ಬೆಂಗಳೂರು: ಮದುವೆ ಪ್ರಸ್ತಾಪ ತಿರಸ್ಕರಿಸಿದ ವಿವಾಹಿತೆ ಮಹಿಳೆ ಮನೆಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ ಅರ್ಬಾಜ್

By Sathish Kumar KHFirst Published May 2, 2024, 3:50 PM IST
Highlights

ಮದುವೆಯಾಗಿ ಗಂಡನ ಮನೆಯಲ್ಲಿರುವ  ಮಹಿಳೆಗೆ ಮದುವೆ ಪ್ರಸ್ತಾಪ ಮಾಡಿದ ಪಾಗಲ್‌ ಪ್ರೇಮಿ, ವಿವಾಹಕ್ಕೆ ಒಪ್ಪದಿದ್ದಾಗ ಆಕೆಯ ಮನೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ.

ಬೆಂಗಳೂರು (ಮೇ 02): ಈಗಾಗಲೇ ಮದುವೆಯಾಗಿ ಸುಖ ಸಂಸಾರ ಮಾಡಿಕೊಂಡಿರುವ ಮಹಿಳೆಗೆ, ನಿನ್ನ ಗಂಡ ಹಾಗೂ ಮನೆಯನ್ನು ಬಿಟ್ಟು ಬಂದು ನನ್ನನ್ನು ಮದುವೆಯಾಗಿ ಎಂದು ಪೀಡಿಸುತ್ತಿದ್ದ ಪಾಗಲ್ ಪ್ರೇಮಿಯ ಪ್ರಸ್ತಾಪವನ್ನು ಮಹಿಳೆ ತಿರಸ್ಕರಿಸಿದ್ದಾಳೆ. ತನ್ನನ್ನು ಮದುವೆಯಾಗಲು ಒಪ್ಪದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿ ಅರ್ಬಾಜ್ ಮಹಿಳೆಯ ಕುಟುಂಬಸ್ಥರು ವಾಸವಿರುವ ಮನೆಗೆ ರಾತ್ರೋ ರಾತ್ರಿ ಬೆಂಕಿ ಹಚ್ಚಿ ಬಂದಿದ್ದಾನೆ.

ಹೌದು, ಪ್ರೀತಿ ಕುರುಡು ಎನ್ನುವುದು ಸಿನಿಮಾ ಡೈಲಾಗ್ ಆಗಿದೆ. ಆದರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರೀತಿ ಕುರುಡು ಎನ್ನುವುದಕ್ಕೆ ಹಲವು ಜ್ವಲಂತ ಘಟನೆಗಳು ಕೂಡ ನಡೆದಿವೆ. ಅದರಂತೆ ಇಲ್ಲೊಬ್ಬ ಪಾಗಲ್ ಪ್ರೇಮಿ ವಿವಾಹಿತ ಮಹಿಳೆಯ ಬಳಿ ಹೋಗಿ ನೀನು ನನ್ನನ್ನು ಮದುವೆಯಾಗು ಎಂದು ಪ್ರಸ್ತಾಪ ಮಾಡಿದ್ದಾನೆ. ಆಗ ಆಕೆ ನನಗೀಗಾಲೇ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ಸುಖ ಸಂಸಾರ ಮಾಡುತ್ತಿದ್ದೇನೆ. ನೀನು ನನಗೆ ಮದುವೆಗಾಗಿ ಬಲವಂತ ಮಾಡಬೇಡ ಎಂದು ಆತನ ಮದುವೆ ಪ್ರಸ್ತಾಪ ತಿರಸ್ಕರಿಸಿ ಕಳುಹಿಸಿದ್ದಾಳೆ. ಆದರೂ, ಆಕೆಯ ಬೆನ್ನುಬಿಡದ ಪಾಗಲ್ ಪ್ರೇಮಿ ನಾನು ನಿನ್ನ ಸ್ನೇಹಿತನಾಗಿರುತ್ತೇನೆ ಎಂದು ಪುಸಲಾಯಿಸಿ ಮೊಬೈಲ್ ನಂಬರ್ ಪಡೆದಿದ್ದಾನೆ.

ಬೆಂಗಳೂರಲ್ಲೊಬ್ಬ ಪಾಗಲ್ ಪ್ರೇಮಿ; ಪ್ರೇಯಸಿಗೆ ಮೆಸೇಜ್ ಮಾಡಿದ ಯುವಕನ ಕೈಗಳನ್ನೇ ಕತ್ತರಿಸಿದ ಕಿರಾತಕ!

ನಂತರ, ಮಹಿಳೆಯ ಮೊಬೈಲ್‌ಗೆ ಕರೆ ಮಾಡಿ ನೀನು ಗಂಡ ಹಾಗೂ ನೀನಿರುವ ಮನೆಯನ್ನು ಬಿಟ್ಟು ಬಂದು ನನ್ನನ್ನು ಮದುವೆ ಆಗು ಎಂದು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಮನೆಯವರಿಗೆ ತಿಳಿಸಿದ್ದಾಳೆ. ವಿವಾಹಿತ ಮಹಿಳೆಗೆ ಮರುಮದುವೆ ಪ್ರಸ್ತಾಪ ಮಾಡಿದ ಯುವಕನನ್ನು ಮನೆಯವರು ಹುಡುಕಿದಾಗ ಆತ ಬೇರಾರೂ ಅಲ್ಲ ತಮ್ಮ ದೂರದ ಸಂಬಂಧಿಯೇ ಆಗಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ, ಆತನ ಮನೆಯವರನ್ನು ಕರೆಸಿ ಎರಡೂ ಮನೆಯವರು ಕುಳಿತು ಆತನಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ.

ಇಷ್ಟೆಲ್ಲಾ ರಾದ್ದಾಂತವಾದರೂ ಸುಮ್ಮನಿರದ ಯುವಕ ಪುನಃ ಮಹಿಳೆಗೆ ಕರೆ ಮಾಡಿ ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಟಾರ್ಚರ್ ನೀಡಲಾರಂಭಿಸಿದ್ದಾನೆ. ಇದರಿಂದ ಕೋಪಗೊಂಡು ಮಹಿಳೆ ಹಾಗೂ ಅವರ ಮನೆಯವರು ಅವನ ಫೋನ್ ನಂಬರ್ ಬ್ಲಾಕ್ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಯುವಕ, ಮಹಿಳೆ ವಾಸವಿರುವ ಗಂಡನ ಮನೆಗೆ ಬೆಂಕಿಹಚ್ಚಲು ಮುಂದಾಗಿದ್ದಾನೆ. ಬೆಳ್ಳಂಬೆಳಗ್ಗೆ 4 ಗಂಟೆಗೆ ಮಹಿಳೆ ಮನೆಗೆ ಬೆಂಕಿ ಹಚ್ಚಿ ಹೋಗಿದ್ದಾನೆ. ಆದರೆ, ಮನೆಯಲ್ಲಿ ಯಾರೂ ಇರದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ ಎಸ್ಐಟಿ; ಇದರಿಂದಾಗುವ ಪರಣಾಮವೇನು?

ಈ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮದುವೆ ಆಗುವಂತೆ ಪೀಡಿಸುತ್ತಿದ್ದ ಯುವಕ ಅರ್ಬಾಜ್‌ನ ಮೇಲೆ ಮಹಿಳೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಮಹಿಳೆಯ ದೂರನ್ನು ಆಧರಿಸಿ ಪೊಲೀಸರು ಆರೋಪಿ ಅರ್ಬಾಜ್‌ನನ್ನುಇ ಬಂಧಿಸಿ ಜೈಲಿಗಟ್ಟಿದ್ದಾರೆ.

click me!