ಸುದ್ದಿಗಳು ಪರಾಮರ್ಶಿತ ಪತ್ರಿಕೆಗಳೂ ಸುರಕ್ಷಿತ: ವದಂತಿಗೆ ಕಿವಿಗೊಡಬೇಡಿ!

By Kannadaprabha NewsFirst Published Mar 24, 2020, 9:19 AM IST
Highlights

ವಿಶೇಷ ಸಂಪಾದಕೀಯ| ಸುದ್ದಿಗಳು ಪರಾಮರ್ಶಿತ, ಪತ್ರಿಕೆಗಳೂ ಸುರಕ್ಷಿತ|ಎಲ್ಲಾ ಕನ್ನಡ ದಿನಪತ್ರಿಕೆಗಳಲ್ಲಿ ಒಂದೇ ಸಂಪಾದಕೀಯ, ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಇದೇ ಮೊದಲು

ಪ್ರಿಯ ಓದುಗರಲ್ಲಿ ಅರಿಕೆ...

ದಿನ ಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೊತಕ. ನಮ್ಮವರು ರಕ್ತ ಹರಿಸಿ, ಬೆವರು ಸುರಿಸಿ ಗಳಿಸಿದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೋನಾ ಆಪತ್ತಿನತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಅರವತ್ತರ ದಶಕದಲ್ಲಿ ಹರಡಿದ ಪ್ಲೆಗ್‌ ಮಹಾಮಾರಿ, ಮಾರಣಾಂತಿಕ ಎಬೋಲಾ ಇತ್ಯಾದಿ ಕಾಯಿಲೆಗಳಿಂದ ಹಿಡಿದು ಈವರೆಗೆ ಹತ್ತು ಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ಗೆದ್ದಿವೆ. ಈಗಲೂ ನಾವು ಅಂಥದ್ದೇ ಗಟ್ಟಿಸಂಕಲ್ಪ ಮಾಡಿ ಅಂತಿಮ ಗೆಲುವಿನ ಕಡೆ ದಾಪುಗಾಲಿಡುವ ತೀರ್ಮಾನ ಮಾಡಬೇಕಿದೆ.

ನಾಳಿನ ಒಳಿತಿಗಾಗಿ ಇಡೀ ದೇಶವೇ ಭಾನುವಾರ ಜನತಾ ಕಫä್ರ್ಯಗೆ ಓಗೊಟ್ಟಿದೆ. ಇನ್ನೂ ಹತ್ತು ದಿನಗಳ ಕಾಲ ಕಠಿಣ ನಿರ್ಬಂಧ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನಮ್ಮ ಜೀವ ರಕ್ಷಣೆ ಮತ್ತು ದೇಶದ ಹಿತ ರಕ್ಷಣೆಗಾಗಿ ಇದೊಂದು ತುರ್ತು ಸಂದರ್ಭವೆಂದು ಭಾವಿಸಿ ನಾವೆಲ್ಲರೂ ಸರ್ಕಾರದ ಆದೇಶವನ್ನು ಪಾಲಿಸಲೇಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯ ಸಮೂಹ, ಮಿಲಿಟರಿ, ಪೊಲೀಸ್‌ ಸಮೂಹದ ಜತೆ ಮಾಧ್ಯಮದವರನ್ನೂ ‘ಅಗತ್ಯ ಸೇವಕ’ರೆಂದು ಘೋಷಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳ ಮುಖ್ಯಮಂತ್ರಿಗಳೂ ಈ ವ್ಯಾಖ್ಯಾನಕ್ಕೆ ಸಹಮತ ವ್ಯಕ್ತಪಡಿಸಿ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ.

ಸರ್ಕಾರ ಹೇಳಿದೆ ಎನ್ನುವುದಕ್ಕಷ್ಟೇ ಅಲ್ಲ; ಯುದ್ಧ, ಅತಿವೃಷ್ಟಿ, ಅನಾವೃಷ್ಟಿಯಂಥ ವಿಷಮ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವುದು ಮಾಧ್ಯಮದ ಜಾಯಮಾನ ಮತ್ತು ಕರ್ತವ್ಯ. ಆದರೆ ಕೊರೋನಾದಂತಹ ಮಾರಣಾಂತಿಕ ಕಾಯಿಲೆ ಸಂದರ್ಭದಲ್ಲಿ ಕೇವಲ ಕೆಚ್ಚು ಇದ್ದರೆ ಸಾಲದು, ಮುನ್ನೆಚ್ಚರಿಕೆಯೂ ಬೇಕೆಂಬ ಅರಿವು ನಮಗಿದೆ. ಈಗಾಗಲೇ ನಮ್ಮ ಪತ್ರಿಕಾಲಯಗಳು, ಪ್ರಿಂಟಿಂಗ್‌ ಪ್ರೆಸ್‌ಗಳು ಅತ್ಯಾಧುನಿಕ, ಹೈಟೆಕ್‌ ತಂತ್ರಜ್ಞಾನವನ್ನು ಬಳಕೆಗೆ ತಂದಿವೆ. ಮನುಷ್ಯನ ಕೈ ಸ್ಪರ್ಶವೇ ಇಲ್ಲದೆ ಪತ್ರಿಕೆಗಳು ಮುದ್ರಣಗೊಂಡು ಕೊನೆಯ ವಿತರಣಾ ಕೇಂದ್ರದವರೆಗೆ ತಲುಪಿಸುವ ವ್ಯವಸ್ಥೆಯನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಕೊನೆಯ ವಿತರಣಾ ಕೇಂದ್ರದಿಂದ ವಿತರಕರು ಬರಿಗೈನಲ್ಲಿ ಪತ್ರಿಕೆಯನ್ನು ಮುಟ್ಟದೇ ವಿತರಣೆ ಮಾಡುವ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟುಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಪತ್ರಿಕಾ ಸಂಸ್ಥೆಗಳೂ ಪತ್ರಿಕೆಗಳ ವಿತರಣೆಗೆ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯೇ ಪತ್ರಿಕೆಗಳಿಂದ ಕೊರೋನಾ ಹರಡುವ ಸಾಧ್ಯತೆಗಳು ಇಲ್ಲ ಎಂದು ಸ್ಪಷ್ಟಪಡಿಸಿದೆ.

ಇಲ್ಲಿ ಉಲ್ಲೇಖಿಸಲೇಬೇಕಾದ ಎರಡು ಮುಖ್ಯವಾದ ಸಂಗತಿಗಳಿವೆ. ಮೊದಲನೆಯದ್ದು: ಪತ್ರಿಕೆಗಳಿಂದ ಯಾವುದೇ ಮಾರಣಾಂತಿಕ ವೈರಸ್‌ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಅದಕ್ಕಿಂತ ಮುಖ್ಯವಾಗಿ, ನಮ್ಮ ಜೀವನದ ಭಾಗವಾದ ಖಚಿತ ಮಾಹಿತಿಯನ್ನು ಕೊರೋನಾದಂತಹ ತುರ್ತು ಸಂದರ್ಭಗಳಲ್ಲಿ ಪಡೆಯುವ ಮಾಧ್ಯಮವೆಂದರೆ ಅವು ಪತ್ರಿಕೆಗಳು.

ಅನಗತ್ಯ ಭಯ ಬಿತ್ತಿ, ಸುಳ್ಳು ಸುದ್ದಿಗಳನ್ನು ಹರಡಿ ಸೋಷಿಯಲ್‌ ಮೀಡಿಯಾಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಜನರ ಜೀವನವನ್ನು ದುರ್ಭರಗೊಳಸುತ್ತಿರುವ ಇವತ್ತಿನ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಗಳನ್ನು ಬಿಟ್ಟರೆ ಬೇರೆ ಯಾವುದಿದೆ? ಹೀಗಾಗಿ ಪತ್ರಕರ್ತರು, ಮುದ್ರಣ ತಂತ್ರಜ್ಞರು ಹಾಗೂ ನಿಮ್ಮ ಮನೆ ಬಾಗಿಲಿಗೆ ಮಳೆ, ಗಾಳಿ, ಚಳಿಗೆ ಜಗ್ಗದೆ ಪತ್ರಿಕೆ ಹೊತ್ತು ತರುವ ವಿತರಣಾ ಸೇನಾನಿಗಳು ಜೀವದ ಹಂಗು ತೊರೆದು ‘ಅಗತ್ಯ ಸೇವೆ’ಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಿಯ ಓದುಗ ದೊರೆಗಳೇ, ನಾವು ಗರಿಷ್ಠ ಹೊಣೆಗಾರಿಕೆಯಿಂದ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನುಕುಲದ ಹಿತ ಕಾಯುವ ಕೆಲಸ ಮಾಡೋಣ. ಕೊರೋನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ...

ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ ಒಂದು ಪ್ರಮಾಣ...

-ಸಂಪಾದಕರು,

ಕನ್ನಡಪ್ರಭ, ವಿಜಯ ಕರ್ನಾಟಕಕ, ವಿಜಯವಾಣಿ, ಪ್ರಜಾವಾಣಿ, ವಿಶ್ವವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ, ಹೊಸ ದಿಗಂತ

"

ಕೊರೋನಾ ಸಂಬಂಧ ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಜಗತ್ತು ಬಹುದೊಡ್ಡ ಪಾತ್ರ ವಹಿಸಿದೆ. ಕಾರ್ಯಕ್ಷೇತ್ರಕ್ಕಿಳಿದು ವರದಿಗಾರಿಕೆ ಮಾಡುವ ಮತ್ತು ಸುದ್ದಿಮನೆಯಲ್ಲಿರುವ ಎಲ್ಲ ಪತ್ರಕರ್ತರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಮಾಧ್ಯಮಗಳು ಕೂಡಾ ತಮ್ಮ ಸಿಬ್ಬಂದಿಗೆ ವರ್ಕ್ ಫ್ರಮ್‌ ಹೋಮ್‌ ವ್ಯವಸ್ಥೆ ಮಾಡಿರುವುದು ಕಂಡು ಖುಷಿಯಾಯಿತು.

- ನರೇಂದ್ರ ಮೋದಿ, ಪ್ರಧಾನಿ

click me!