ಮೈಸೂರು ಗ್ಯಾಂಗ್‌ರೇಪ್‌: ಹೆತ್ತವರ ಜತೆ ಸಂತ್ರಸ್ತೆ ದಿಢೀರ್‌ ಮುಂಬೈಗೆ!

By Kannadaprabha NewsFirst Published Aug 29, 2021, 7:27 AM IST
Highlights

* ಮೈಸೂರು ಗ್ಯಾಂಗ್‌ರೇಪಿಸ್ಟ್‌ಗಳು ಅರೆಸ್ಟ್‌

* ಹೆತ್ತವರ ಜತೆ ಸಂತ್ರಸ್ತೆ ದಿಢೀರ್‌ ಮುಂಬೈಗೆ

* ತನಿಖೆಗೆ ಹಿನ್ನಡೆ ಆಗಲ್ಲ: ಡಿಜಿಪಿ

ಮೈಸೂರು(ಆ.29): ಅತ್ಯಾಚಾರ ಪ್ರಕರಣದಿಂದ ತೀವ್ರ ಆಘಾತಕ್ಕೊಳಗಾಗಿರುವ ಸಂತ್ರಸ್ತ ವಿದ್ಯಾರ್ಥಿನಿ ತನ್ನ ಹೆತ್ತವರೊಂದಿಗೆ ದಿಢೀರ್‌ ಮುಂಬೈಗೆ ತೆರಳಿದ್ದಾಳೆ. ಆದರೆ, ಇದರಿಂದ ತನಿಖೆಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದು ಡಿಜಿಪಿ ಪ್ರವೀಣ್‌ ಸೂದ್‌ ಸ್ಪಷ್ಟನೆ ನೀಡಿದ್ದಾರೆ.

ಆರೋಪಿಗಳನ್ನು ಹಿಡಿಯಲು ಸಂತ್ರಸ್ತೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಂತ ಆಕೆಯನ್ನು ನಾವು ದೂರುತ್ತಿಲ್ಲ. ಆದರೂ ಆರೋಪಿಗಳನ್ನು ಹಿಡಿಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದು ನಮ್ಮ ಮೊದಲ ಹೆಜ್ಜೆ. ಇನ್ನು ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ. ಈ ಸಂಬಂಧ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಎಫ್‌ಎಸ್‌ಎಲ್‌ ನೀಡಿದ ಕೂಡಲೇ ಆದಷ್ಟುಶೀಘ್ರ ಚಾರ್ಜ್‌ಶೀಟ್ ಸಲ್ಲಿಸಲಾಗುವುದು. ನ್ಯಾಯಾಲಯದ ವಿಚಾರಣೆ ಹಂತದಲ್ಲಿ ಸಂತ್ರಸ್ತೆಯಿಂದ ಸಹಕಾರ ಸಿಗುವ ವಿಶ್ವಾಸವಿದೆ ಎಂದು ಪ್ರವೀಣ್‌ ಸೂದ್‌ ವಿಶ್ವಾಸ ವ್ಯಕ್ತಪಡಿಸಿದರು.

ಸಾಮೂಹಿಕ ಅತ್ಯಾಚಾರದಿಂದ ತೀವ್ರ ಆಘಾತಕ್ಕೊಳಗಾಗಿದ್ದ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿ ಈವರೆಗೆ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ದೂರನ್ನೂ ದಾಖಲಿಸಿಲ್ಲ. ಅಲ್ಲದೆ, ಸಂತ್ರಸ್ತೆಯ ಪೋಷಕರು ಕೂಡ ತಾವು ಯಾರನ್ನೂ ಭೇಟಿಯಾಗಲು ಇಷ್ಟಪಡುವುದಿಲ್ಲ ಎಂದು ಪತ್ರಬರೆದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರೇ ಸಂತ್ರಸ್ತೆಯ ಸ್ನೇಹಿತ ನೀಡಿದ ಮಾಹಿತಿ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

click me!