ಹೊರಟೋದ ಮೇಲೆ ಅತ್ತೇನು ಫಲ: ಆಕೆಯ ಜೊತೆ ಹೆಚ್ಚಿನ ಸಮಯ ಕಳೆಯಲಾಗಲಿಲ್ಲ... ಸಂಜಯ್ ದತ್

First Published Jan 6, 2024, 4:49 PM IST

ಸೋನಿ ಟಿವಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ರಿಯಾಲಿಟಿ ಶೋದ 14 ನೇ ಸೀಸನ್‌ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಹಿರಿಯ ನಟ ಸಂಜಯ್ ದತ್‌ ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದು, ಹಲವು ವಿಚಾರಗಳನ್ನು ಈ ಶೋದಲ್ಲಿ ಹಂಚಿಕೊಂಡಿದ್ದರು. ಅದರ ಡಿಟೇಲ್ ಇಲ್ಲಿದೆ. 

ಬಾಲಿವುಡ್ ನಟ ಸಂಜಯ್ ದತ್  ಬಾಲಿವುಡ್‌ನ ಪ್ರತಿಭಾವಂತ ನಟ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ,  ತನ್ನ ಅಭಿಮಾನಿಗಳ ಮನ ರಂಜಿಸುವುದರಲ್ಲಿ ಯಾವತ್ತೂ ಹಿಂದೆ ಬೀಳದ ಈ ನಟನ ವೈಯಕ್ತಿಕ ಜೀವನ ಮಾತ್ರ ಹಲವು ಏಳುಬೀಳುಗಳಿಂದ ಕೂಡಿತ್ತು.  

ಲೆಜೆಂಡರಿ ನಟ ಸುನೀಲ್ ದತ್ ನಟಿ ನರ್ಗೀಸ್‌ ದತ್ ಪುತ್ರನಾದ ಸಂಜಯ್ ದತ್ 1981ರಲ್ಲಿ ರಾಕಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅದೇ ವರ್ಷ ತಾಯಿಯನ್ನು ಕಳೆದುಕೊಂಡ ನಟನ ಬದುಕು ಪಡೆಯಬಾರದ ತಿರುವು ಪಡೆದುಕೊಂಡಿತ್ತು. 

ಇಂಡಿಯನ್ ಐಡಿಯಲ್ 14ನೇ ಶೋಗೆ ಆಗಮಿಸಿದ  ಸಂಜಯ್ ದತ್‌ಗೆ ಕಾರ್ಯಕ್ರಮದಲ್ಲಿ ಗಾಯಕಿ ಶ್ರೇಯಾ ಘೋಷಲ್ ಅವರು ಪೋಷಕರ ಬಗ್ಗೆ ಕೇಳಿದ್ದಾರೆ. ಇದಕ್ಕೆ ನಟ ಭಾವುಕರಾಗಿ ಉತ್ತರಿಸಿದ್ದಾರೆ. ನಾವು ನಮ್ಮ ಪೋಷಕರನ್ನು ಬಹಳ ಕೇವಲವಾಗಿ ಪರಿಗಣಿಸುತ್ತೇವೆ ಏಕೆಂದರೆ ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಸಂಜಯ್ ದತ್ ಹೇಳಿದ್ದಾರೆ.

 ಅಮ್ಮನ ಕಳೆದುಕೊಂಡ ನಂತರ ಖಿನ್ನತೆಗೆ ಜಾರಿದ್ದ ಸಂಜಯ್ ದತ್ ಡ್ರಗ್ಸ್‌ಗೆ ದಾಸರಾಗಿದ್ದರು. ಈ ವೇಳೆ ತಂದೆ ಸುನೀಲ್ ದತ್‌ ಜೊತೆಗಿದ್ದು, ಮಗನಿಗೆ ನೆರವಾದರಾದರೂ ಅಮ್ಮನನ್ನು ಬಹಳವಾಗಿ ಹಚ್ಚಿಕೊಂಡಿದ್ದ ಸಂಜಯ್‌ಗೆ ಆಕೆಯ ಅಗಲಿಕೆಯಿಂದ ಹೊರಬರಲು ಬಹಳ ಸಮಯವೇ ಬೇಕಾಯಿತು.  ಇಂತಹ ಸಂಜಯ್ ದತ್ ಈಗ ಟಿವಿಶೋದಲ್ಲಿ ಮತ್ತೆ ತಮ್ಮಮ್ಮನನ್ನು ನೆನಪು ಮಾಡಿಕೊಂಡಿದ್ದಾರೆ. 

ಅಲ್ಲದೇ ಮುಂದುವರೆದು, ಅಮ್ಮನೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡ ಸಂಜಯ್ ದತ್, ಸಂಜಯ್‌ ನನ್ನ ಜೊತೆ ಕುಳಿತುಕೋ, ನನ್ನ ಜೊತೆ ಸ್ವಲ್ಪ ಹೊತ್ತು ಸಮಯ ಕಳೆ ಏಕೆಂದರೆ ನಾನು ಹೊರಟು ಹೋದ ಮೇಲೆ ನೀನು ತುಂಬಾ ಬೇಜಾರು ಪಡುವೆ ಎಂದು ಆಕೆ ಹೇಳಿದ್ದಳು.

ಆಗ ಆಕೆಯ ಮಾತು ಕೇಳಲಿಲ್ಲ, ಆದರೆ ಈಗ, ನಾನು ಅಂದು ಆಕೆಯ ಜೊತೆ ಸ್ವಲ್ಪ ಸಮಯ ಕಳೆಯಬೇಕಿತ್ತು ಎನಿಸುತ್ತಿದೆ.  ಆ ದಿನಗಳಲ್ಲಿ ಸ್ವಲ್ಪ ಗಂಟೆಗಳನ್ನಾದರೂ ಆಕೆಯ ಜೊತೆ ಕಳೆದಿದ್ದರೆ ಈಗ ನನಗೆ ಈ ರೀತಿ ಅಪರಾಧಿ ಭಾವ ಇರುತ್ತಿರಲಿಲ್ಲ ಎಂದು ಹೇಳಿಕೊಂಡು ಭಾವುಕರಾಗಿದ್ದಾರೆ  ಸಂಜಯ್ ದತ್

ಅಲ್ಲದೇ ಬಾಲಿವುಡ್‌ನಲ್ಲಿ ಕೈ ತುಂಬಾ ಅವಕಾಶಗಳಿದ್ದಂತಹ ಸಂದರ್ಭದಲ್ಲೇ  ಮಕ್ಕಳ ಪಾಲನೆಗಾಗಿ ನಟಿ ನರ್ಗೀಸ್‌ ದತ್ ಬಾಲಿವುಡ್‌ ತೊರೆದಿದ್ದರು. 

ಸಂಜಯ್ ದತ್‌ಗೆ ಅಮ್ಮನ ಮೇಲೆ ಎಲ್ಲರಿಗಿಂತ ವಿಶೇಷವಾದ ಭಾವನೆ ಇತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ,  ಅವರ ಜೀವನಕತೆ ಆಧರಿತ ರಾಜ್‌ಕುಮಾರ್ ಹಿರಾನಿ ಅವರ ಸಂಜು ಸಿನಿಮಾದಲ್ಲಿಈ ಅಮ್ಮ ಮಗನ ಈ ಬಾಂಧವ್ಯವನ್ನು ಬಹಳ ಚೆನ್ನಾಗಿ ಬಣ್ಣಿಸಲಾಗಿದೆ.   

ತನ್ನ ಹಾಗೂ ಸೋದರಿಯರಾದ ನಮೃತಾ ದತ್ ಹಾಗೂ ಪ್ರಿಯಾದತ್‌ ಅವರ ಪಾಲನೆಗಾಗಿ ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ಸಿನಿಮೋದ್ಯಮವನ್ನು ಅಮ್ಮ ತೊರೆದಿದ್ದನ್ನು ನೆನಪು ಮಾಡಿಕೊಂಡಿದ್ದರು.  ಅಲ್ಲದೇ ಯಾವ ಮಕ್ಕಳು ಕೂಡ ಪೋಷಕರನ್ನು ಲಘುವಾಗಿ ಪರಿಗಣಿಸಬಾರದು ಎಂದು ಹಲವು ಸಂದರ್ಶನಗಳಲ್ಲಿ ಸಂಜಯ್ ದತ್ ಹೇಳಿದ್ದಾರೆ. 

ಸಂಜಯ್ ದತ್‌ ತನ್ನ ಅಮ್ಮನ ಸಾವಿನ ನಂತರ ತಾನು ಯಾವತ್ತೂ ಕೂಡ ಅತ್ತೆ ಇಲ್ಲ ಎಂಬುದನ್ನು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ಅಮ್ಮ ತೀರಿಕೊಂಡ ಎರಡು ವರ್ಷಗಳ ಬಳಿಕ ಸಂಜಯ್ ಸ್ನೇಹಿತರೊಬ್ಬರು ಅಮ್ಮ ನರ್ಗೀಸ್ ಧ್ವನಿ ಇರುವ ಆಡಿಯೋವೊಂದನ್ನು ಪ್ಲೇ ಮಾಡಿದ್ದರಂತೆ. 

. ಆ ಆಡಿಯೋದಲ್ಲಿ ಅವರು ಮಗನಿಗೆ ಜೀವನದ ಕೆಲ ಮೌಲ್ಯಗಳನ್ನು ಹೇಳಿದ್ದರು. ಬದುಕಿನಲ್ಲಿ ಒಳ್ಳೆಯದನ್ನು ಮಾಡುವಂತೆ, ಪ್ರಾಮಾಣಿಕವಾಗಿ ಇರುವಂತೆ ಹೇಳಿದ್ದರು.  ಇದನ್ನು ಕೇಳಿದ ನಂತರ ಮನಸ್ಸಿಗೇನೋ ಅನಿಸಲಾರಂಭಿಸಿ ಕನಿಷ್ಟ 4 ರಿಂದ 5 ಗಂಟೆ ನಿರಂತರವಾಗಿ ಅತ್ತಿದ್ದಾಗಿ ಹೇಳಿಕೊಂಡಿದ್ದರು ನಟ.

 ಅಲ್ಲದೇ ಅಮ್ಮನ ಬಗ್ಗೆ ಮನಸಿನಲ್ಲಿದ್ದದ್ದೆಲ್ಲವನ್ನು ಹೊರ ಹಾಕಿ ಹಗುರವಾಗಿದ್ದರಂತೆ ಅದಾದ ನಂತರವೇ ತನ್ನ ಜೀವನ ಸಂಪೂರ್ಣವಾಗಿ ಬದಲಾಯ್ತು ಎಂದು ಹೇಳಿಕೊಂಡಿದ್ದರು ನಟ.

ಇಂತಹ ಸಂಜಯ್‌ ದತ್  1988ರಲ್ಲಿ ನಟಿ ರೀಚಾ ಶರ್ಮಾರನ್ನು ಮದುವೆಯಾಗಿದ್ದರು. ಇವರ ದಾಂಪತ್ಯದಲ್ಲಿ ಮಗಳು ತ್ರಿಶಾಲಾ ದತ್ ಜನಿಸಿದ್ದಳು. ಇದಾದ ನಂತರ 1996ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿದ್ದರು. 1997ರಲ್ಲಿ ರಿಯಾ ಪಿಳ್ಳೈ ಅವರನ್ನು ಮದುವೆಯಾಗಿದ್ದರು. ಆದರೆ 2008ರಲ್ಲಿ ಈ ಮದುವೆಯೂ ಮುರಿದು ಬಿತ್ತು. ನಂತರ 2008ರಲ್ಲಿ ಮಾನ್ಯತಾ ದತ್ ಅವರನ್ನು ಮದುವೆಯಾದ ಸಂಜಯ್ ದತ್ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 

click me!