24 ಗಂಟೆಯಲ್ಲಿ ಹೃದಯಾಘಾತಕ್ಕೆ 14 ಬಲಿ ಬೆಚ್ಚಿಬೀಳಿಸುತ್ತಿದೆ ಕಾನ್ಪುರದ ಸ್ಥಿತಿ

By Suvarna NewsFirst Published Jan 9, 2023, 10:40 AM IST
Highlights

ಚಳಿ ವಿಪರೀತ ಕಾಡ್ತಿದೆ. ಇದ್ರಿಂದಾಗಿ ಎಲ್ಲರ ಆರೋಗ್ಯ ಹದಗೆಡುತ್ತಿದೆ. ಉತ್ತರ ಪ್ರದೇಶದಲ್ಲಿ ಶೀತಕ್ಕೆ ಸಾವು ಹೆಚ್ಚಾಗ್ತಿದೆ. ಒಂದು ವಾರದಲ್ಲಿ ಕಾನ್ಪುರದಲ್ಲಿ ಹೃದಯಾಘಾತ ಹಾಗೂ ಬ್ರೇನ್ ಸ್ಟ್ರೋಕ್ ಗೆ ಸಾವನ್ನಪ್ಪಿರುವವರ ಸಂಖ್ಯೆ ಭಯ ಹುಟ್ಟಿಸಿದೆ.
 

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗ್ತಿದೆ. ಹಿಂದೆ ವಯಸ್ಸಾದ್ಮೇಲೆ ಕಾಡ್ತಿದ್ದ ಸಮಸ್ಯೆ ಎಂದೇ ಹೆಸರಾಗಿದ್ದ ಹೃದಯಾಘಾತ ಈಗ ಬಾಲಕರನ್ನು ಕೂಡ ಬಿಡ್ತಿಲ್ಲ. ಕೊಡಗು ಜಿಲ್ಲೆಯ ಕೊಪ್ಪಭಾರತ ಮಾತಾ ಶಾಲೆ ವಿದ್ಯಾರ್ಥಿ ಕೀರ್ತನ್ 12ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಕೆಲ ದಿನಗಳ ಹಿಂದೆ ಕಲಘಟಗಿಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಹೃದಯಾಘಾದಿಂದ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿತ್ತು. ಈಗ ಉತ್ತರ ಪ್ರದೇಶದ ಕಾನ್ಪುರ ಸುದ್ದಿಯಲ್ಲಿದೆ.

ಕಾನ್ಪುರ (Kanpur) ದಲ್ಲಿ ನಡೆಯುತ್ತಿದೆ ಆಘಾತಕಾರಿ ಸಾವು (Death) : 
ಚಳಿಗಾಲದಲ್ಲಿ ಹೃದಯಾಘಾತ (Heartattack)ದ ಅಪಾಯ ಹೆಚ್ಚು. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಜ್ಞರು ಸಲಹೆ ನೀಡ್ತಿರುತ್ತಾರೆ. ಆದ್ರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಹೃದಯಾಘಾತ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕಾನ್ಪುರದಲ್ಲಿ ಕಳೆದ ಐದು ದಿನಗಳಿಂದ ಹೃದಯಾಘಾತ ಮತ್ತು ಮೆದುಳಿನ ಸ್ಟ್ರೋಕ್‌ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

New Year : ಹೊಸ ವರ್ಷದ ಸಂಭ್ರಮದಲ್ಲಿ ಹಾರ್ಟ್ ಅಟ್ಯಾಕ್ ಆಗ್ಬಹುದು ಎಚ್ಚರ…

ಐದು ದಿನಗಳಲ್ಲಿ ಇಷ್ಟೊಂದು ಸಾವು? :  ಕಾನ್ಪುರದಲ್ಲಿ ಹೃದಯಾಘಾತ ಹಾಗೂ ಮೆದುಳು ಸ್ಟ್ರೋಕ್ ನಿಂದ ಬರೋಬ್ಬರಿ 98 ಜನರು ಸಾವನ್ನಪ್ಪಿದ್ದಾರೆ. ಅದು ಬರೀ ಐದು ದಿನಗಳಲ್ಲಿ ಎನ್ನುವುದು ಮತ್ತಷ್ಟು ಆಘಾತಕಾರಿಯಾಗಿದೆ. ಎಲ್ಪಿಎಸ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿದೆ ಈ ಅಂಕಿಅಂಶಗಳು ಬೆಚ್ಚಿಬೀಳಿಸುವಷ್ಟು ಭಯಾನಕವಾಗಿವೆ. ಈ 98 ಸಾವುಗಳಲ್ಲಿ  44 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 54 ರೋಗಿಗಳು ಚಿಕಿತ್ಸೆಗೆ ಮುಂಚೆಯೇ ಸಾವನ್ನಪ್ಪಿದ್ದಾರೆ.  

ಹೃದಯಾಘಾತಕ್ಕೆ ಕಾರಣವಾಯ್ತಾ ಚಳಿ ? : ವರದಿ ಪ್ರಕಾರ, ತೀವ್ರ ಚಳಿಯಿಂದ ಬಳಲುತ್ತಿದ್ದ 14 ರೋಗಿಗಳು ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾನ್ಪುರದಲ್ಲಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ಮತ್ತು ಹೊರರೋಗಿ ವಿಭಾಗಕ್ಕೆ ಚಿಕಿತ್ಸೆಗೆ ಬಂದಿದ್ದಾರೆ. ಅವರಲ್ಲಿ ಆರು ಮಂದಿ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ  ಮೃತಪಟ್ಟಿದ್ದಾರೆ. ಎಂಟು ಜನರನ್ನು ಇನ್ಸ್ಟಿಟ್ಯೂಟ್ ಗೆ ಕರೆತರಲಾಯಿತು.  ನಗರದ ಎಸ್‌ಪಿಎಸ್ ಹೃದ್ರೋಗ ಸಂಸ್ಥೆಯಲ್ಲಿ ಕಳೆದ 24 ಗಂಟೆಗಳಲ್ಲಿ 14 ರೋಗಿಗಳು ಸಾವನ್ನಪ್ಪಿದ್ದಾರೆ. ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 54 ಹೊಸ ಮತ್ತು 27 ಹಳೆಯ ರೋಗಿಗಳು ಸೇರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  

ಹೃದಯಾಘಾತಕ್ಕೆ ವಯಸ್ಸಿನ ಮಿತಿಯಿಲ್ಲ : ಚಳಿಯಿಂದ ರೋಗಿಯನ್ನು ರಕ್ಷಿಸುವುದು ಬಹಳ ಮುಖ್ಯವೆಂದು ಹೃದ್ರೋಗ ವಿಭಾಗದ ನಿರ್ದೇಶಕ ವಿನಯ್ ಕೃಷ್ಣ ಹೇಳಿದ್ದಾರೆ. ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು, ಈ ಚಳಿಯ ವಾತಾವರಣದಲ್ಲಿ ಹೃದಯಾಘಾತ  ಯಾವ ವಯಸ್ಸಿನವರನ್ನು ಕೂಡ ಕಾಡಬಹುದು. ಇದು ವಯಸ್ಸಾದವರಿಗೆ ಸೀಮಿತವಾಗಿಲ್ಲ. ಹದಿಹರೆಯದವರೂ ಹೃದಯಾಘಾತಕ್ಕೆ ಒಳಗಾದ ಪ್ರಕರಣಗಳ  ಹೆಚ್ಚಾಗ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದಿದ್ದಾರೆ. 

ಚಳಿಗಾಲದಲ್ಲಿ ಕುಗ್ಗುವ ರಕ್ತನಾಳ, ಹೀಗೆ ಮಾಡಿಲ್ಲಾಂದ್ರೆ ಹಾರ್ಟ್‌ ಅಟ್ಯಾಕ್‌ ಗ್ಯಾರಂಟಿ

ಚಳಿಗಾಲದಲ್ಲಿ ಹೃದಯಾಘಾತ ತಪ್ಪಿಸಲು ಸಲಹೆಗಳು : 
1. ಉತ್ತರ ಪ್ರದೇಶ ಮಾತ್ರವಲ್ಲ ಬೆಂಗಳೂರು ಸೇರಿದಂತೆ ನಮ್ಮ ರಾಜ್ಯದಲ್ಲೂ ಚಳಿ ವಿಪರೀತವಾಗಿದೆ. ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸುವುದು ಮುಖ್ಯ. ಬೆಳಿಗ್ಗೆ ಹಾಗೂ ರಾತ್ರಿ ಚಳಿ ವಿಪರೀತವಿರುವ ಕಾರಣ ಈ ಸಮಯದಲ್ಲಿ ಮನೆಯಿಂದ ಹೊರಗೆ ಹೋಗದಿರುವುದು ಒಳ್ಳೆಯದು. 
2. ಚಳಿಯಲ್ಲಿ ಹೊರಗೆ ಹೋಗುವುದು ಅನಿವಾರ್ಯ ಎನ್ನುವವರು ಬೆಚ್ಚಗಿನ ಬಟ್ಟೆ ಧರಿಸಬೇಕು.
3. ಬೆಳಗಿನ ಜಾವದಲ್ಲಿ ವ್ಯಾಯಾಮ ಮಾಡದಿರುವುದು ಒಳ್ಳೆಯದು. ಚಳಿಗಾಲದಲ್ಲಿ ಬೆಳಿಗ್ಗೆ 7 -8 ಗಂಟೆಯ ಸಮಯದಲ್ಲಿ ವ್ಯಾಯಾಮ ಮಾಡಿ.
4. ಚಳಿಗಾಲದಲ್ಲಿ ಧೂಮಪಾನದಿಂದ ದೂರವಿರಿ. ಹಾಗೆಯೇ ಬ್ರಿಸ್ಕ್ ವಾಕ್ ಮಾಡುವುದು ಒಳ್ಳೆಯದು. ಬೆಳಿಗ್ಗೆ ಮತ್ತು ರಾತ್ರಿ ಬದಲು ಮಧ್ಯಾಹ್ನ ನೀವು ವಾಕ್ ಮಾಡಿ. 
5. ಆರೋಗ್ಯಕರ ಹಾಗೂ ಹೃದಯದ ಆರೋಗ್ಯ ಕಾಪಾಡುವ ಆಹಾರ ಸೇವನೆ ಮಾಡಿ. 

click me!