ಉತ್ತರಪ್ರದೇಶದ 1,398 ರೈತರ ಸಾಲ ತೀರಿಸಿದ ಅಮಿತಾಬ್ ಬಚ್ಚನ್! ರೈತರ4.05 ಕೋಟಿ ರೂ. ಬೆಳೆ ಸಾಲ ತೀರಿಸಿದ ಬಿಗ್ ಬಿ! ಋಣಮುಕ್ತ ಸಾಲ ಪತ್ರಕ್ಕಾಗಿ ಮುಂಬೈಗೆ ಬರಲು ರೈಲು ಟಿಕೆಟ್! ನವೆಂಬರ್ 26ಕ್ಕೆ ರೈತರಿಗೆ ಪತ್ರ ವಿತರಿಸಲಿರುವ ಅಮಿತಾಬ್
ಮುಂಬೈ(ನ.21): ಬಾಲಿವುಡ್ ಮಿಲೆನಿಯಮ್ ಸ್ಟಾರ್, ಶೆಹನಶಾಹ್, ಬಿಗ್ ಬಿ ಎಂಬೆಲ್ಲಾ ಬಿರುದಾಂಕಿತ ಹಿರಿಯ ನಟ ಅಮಿತಾಬ್ ಬಚ್ಚನ್ ಸುಮಾರು 1,398 ರೈತರ ಸಾಲ ತೀರಿಸಿ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶದ ಸುಮಾರು 1,398 ರೈತರು ವಿವಿಧ ಬ್ಯಾಂಕ್ಗಳಲ್ಲಿ ಮಾಡಿಕೊಂಡಿದ್ದ ಸಾಲವನ್ನು ಅಮಿತಾಬ್ ಬಚ್ಚನ್ ಪಾವತಿಸಿದ್ದಾರೆ. 1,398 ರೈತರ ಬೆಳೆ ಸಾಲವನ್ನ ತೀರಿಸಿದ ಬಳಿಕ, ರೈತರನ್ನು ಖುದ್ದಾಗಿ ಭೇಟಿ ಮಾಡಿ ಬ್ಯಾಂಕ್ ಋಣಮುಕ್ತ ಸಾಲ ಪತ್ರ ನೀಡಲಿದ್ದಾರೆ. ಇದಕ್ಕಾಗಿ ಅಮಿತಾಬ್ ಬಚ್ಚನ್ ಸುಮಾರು 70 ರೈತರಿಗೆ ಮುಂಬೈ ಆಗಮಿಸಲು ಟ್ರೈನ್ ಟಿಕೆಟ್ ಬುಕ್ ಮಾಡಿ ಕರೆಯಿಸಿಕೊಳ್ಳಲಿದ್ದಾರೆ.
ಉತ್ತರಪ್ರದೇಶದ ವಿವಿಧ ಜಿಲ್ಲೆಗಳ 1,398 ರೈತರು ನಾನಾ ಬ್ಯಾಂಕ್ಗಳಲ್ಲಿ ಮಾಡಿದ್ದ ₹ 4.05 ಕೋಟಿ ರೂ.ನಷ್ಟು ಬೆಳೆ ಸಾಲವನ್ನು ಬಿಗ್ ಬಿ ತೀರಿಸಿದ್ದಾರೆ. ಇಷ್ಟು ಹಣವನ್ನು ಒಂದೇ ಕಂತಿನಲ್ಲಿ ಹಣ ಕಟ್ಟುವ ಯೋಜನೆಯಡಿ (ಒಟಿಎಸ್) ಒಪ್ಪಂದ ಮಾಡಿಕೊಂಡು ಪಾವತಿಸಿದ್ದಾರೆ.
ರೈತರನ್ನು ಖುದ್ದಾಗಿ ಭೇಟಿ ಮಾಡಿ ಅವರ ಋಣಮುಕ್ತ ಬ್ಯಾಂಕ್ ಸಾಲ ಪತ್ರ ನೀಡಲು 70 ರೈತರಿಗೆ ಮುಂಬೈ ಟ್ರೈನ್ ಟಿಕೆಟ್ ನೀಡಿ ತಮ್ಮ ಕಚೇರಿಗೆ ಆಹ್ವಾನಿಸಿದ್ದಾರೆ. ನವೆಂಬರ್ 26ರಂದು ಈ ಪತ್ರಗಳು ನೀಡಲಿದ್ದಾರೆ ಎಂದು ಬಿಗ್ ಬಿ ವಕ್ತಾರ ತಿಳಿಸಿದ್ದಾರೆ.
ಸೂಪರ್ ಸ್ಟಾರ್ ಖ್ಯಾತಿಯ ಅಮಿತಾಬ್ ಅವರು, 'ಸಯ್ಯಾಜಿ ರತ್ನ ಪ್ರಶಸ್ತಿ' ಸ್ವೀಕರಿಸಲು ತೆರಳಿದ್ದಾಗ ಬರೋಡಾದ 350 ರೈತರಿಗೆ ಸಾಲ ಮರುಪಾವತಿಸಲು ಸಹಾಯ ಮಾಡಿದ್ದರು. ಮಹಾರಾಷ್ಟ್ರದ ಸುಮಾರು 44 ಹುತಾತ್ಮರ ಕುಟುಂಬಗಳಿಗೆ ಧನ ಸಹಾಯಕ್ಕೆ ನೆರವಾಗಿದ್ದರು.