ಬಾಣಂತಿ ಈ ಆಹಾರ ಸೇವಿಸಿದರೆ ಶಿಶುವಿಗೆ ಹೃದ್ರೋಗ! ಎಚ್ಚರ

Published : Sep 13, 2020, 12:26 PM IST
ಬಾಣಂತಿ  ಈ ಆಹಾರ ಸೇವಿಸಿದರೆ ಶಿಶುವಿಗೆ ಹೃದ್ರೋಗ! ಎಚ್ಚರ

ಸಾರಾಂಶ

ಬಾಣಂತಿ ಆರೋಗ್ಯದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಇದೀಗ ಬಾಣಂತಿ ಇಂತಹ ಆರೋಗ್ಯ ಸೇವಿಸಿದಲ್ಲಿ ಅದು ಮಗುವಿನ ಮೇಲೆ ಮಾರಕ ಪರಿಣಾಮ ಬೀರಲಿದೆ. 

 ಬೆಂಗಳೂರು (ಸೆ.13):  ನವಜಾತ ಶಿಶುವಿನ ತಾಯಿಯು ಗರ್ಭಿಣಿ ಹಾಗೂ ಬಾಣಂತನದ ಅವಧಿಯಲ್ಲಿ ಪಾಲಿಶ್‌್ಡ ರೈಸ್‌ (ನಯಗೊಳಿಸಿದ ಅಕ್ಕಿ) ಸೇವನೆ ಮಾಡುವುದರಿಂದ 6 ತಿಂಗಳೊಳಗಿನ ನವಜಾತ ಶಿಶುವಿನಲ್ಲೇ ಗಂಭೀರ ಹೃದಯ ವೈಫಲ್ಯ ಸಮಸ್ಯೆ ಉಂಟಾಗುತ್ತಿದೆ!

ಜಯದೇವ ಹೃದ್ರೋಗ ಆಸ್ಪತ್ರೆಯು ಕಳೆದ ಆರು ವರ್ಷಗಳಿಂದ ಆರು ತಿಂಗಳೊಳಗಿನ ಮಕ್ಕಳಲ್ಲಿ ಉಂಟಾಗುತ್ತಿರುವ ಹೃದಯ ವೈಫಲ್ಯಗಳ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಅಕ್ಕಿಯನ್ನು ಪಾಲಿಶ್‌ ಮಾಡುವುದರಿಂದ ಅಕ್ಕಿಯ ಮೇಲ್ಪದರದಲ್ಲಿರುವ ‘ಥಯಾಮೈನ್‌- ವಿಟಮಿನ್‌ ಬಿ-1’ ಕೊರತೆಯು ಪಾಲಿಶ್‌್ಡ ಅಕ್ಕಿ ಸೇವಿಸುವವರಲ್ಲಿ ಉಂಟಾಗುತ್ತದೆ. ಇಂತಹ ಅಕ್ಕಿಯನ್ನು ಬಾಣಂತಿಯರು ಸೇವಿಸಿದರೆ ಎದೆಹಾಲಿನಲ್ಲಿ ‘ವಿಟಮಿನ್‌ ಬಿ-1’ ಜೀವಸತ್ವ ಕೊರತೆ ಉಂಟಾಗಿ ನವಜಾತ ಶಿಶುಗಳಲ್ಲಿ ಹೃದಯ ವೈಫಲ್ಯತೆ ಉಂಟಾಗುತ್ತದೆ. ಈ ರೀತಿ ಜಯದೇವ ಆಸ್ಪತ್ರೆ ಒಂದರಲ್ಲೇ ಹೃದಯ ವೈಫಲ್ಯ ಹೊಂದಿದ ಆರು ತಿಂಗಳೊಳಗಿನ 350 ನವಜಾತ ಶಿಶುಗಳು ದಾಖಲಾಗಿದ್ದವು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಸಂಸ್ಥೆಯ ಮಕ್ಕಳ ಹೃದ್ರೋಗ ವಿಭಾಗದ ವೈದ್ಯೆ ಡಾ.ಎಂ.ಕೆ. ಉಷಾ ಮತ್ತು ಡಾ. ಜಯರಂಗನಾಥ್‌ ನೇತೃತ್ವದ ತಂಡವು 2013-2019ರವರೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. 350 ನವಜಾತ ಶಿಶುಗಳಲ್ಲಿ ಹೃದಯ ವೈಫಲ್ಯ ಉಂಟಾಗಲು ಕಾರಣದ ಬಗ್ಗೆ ಅಧ್ಯಯನ ನಡೆಸಿದಾಗ ಈ ಮಕ್ಕಳೆಲ್ಲರಿಗೂ ಶ್ವಾಸಕೋಶದಲ್ಲಿನ ರಕ್ತನಾಳದಲ್ಲಿ ಒತ್ತಡ ಹೆಚ್ಚಾಗಿದ್ದು, ಇದರಿಂದ ಹೃದಯದ ರಕ್ತ ಪರಿಚಲನೆ ಮೇಲೆ ಪರಿಣಾಮ ಬೀರಿ ಹೃದಯ ವೈಫಲ್ಯ ಉಂಟಾಗಿದೆ ಎಂದು ತಿಳಿದುಬಂದಿದೆ.

ಚಳಿ ಬಗ್ಗೆ ಸ್ವಲ್ಪ ಎಚ್ಚರ ತಪ್ಪಿದ್ರೂ ಕೊರೋನಾ ತೆಕ್ಕೆಗೆ ಫಿಕ್ಸ್‌!

ಆಹಾರ ಪದ್ಧತಿ ಬದಲಿಸಲು ಸರ್ಕಾರಕ್ಕೆ ಶಿಫಾರಸು:

ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು ಇನ್ನು ಮುಂದೆ 6ರಿಂದ 9 ತಿಂಗಳ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ‘ವಿಟಮಿನ್‌ ಬಿ-1’ ಮಾತ್ರೆಗಳನ್ನು ನೀಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಜತೆಗೆ ಆಹಾರ ಪದ್ಧತಿಯನ್ನು ಬದಲಿಸಿಕೊಂಡು ‘ತಾಯಂದಿರು ನಯವಾದ ಅಕ್ಕಿ ಬಳಸದೆ, ಕೆಂಪಕ್ಕಿ, ಕುಸುಬಲಕ್ಕಿ, ರಾಗಿ, ಹಾಲು ಸೇರಿದಂತೆ ಹೇರಳವಾದ ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವಿಸುವಂತೆ ಪ್ರೋತ್ಸಾಹಿಸಬೇಕಿದೆ ಎಂದು ಡಾ. ಮಂಜುನಾಥ್‌ ಹೇಳಿದರು.

ವಿಟಮಿನ್‌ ಬಿ-1 ಕೊರತೆಯೇ ಕಾರಣ ಹೇಗೆ:

ಈ ಶಿಶುಗಳಲ್ಲಿ ಸಾಮಾನ್ಯವಾಗಿ ಲಭ್ಯವಿರುವ ವಿಟಮಿನ್‌ ‘ಥಯಾಮಿನ್‌’ ಅಥವಾ ‘ವಿಟಮಿನ್‌ ಬಿ1’ ಕೊರತೆ ಕಂಡು ಬಂದಿತ್ತು. ಇದರಿಂದ ಹೃದಯ ವೈಫಲ್ಯ ಆಗುತ್ತಿರುವುದು ತಿಳಿದು ಬಂದಿದೆ. ಬಳಿಕ ಈ ಮಕ್ಕಳಿಗೆ ವಿಟಮಿನ್‌ ಬಿ-1 ಔಷಧಗಳನ್ನು ನೀಡಿದ್ದರಿಂದ 350 ಮಕ್ಕಳಲ್ಲಿ 320 ಮಕ್ಕಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಪಾಲಿಶ್‌್ಡ ರೈಸ್‌ನಿಂದಾಗಿಯೇ ಇಂತಹ ಅನಾಹುತಗಳು ಸಂಭವಿಸುತ್ತಿವೆ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಕಾಸ್ಟ್ಲಿಯಾಗಿದ್ರೂ ಕೊರೋನಾ ಬಂದ್ಮೇಲೆ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್, ಏನಿದರ ವಿಶೇಷತೆ..?

ಮಕ್ಕಳಲ್ಲಿ ಅತಿ ವೇಗವಾಗಿ ಉಸಿರಾಡುವ, ವಾಂತಿ ಮತ್ತು ಸ್ತನ್ಯಪಾನ ಮಾಡಲು ಸಾಧ್ಯವಾಗದ ಸ್ಥಿತಿ ಇತ್ತು. ಹೀಗಾಗಿ ಬಹುತೇಕರನ್ನು ತುರ್ತು ನಿಗಾ ಘಟಕದಲ್ಲಿ ಆರೈಕೆ ಮಾಡಿ ಜೀವ ಉಳಿಸಲಾಗಿದೆ.

ಅಕ್ಕಿಯ ಅಂದಕ್ಕೆ ಮಾರುಹೋಗಬೇಡಿ

ಬಣ್ಣ, ವಿನ್ಯಾಸದಿಂದ ಆಕರ್ಷಕವಾಗಿ ಕಾಣುವ ನಯವಾದ ಅಕ್ಕಿ ಸೇವನೆಗೆ ಆಹ್ಲಾದಕರವಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅಷ್ಟೇ ಮಾರಕ. ಅಕ್ಕಿ ಹೊಳಪು ಬರುವಂತೆ ಮಾಡಲು ಅದಕ್ಕೆ ಪಾಲಿಶ್‌ ಮಾಡಲಾಗುತ್ತದೆ. ಇದರಿಂದ ಅಕ್ಕಿಯ ಹೊರಪದರದಲ್ಲಿ ಸಮೃದ್ಧವಾಗಿರುವ ವಿಟಮಿನ್‌ ಬಿ1 ಹಾಗೂ ಪೌಷ್ಟಿಕಾಂಶ ನಾಶವಾಗುತ್ತದೆ ಎನ್ನುತ್ತಾರೆ ವೈದ್ಯರು.

ಬಾಣಂತಿ ಪಥ್ಯದ ಬಗ್ಗೆ ಎಚ್ಚರ!

ನಮ್ಮಲ್ಲಿ ಈಗಲೂ ‘ಬಾಣಂತಿ ಪಥ್ಯ’ ಆಚರಣೆಯಲ್ಲಿದೆ. ಪಥ್ಯ ಎಂದರೆ ಹೆರಿಗೆಯಾದ 2-3 ತಿಂಗಳವರೆಗೆ ತಾಯಂದಿರಿಗೆ ಮೂರು ಹೊತ್ತು ಕೇವಲ ಅನ್ನ ಮತ್ತು ತಿಳಿಸಾರು ಮಾತ್ರ ನೀಡಲಾಗುತ್ತದೆ. ಇಂತಹ ವೇಳೆಯಲ್ಲಿ ಪಾಲಿಶ್ಡ್ ರೈಸ್‌ ಊಟ ಮಾತ್ರ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ.

ತಾಯಂದಿರು ಪಾಲಿಶ್‌್ಡ ಅಕ್ಕಿ ಬಳಸದೆ, ಕೆಂಪಕ್ಕಿ, ಕುಸುಬಲಕ್ಕಿ, ರಾಗಿಯಂತಹ ಪೌಷ್ಟಿಕಾಂಶದ ಆಹಾರ ಸೇವಿಸಬೇಕು. ಗರ್ಭಿಣಿಯರಿಗೆ ಕೊನೆಯ ಮೂರು ತಿಂಗಳು ವಿಟಮಿನ್‌-ಬಿ1 ಮಾತ್ರೆ ನೀಡಲು ಹಾಗೂ ಆಹಾರ ಪದ್ಧತಿ ಬದಲಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಕೇವಲ ಗರ್ಭಿಣಿಯರು, ಬಾಣಂತಿಯರಲ್ಲದೆ ಎಲ್ಲಾ ಮಕ್ಕಳು, ವಯಸ್ಕರು ಹಾಗೂ ವೃದ್ಧರೂ ಸಹ ಪಾಲಿಶ್‌್ಡ ಅಕ್ಕಿ ತ್ಯಜಿಸುವುದು ಒಳಿತು.

- ಡಾ.ಸಿ.ಎನ್‌. ಮಂಜುನಾಥ್‌, ನಿರ್ದೇಶಕ, ಜಯದೇವ ಹೃದ್ರೋಗ ಸಂಸ್ಥೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಲ್ಲದ ರಮ್‌ 'ಹುಲಿ' ತಯಾರಿಸಿದ್ದ ಡಿಸ್ಟಲ್ಲರಿಯಿಂದ ಈಗ ಭತ್ತದ ವಿಸ್ಕಿ, ಬೆಲೆ ಎಷ್ಟು?
ಉಪ್ಪು, ಹುಳಿ, ಖಾರ ಎಲ್ಲಾ ಸರಿಯಿದ್ರೂ ಅಡುಗೆ ಮೊದಲಿನಷ್ಟು ರುಚಿ ಬರ್ತಿಲ್ವಾ? ಪಾತ್ರೆ ಕಡೆ ಒಮ್ಮೆ ಕಣ್ಣಾಡಿಸಿ