
ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು ಬರುವುದು ಹಲವರಿಗೆ ಆಗಬಹುದು. ಮೂತ್ರನಾಳದ ಸೋಂಕು (UTI), ಪ್ರೊಸ್ಟೇಟ್ ಸೋಂಕು ಅಥವಾ ಮೂತ್ರನಾಳದ ಸೆಳೆತಗಳಿಂದ ಇವು ಆಗುವ ಸಾಧ್ಯತೆ ಇದೆಯಾದರೂ ಹೆಚ್ಚಿನವರಿಗೆ ಹೀಟ್ ಹೆಚ್ಚಾದಾಗ ಹೀಗೆ ಆಗುವುದು ಇದೆ.
ನೀರನ್ನು ಹೆಚ್ಚಿಗೆ ಸೇವನೆ ಮಾಡದಿದ್ದ ಸಂದರ್ಭದಲ್ಲಿ ಉರಿಮೂತ್ರ ಆಗುವುದು ಸರ್ವೇ ಸಾಮಾನ್ಯ. ಆದರೆ ಹಲವರು ಇಂಥ ಸಮಸ್ಯೆ ಬಂದಾಗಲೂ ಟ್ಯಾಬ್ಲೆಟ್ಗಳ ಮೊರೆ ಹೋಗುವುದು ಇದೆ. ಆದರೆ ಹಾಗೆ ಮಾಡದೇ ಸುಲಭದಲ್ಲಿ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿರೋ ಟಿಪ್ಸ್ ಕೇಳಿ...
ಸುಲಭದ ಉಪಾಯ ಎಂದರೆ ಬೂದುಗುಂಬಳ ಕಾಯಿಯ ರಸವನ್ನು ಕುಡಿಯುವುದು. ಬೂದುಗುಂಬಳ ತುಂಬಾ ತಂಪು. ಆದ್ದರಿಂದ ಕುಂಬಳಕಾಯಿಯನ್ನು ತುರಿದು ಅದರ ರಸವನ್ನು ಹಿಂಡಿ ಕುಡಿಯುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಹೀಗೆ ಮಾಡಿದ್ದೇ ಆದಲ್ಲೆ ಉರಿಮೂತ್ರವು ಶಮನವಾಗುತ್ತದೆ.
ಹೆಸರುಕಾಳು ಕೂಡ ತಂಪಾಗಿರುವ ಕಾರಣ, ಅದನ್ನು ತಿಂದರೂ ಉರಿಮೂತ್ರವನ್ನು ಕಡಿಮೆ ಮಾಡಿಕೊಳ್ಳಬಹುದು. ಅದ್ಭುತವಾದ ಇನ್ನೊಂದು ಔಷಧವಿದೆ. ಅದು ಹರಳೆಣ್ಣೆ. ಹರಳೆಣ್ಣೆಯಿಂದ ಹಲವಾರು ಉಪಯೋಗಗಳು ಇವೆ. ಇದು ತುಂಬಾ ತಂಪು ಪ್ರಕೃತಿಯನ್ನು ಹೊಂದಿರುವ ಕಾರಣ, ಹರಳೆಣ್ಣೆಯನ್ನು ಸ್ವಲ್ಪ ಹೊಕ್ಕಳಿಗೆ, ಅನಾಹುತ ಮತ್ತು ವಿಷುದ್ಧಿ ಅಂದರೆ ಹೃದಯ ಮತ್ತು ಗಂಟಲ ಬಳಿ ಹಚ್ಚಬೇಕು. ಹಣೆಯ ಮೇಲೆ ಹಾಗೂ ಎರಡೂ ಕಿವಿಗಳ ಹಿಂಭಾಗದಲ್ಲಿ ಐದೇ ನಿಮಿಷಗಳಲ್ಲಿ ದೇಹ ತಣ್ಣಗಾಗುತ್ತದೆ. ಈಗ ಬಾತ್ರೂಮ್ಗೆ ಹೋಗಿ ನೋಡಿ ಎಂದಿದ್ದಾರೆ ಜಗ್ಗಿ ವಾಸುದೇವ ಅವರು.
ಅಷ್ಟಕ್ಕೂ, ಮೂತ್ರ ವಿಸರ್ಜನೆ ವೇಳೆ ಉರಿಯೂತ ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಮಲ-ಮೂತ್ರಗಳು ಸರಾಗವಾಗಿ ಆಗುತ್ತಿದ್ದರೆ ಮಾತ್ರ ಆರೋಗ್ಯ. ಇಲ್ಲದೇ ಹೋದರೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮೊದಲೇ ಹೇಳಿದ ಹಾಗೆ ಉಷ್ಣ (Heat) ಹೆಚ್ಚಾದರೆ ಉರಿಮೂತ್ರ ಕಾಣಿಸಿಕೊಳ್ಳುತ್ತದೆ. ಹೆರಿಗೆಯ ನಂತರ ಯೋನಿ ಕಣ್ಣೀರು ಇದ್ದರೆ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಉರಿ ಉಂಟಾಗಬಹುದು.
ಯಾವುದೋ ಕಾರ್ಯನಿಮಿತ್ತ ಎಲ್ಲಿಗೋ ಹೋದಾಗ ಅಥವಾ ದೀರ್ಘ ಪ್ರಯಾಣದ ಸಮಯದಲ್ಲಿ ಮೂತ್ರ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ನೀರು ಕುಡಿಯದೇ ಹೋದಾಗ ಉರಿಮೂತ್ರ ಕಾಣಿಸಿಕೊಳ್ಳುವುದು ಸಹಜ. ಇಲ್ಲದೇ ಹೋದರೆ, ದೇಹಕ್ಕೆ ಉಷ್ಣಕಾರದ ಎನ್ನಿಸಿರುವ ಆಹಾರ ಸೇವನೆಯಿಂದಲೂ ಇದು ಉಂಟಾಗುತ್ತದೆ.
ಆದ್ದರಿಂದ ಈ ಟಿಪ್ಸ್ ಫಾಲೋ ಮಾಡಿದರೆ ಉರಿಮೂತ್ರ ಸಮಸ್ಯೆಯಿಂದ ಸುಲಭದಲ್ಲಿ ಪರಿಹಾರ ಕಂಡುಕೊಳ್ಳಬಹುದು. ವೈದ್ಯರು ಹೇಳುವ ಪ್ರಕಾರ, ನಾವು ದಿನನಿತ್ಯ ಕನಿಷ್ಠ ಒಂದೆರಡು ಲೀಟರ್ ನೀರು ಕುಡಿಯಲೇಬೇಕು. ದೇಹ ರಚನೆಗೆ ತಕ್ಕಂತೆ ನೀರಿನ ಪ್ರಮಾಣ ಬದಲಾದರೂ ಇಷ್ಟು ಪ್ರಮಾಣವಾದರೂ ಕುಡಿಯಲೇ ಬೇಕು. ಇದರ ಹೊರತಾಗಿಯೂ ಹಲವಾರು ಕಾರಣಗಳಿಂದ ಉರಿಮೂತ್ರ ಆಗಬಹುದು. ಆಗ ವೈದ್ಯರ ಸಲಹೆ ಮೇರೆಗೆ ನಡೆದುಕೊಳ್ಳುವುದು ಉತ್ತಮ.
ಇದರಿಂದ ದೇಹದ ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ ಮಾತ್ರವಲ್ಲದೇ ದೇಹದಲ್ಲಿ ಕಂಡು ಬರುವ ವಿಷಕಾರಿ ಅಂಶಗಳು ಮೂತ್ರ ವಿಸರ್ಜನೆಯ ಮೂಲಕ ಹೊರ ಹೋಗುತ್ತದೆ. ಆದ್ದರಿಂದ ಕಾಲ ಯಾವುದೇ ಇರಲಿ, ನೀರು ಧಾರಾಳವಾಗಿ ಕುಡಿಯಬೇಕು.