ಊರೆಂಬ ಉದರದೊಳಗೆ ಸಾರಿನ ಘಮ..!

Suvarna News   | Asianet News
Published : Sep 13, 2020, 09:24 AM ISTUpdated : Sep 13, 2020, 01:23 PM IST
ಊರೆಂಬ ಉದರದೊಳಗೆ ಸಾರಿನ ಘಮ..!

ಸಾರಾಂಶ

ಅವರೇಕಾಳಿನ ಸಾರು ನೂರು ಮಂದಿಗೆ ಹೇಗೆ ಮಾಡುತ್ತಿದ್ದರು ಅನ್ನುವುದನ್ನು ವಿವರಿಸುವ ರೀತಿ, ಅವಲಕ್ಕಿ ಮಾಡುವ ಕ್ರಮ ಎಲ್ಲವೂ ಪಾರಂಪರಿಕ ಶೈಲಿ ಮತ್ತು ಕೈಗುಣದೊಂದಿಗೆ ನಮಗೆ ಒದಗುತ್ತವೆ. ಇಲ್ಲಿ ಬರುವ ಯಾವ ಅಡುಗೆಯಲ್ಲೂ ಟೇಬಲ್‌ ಸ್ಪೂನು, ಟೀ ಸ್ಪೂನುಗಳ ಪ್ರಸ್ತಾಪ ಇಲ್ಲ. ಹಿಂದೆ ಯಾರೂ ಹಾಗೆ ಬಳಸುತ್ತಿರಲಿಲ್ಲ. ಒಂದು ಮುಷ್ಟಿ, ಎರಡು ಚಿಟಿಕೆ, ಒಂದು ಮಿಳ್ಳೆ ಅನ್ನುವ ಬಳಕೆಯೇ ಹೆಚ್ಚು. ಇಲ್ಲೂ ಅಷ್ಟೇ. ಅಳತೆಯೂ ನಮ್ಮದೇ, ರುಚಿಯೂ ನಮ್ಮದೇ.

ಪ್ರಮೀಳಾ ಸ್ವಾಮಿ ಬರೆದ ಊರೆಂಬ ಉದರ ಎಂಬ ಪುಸ್ತಕವನ್ನು ಹೀಗೇ ಎಂದು ಹೇಳಲಾಗುವುದಿಲ್ಲ. ಅದೊಂದು ರೀತಿಯಲ್ಲಿ ನೆನಪು, ರುಚಿ, ಬಾಲ್ಯ, ಯೌವನ, ಊರು, ಹತ್ತು ಸಮಸ್ತರು, ನೋಡಿದ ಸಿನಿಮಾ, ಊರ ಜಾತ್ರೆ ಮತ್ತು ಇಡೀ ಬದುಕಿನ ಸೊಗಸಾದ ಟಿಪ್ಪಣಿ. ಈ ಪುಸ್ತಕದಲ್ಲಿ ಪ್ರಮೀಳಾ ಏನನ್ನೂ ಹೇಳುವುದಿಲ್ಲ, ಎಲ್ಲವನ್ನೂ ಕಾಣಿಸುತ್ತಾರೆ. ಓದುತ್ತಾ ಓದುತ್ತಾ ನಮ್ಮ ನಮ್ಮ ಊರು, ಬಾಲ್ಯ, ಬಾಯಿಗೆ ಬಿದ್ದ ಸಜ್ಜಿಗೆ, ಘಮಘಮಿಸಿದ ಮಜ್ಜಿಗೆ ಹುಳಿ ಮತ್ತು ಜಾತ್ರೆಯ ತೇರಿನ ಬುಡದಲ್ಲಿ ಸಿಕ್ಕ ತೆಂಗಿನಕಾಯಿ ಚೂರು ಕೈಗೆ ಸಿಗುತ್ತದೆ.

ಈ ಕೃತಿಯಲ್ಲಿ ಊರಿನ ಕುರಿತು, ಜನರ ಕುರಿತು ಹೇಳುತ್ತಲೇ ಅವರು ತಮಗಿಷ್ಟವಾದ, ತಾವು ಬಾಲ್ಯದಲ್ಲಿ ನೋಡಿದ ಸೊಗಸಾದ ಅಡುಗೆಗಳ ಕುರಿತೂ ಹೇಳುತ್ತಾರೆ. ಸಂಕೇತಿ ಶೈಲಿಯ ಈ ಅಡುಗೆಗಳ ಘಮ ಮೂಗಿಗೆ ಅಡರುವಂತೆ ಮುದವಾಗಿ ಅವುಗಳ ರೆಸಿಪಿಯನ್ನು ಬರೆಯುತ್ತಾ ಹೋಗಿದ್ದಾರೆ. ಅವರೇಕಾಳಿನ ಸಾರು ನೂರು ಮಂದಿಗೆ ಹೇಗೆ ಮಾಡುತ್ತಿದ್ದರು ಅನ್ನುವುದನ್ನು ವಿವರಿಸುವ ರೀತಿ, ಅವಲಕ್ಕಿ ಮಾಡುವ ಕ್ರಮ ಎಲ್ಲವೂ ಪಾರಂಪರಿಕ ಶೈಲಿ ಮತ್ತು ಕೈಗುಣದೊಂದಿಗೆ ನಮಗೆ ಒದಗುತ್ತವೆ. ಇಲ್ಲಿ ಬರುವ ಯಾವ ಅಡುಗೆಯಲ್ಲೂ ಟೇಬಲ್‌ ಸ್ಪೂನು, ಟೀ ಸ್ಪೂನುಗಳ ಪ್ರಸ್ತಾಪ ಇಲ್ಲ. ಹಿಂದೆ ಯಾರೂ ಹಾಗೆ ಬಳಸುತ್ತಿರಲಿಲ್ಲ. ಒಂದು ಮುಷ್ಟಿ, ಎರಡು ಚಿಟಿಕೆ, ಒಂದು ಮಿಳ್ಳೆ ಅನ್ನುವ ಬಳಕೆಯೇ ಹೆಚ್ಚು. ಇಲ್ಲೂ ಅಷ್ಟೇ. ಅಳತೆಯೂ ನಮ್ಮದೇ, ರುಚಿಯೂ ನಮ್ಮದೇ.

ಕಾಸ್ಟ್ಲಿಯಾಗಿದ್ರೂ ಕೊರೋನಾ ಬಂದ್ಮೇಲೆ ಕತ್ತೆ ಹಾಲಿಗೆ ಫುಲ್ ಡಿಮ್ಯಾಂಡ್, ಏನಿದರ ವಿಶೇಷತೆ..?

ಅದರಿಂದ ಆಯ್ದ ಐದು ರೆಸಿಪಿಗಳು ನಿಮ್ಮ ಮುಂದೆ. ನೆನಪಿಡಿ, ಇವು ಶುದ್ಧಾಂಗ ಸಂಕೇತಿ ಶೈಲಿಯ ಅಡುಗೆಗಳು.

1. ಮೊಸರು ಕೋಡುಬಳೆ: ಸ್ವಲ್ಪ ರವೆತರಿ, ತೊಳೆದ ಅಕ್ಕಿ ಹಿಟ್ಟು, ಮಜ್ಜಿಗೆ, ಇಂಗು, ಉಪ್ಪು, ಜೀರಿಗೆ, ಓಂಕಾಳು, ಕರಿ ಮೆಣಸಿನ ಪುಡಿ. ಸ್ವಲ್ಪ ತುಪ್ಪ. ಕರಿಯಲುಎಣ್ಣೆ.

ಒಂದು ಅಳತೆ ಹಿಟ್ಟಿಗೆ, ಒಂದು ಅಳತೆ ನೀರು. ನೀರಿನ ಜೊತೆಗೆ ಸ್ವಲ್ಪ ಗಟ್ಟಿಮಜ್ಜಿಗೆ ಸೇರಿಸಿ, ಒಲೆಯ ಮೇಲೆ ಕುದಿಯಲು ಇಡಬೇಕು. ಅದಕ್ಕೆ ಉಪ್ಪು, ತುಪ್ಪ, ಜೀರಿಗೆ, ಮೆಣಸಿನ ಪುಡಿ, ಓಂಕಾಳು ಎಲ್ಲ ಹಾಕಿ, ಚೆನ್ನಾಗಿ ಕುದಿ ಬಂದಾಗ, ಹಿಟ್ಟು ಹಾಕಿ, ತೊಳಸಿ, ಉರಿ ಚಿಕ್ಕದು ಮಾಡಿ, ಮುಚ್ಚಿಡಬೇಕು. ಮುಚ್ಚಳ ತೆಗೆದಾಗ ಬಿಳಿ ಹೊಗೆ ಬರುತ್ತಿದ್ದರೆ, ಕೆಳಗಿಳಿಸಿ ಅಡಿಕೆ ಪಟ್ಟೆಗೆ ಸುರಿದುಕೊಂಡು, ಚೆನ್ನಾಗಿ ನಾದ ಬೇಕು. ನಂತರ ಎಣ್ಣೆ ಕಾಯಿಸಿ, ಕೋಡುಬಳೆಗಳನ್ನು ಹೊಸೆದು, ಕರಿದರೆ, ಗರಿಗರಿ ಮೊಸರು ಕೋಡುಬಳೆ ಸಿದ್ಧ.

2. ಮಜ್ಜಿಗೆ ಹುಳಿ ಪುಡಿ: ಕಡಲೆಬೇಳೆ, ಹಸಿಮೆಣಸಿನಕಾಯಿ, ಜೀರಿಗೆ, ಇಂಗು ಕರಿಬೇವು, ಶುಂಠಿ, ಕೊತ್ತಂಬರಿ ಸೊಪ್ಪು, ಬಲಿತ ತೆಂಗಿನತುರಿ.

ಕಡಲೆಬೇಳೆ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಮಿಕ್ಕ ಎಲ್ಲ ಪದಾರ್ಥಗಳನ್ನೂ ತೊಳೆದು ಬಿಸಿಲಿನಲ್ಲಿ ಬಟ್ಟೆಯ ಮೇಲೆ ಹರಡಬೇಕು. ಕಡಲೆಬೇಳೆ ಜೊತೆ ಎರಡು ಚಮಚ ಅಕ್ಕಿಯನ್ನೂ ಸೇರಿಸಬೇಕು.

ಕಡಲೆಬೇಳೆ - 100 ಗ್ರಾಂ

ಹಸಿಮೆಣಸಿನಕಾಯಿ-12

ಜೀರಿಗೆ- 20 ಗ್ರಾಂ

ಶುಂಠಿ-ಬೆರಳುದ್ದ

ತೆಂಗಿನತುರಿ- ಒಂದುತೆಂಗಿನಕಾಯಿಯದು

ಕರಿಬೇವು, ಕೊತ್ತಂಬರಿ-ಎರಡು ಹಿಡಿ

ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳೂ ಬಿಸಿಲಿನಲ್ಲಿ ಒಣಗಿಸಿದ ಮೇಲೆ, ಪುಡಿ ಮಾಡಿಕೊಳ್ಳುವುದು. ಬೇಕಾದತರಕಾರಿಯನ್ನುಉಪ್ಪು, ಸ್ವಲ್ಪ ಸಕ್ಕರೆ ಹಾಕಿ ಬೇಯಿಸಿಕೊಂಡು, ಬೇಕಾದಷ್ಟುಪುಡಿಯನ್ನುಒಂದು ಸೌಟು ಮೊಸರಿನಲ್ಲಿಕದಡಿ, ತರಕಾರಿ ಮೇಲೆ ಹಾಕಿ, ಕುದಿ ಬರುವವರೆಗೆ ಕುದಿಸಿ, ಕೆಳಗಿಳಿಸಿದ ಮೇಲೆ ಗಟ್ಟಿಮೊಸರು ಹಾಕಿದರೆ, ರುಚಿಕರವಾದ ಮಜ್ಜಿಗೆ ಹುಳಿ ರೆಡಿ. ಮಜ್ಜಿಗೆ ಹುಳಿ ಸಪ್ಪೆ ಎನಿಸಿದರೆ ಮತ್ತೂ ಸ್ವಲ್ಪ ಪುಡಿ ಹಾಕಬಹುದುಅಥವಾಒಗ್ಗರಣೆಗೆಒಂದರೆರಡು ಮೆಣಸಿನಕಾಯಿ ತುಂಡುಗಳನ್ನು ಹಾಕಿ ಒಗ್ಗರಣೆಕೊಡಬಹುದು.

3. ಹೂ ನುಚ್ಚಿನ ಸಂಡಿಗೆ: ನಮ್ಮ ಮನೆಯಲ್ಲಿರುತ್ತಿದ್ದ ತೀರಾ ಸಣ್ಣ ನುಚ್ಚಿಗೆ ಹೂ ನುಚ್ಚು ಎನ್ನುತ್ತಿದ್ದರು. ಈ ಹೂ ನುಚ್ಚನ್ನುಚೆನ್ನಾಗಿ ಜಾಲಿಸಿಟ್ಟು, ಸ್ವಲ್ಪ ಹೊತ್ತು ನೆನೆಸಿದ ಸೀಮೆ ಅಕ್ಕಿಯನ್ನುತೆಗೆದುಕೊಂಡು, ಒಂದಕ್ಕೆ ಮೂರರಷ್ಟುನೀರಿಡಬೇಕು. ಇಂಗು, ಉಪ್ಪು, ಜೀರಿಗೆ, ಓಂ ಕಾಳು, ಎಲ್ಲವನ್ನೂ ಹಾಕಿ, ನೀರುಚೆನ್ನಾಗಿಕುದಿಯುವಾಗ, ಒಳ್ಳೆ ತುಪ್ಪಎರಡು ಚಮಚ ಹಾಕಿ, ಅದಕ್ಕೆ ನೆನೆಸಿದ ಸೀಮೆ ಅಕ್ಕಿ, ತೊಳೆದ ಹೂ ನುಚ್ಚು ಹಾಕಿ ಬೇಯಿಸುವುದು. ಅದುಗಂಜಿ ಹದಕ್ಕೆ ಬಂದಾಗ ಕೆಳಗಿಳಿಸಬೇಕು. ಪ್ಲಾಸ್ಟಿಕ್‌ ಹಾಳೆಯ ಮೇಲೆ ಚಮಚದಿಂದಗುಂಡಗೆಒಂದೊಂದೇ ಹಾಕುತ್ತಾ ಬಂದರೆ, ಸಂಜೆಯ ಹೊತ್ತಿಗೆಅದು ಹಾಳೆ ಬಿಟ್ಟು ಮೇಲೇಳುತ್ತದೆ. ಮತ್ತೆ ಮಗುಚಿ ಹಾಕಿ ಮತ್ತೊಂದು ದಿನ ಒಣಗಿಸಿದರೆ, ಸೊಗಸಾದ ಹೂ ನುಚ್ಚಿನ ಸಂಡಿಗೆ. ಸಂಜೆತಿಂಡಿ ಸಮಯಕ್ಕೂಕರಿಯಲು ಬಹಳ ಚೆನ್ನಾಗಿರುತ್ತದೆ.

4. ಗಿಣ್ಣಿನ ಎರಿಯಪ್ಪ: ಗಿಣ್ಣು ಕಾಯಿಸಿಕೊಂಡು ಅದಕ್ಕೆ ಸ್ವಲ್ಪ ಹುರಿದಅಕ್ಕಿಹಿಟ್ಟು, ಮೈದಾಹಿಟ್ಟು, ತೆಂಗಿನತುರಿ, ಚಿಟಿಕೆ ಸೋಡ, ಚಿಟಿಕೆಉಪ್ಪು ಹಾಕಿ, ಹತ್ತು ನಿಮಿಷದ ನಂತರತವೆಗೆತುಪ್ಪ ಹಾಕಿ, ಒಂದೇ ಬಾರಿಗೆಐದಾರುಎರಿಯಪ್ಪವನ್ನು, ಪುಟ್ಟದೋಸೆಯಂತೆ ಬಿಡುವುದು. ಅದು ಬ್ರೆಡ್ಡಿನಂತೆ ಪದರ ಪದರವಾಗಿ, ಸ್ವಲ್ಪ ಹುಳಿಸಿಹಿಯಾಗಿ ಬಹಳ ಚೆನ್ನಾಗಿರುತ್ತದೆ.

5. ಸಜ್ಜಿಗೆ:ಒಂದು ಬಟ್ಟಲು ರವೆ, ಒಂದು ಬಟ್ಟಲು ಸಕ್ಕರೆ, ಮುಕ್ಕಾಲು ಬಟ್ಟಲುತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಹಾಲು ಎರಡು ಬಟ್ಟಲು.

ತುಪ್ಪವನ್ನು ಕಾಯಲು ಇಟ್ಟು ಕಾದ ನಂತರ ದ್ರಾಕ್ಷಿಗೋಡಂಬಿ ಹಾಕಿ ಹುರಿದು, ನಂತರ ರವೆಯನ್ನು ಹಾಕಬೇಕು. ರವೆಯನ್ನು ಹುರಿಯಬೇಕು. ಇನ್ನೊಂದು ಪಾತ್ರೆಯಲ್ಲಿ ಎರಡು ಬಟ್ಟಲು ಹಾಲು, ಬಟ್ಟಲು ನೀರು ಕುದಿಯಲು ಇಡಬೇಕು. ರವೆ ಹುರಿದ ನಂತರ ಉರಿ ಕಡಿಮೆ ಮಾಡಿ, ಕುದಿಯುತ್ತಿರುವ ಹಾಲು, ನೀರು, ಚಿಟಿಕೆ ಕೇಸರಿ ಬಣ್ಣ ಹಾಕಬೇಕು. ಚೆನ್ನಾಗಿ ಕೂಡಿಸಿ ಎರಡು ನಿಮಿಷ ಬಿಟ್ಟರೆ ಉಂಡೆಯಂತಾಗುತ್ತದೆ. ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕೂಡಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ ಬಿಟ್ಟು ತೆಗೆದಿಟ್ಟರೆ, ಸೊಗಸಾದ ಸಜ್ಜಿಗೆ ರೆಡಿ. ಏಲಕ್ಕಿ ಪುಡಿ ಉದುರಿಸುವುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cockroache Viral: ಜಿರಳೆ ನೋಡಿದ್ರೆ ಹುಡುಗಿಯರು ಏಕೆ ಭಯಪಡುತ್ತಾರೆ? ಇದರ ಹಿಂದಿದೆ ಶಾಕಿಂಗ್ ವೈಜ್ಞಾನಿಕ ಕಾರಣ!
ಎರಡೇ ಎರಡು ಕಾಳು ಸಾಕು.. ಕುಕ್ಕರ್ ಬೇಕಿಲ್ಲ, ಪಾತ್ರೆಯಲ್ಲೇ ಮಟನ್ ಬೆಣ್ಣೆಯಂತೆ ಮೆತ್ತಗೆ ಬೇಯುತ್ತೆ!