಿಕೆಯಾಗಿದೆ. ರಾಜಧಾನಿ ಬೀಜಿಂಗ್ ಮತ್ತು ರಾಜಧಾನಿಯಿಂದ 500 ಮೈಲು ದೂರದ ನಿಯಾನ್ನಿಂಗ್ ಮತ್ತು ಇತರೆ ಕೆಲ ಪ್ರಾಂತ್ಯದಲ್ಲಿ ಈ ಸೋಂಕು ತೀವ್ರವಾಗಿ ಹರಡಿದೆ. ಹೀಗಾಗಿ ಈ ಪ್ರಾಂತ್ಯದ ಶಾಲೆಗಳ ಮಕ್ಕಳು ಹೆಚ್ಚಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಇಷ್ಟೇ ಅಲ್ಲ ಈ ಭಾಗದ ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿದೆ. ಇದು ಚೀನಾ ಆತಂಕ ಹೆಚ್ಚಿಸಿದೆ.
ಸೋಂಕು ತಗುಲಿದ ಮಕ್ಕಳು ಶ್ವಾಸಕೋಶದ ಉರಿ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಫ್ಲ್ಯೂ, ಆರ್ಎಸ್ವಿ ಅಥವಾ ಕೋವಿಡ್ನಂಥ ಇತರೆ ಶ್ವಾಸಕೋಶ ಸಂಬಂಧಿ ಸಮಸ್ಯೆ ವೇಳೆ ಕಾಣಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿಲ್ಲ.ಥೀ ಕಾಯಿಲೆ ಕಳವಳಕ್ಕೆ ಕಾರಣವಾಗಿದೆ. ದೇಶದಲ್ಲಿ ಚಳಿಗಾಲ ವ್ಯಾಪಕವಾಗುತ್ತಿರುವ ಹೊತ್ತಿನಲ್ಲೇ ಕಾಣಿಸಿಕೊಂಡ ಈ ಸೋಂಕು ಪ್ರಸಕ್ತ ವಾತಾವರಣದಲ್ಲಿ ಇನ್ನಷ್ಟು ವ್ಯಾಪಕವಾಗುವ ಆತಂಕವೂ ಇದೆ. ಕೋವಿಡ್ ರೀತಿ ಜಗತ್ತಿಗೆ ಈ ಸೋಂಕು ಹರಡುವ ಸಾಧ್ಯತೆ ಕುರಿತು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೆ ಭಯ ಬೀಳಿಸುತ್ತಿದ್ದಾನೆ ಕೊರೊನಾ ರಾಕ್ಷಸ: ಅನಿರೀಕ್ಷಿತ ಸಾವುಗಳ ಹಿಂದಿದೆ ಕೋವಿಡ್ ಕೈವಾಡ?
ಕೋವಿಡ್ ರೀತಿಯಲ್ಲೇ ಚೀನಾ ಇದೀಗ H9n2 ಸೋಂಕು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ. ಚೀನಾದ ಒಂದು ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಸಹಜ ಅನಾರೋಗ್ಯ ಅನ್ನೋ ರೀತಿ ಜಗತ್ತಿಗೆ ಬಂಬಿಸುವ ಪ್ರಯತ್ನ ಮಾಡುತ್ತಿದೆ ಅನ್ನೋ ಮಾತುಗಳು ಇದೀಗ ಕೇಳಿಬರುತ್ತಿದೆ.