
1987- 88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ (Ramayana) ಯಾರಿಗೆ ತಾನೆ ನೆನಪಿಲ್ಲ. ಟಿ.ವಿ ಇನ್ನೂ ಕೆಲವೇ ಕೆಲವರ ಮನೆಯನ್ನು ಅಲಂಕರಿಸಿತ್ತು. ಈ ಧಾರಾವಾಹಿ ಶುರುವಾಗುವ ಪೂರ್ವದಲ್ಲಿ ಟಿ.ವಿಗೆ ಹಾರ ಹಾಕಿ ಪೂಜೆ ಮಾಡಿದವರೂ ಇದ್ದಾರೆ. ಇಲ್ಲಿಯ ಪಾತ್ರಧಾರಿಗಳನ್ನು ನಿಜವಾಗಿ ದೇವತೆಗಳು ಎಂದು ನಂಬಿದ್ದರು . ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ಆಗ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ಅಷ್ಟು ಈ ಪಾತ್ರಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದವು. ಇದೇ ಕಾರಣಕ್ಕೆ ಅಂದು ದೇವತೆಗಳ ಪಾತ್ರ ಮಾಡುವವರು ಮದ್ಯ, ಮಾಂಸಾಹಾರ ಸೇವನೆಯನ್ನು ಬಿಡುತ್ತಿದ್ದರು. ಒಮ್ಮೆ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಸಿಗರೇಟ್ ಸೇಯುತ್ತಿರುವುದನ್ನು ನೋಡಿ ಅವರ ಅಭಿಮಾನಿಯೊಬ್ಬ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಜೀವನ ಪೂರ್ತಿ ತಾವು ಸ್ಮೋಕ್ ಮಾಡುವುದನ್ನು ಬಿಟ್ಟಿರುವುದಾಗಿ ಅರುಣ್ ಹೇಳಿದ್ದರು.
ಇದು ಧಾರಾವಾಹಿಗಳ ಮಾತಾದರೆ, ಸಿನಿಮಾದಲ್ಲಿಯೂ ದೇವತೆಗಳ ಪಾತ್ರವನ್ನು ಮಾಡುವಂತೆ ಮದ್ಯ, ಮಾಂಸಾಹಾರ ಸೇವನೆ ಮಾಡುವ ನಾಯಕರಿದ್ದಾರೆ. ಡಾ.ರಾಜ್ಕುಮಾರ್ ಅವರು ರಾಘವೇಂದ್ರ ಸೇರಿದಂತೆ ಕೆಲವು ದೇವರ ಪಾತ್ರಗಳನ್ನು ಮಾಡುವ ವೇಳೆ ಮಾಂಸಾಹಾರ ಸೇವನೆ ಬಿಟ್ಟಿದ್ದ ಬಗ್ಗೆ ತಿಳಿಸಿದ್ದರು. ಇಂಥ ದೊಡ್ಡ ವರ್ಗವೇ ಇದೆ. ಈಗ ಇದೇ ಸಾಲಿಗೆ ಸೇರಿದ್ದಾರೆ ನಟ ರಣಬೀರ್ ಕಪೂರ್. ರಾಮಾಯಣ ಆಧರಿಸಿ ಸಿದ್ಧವಾದ ‘ಆದಿಪುರುಷ್’ (Adipurush Movie) ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ಬೆನ್ನಲ್ಲೇ ಇದೀಗ ರಾಮಾಯಣ ತೆರೆಯ ಮೇಲೆ ಬರಲಿದೆ. ಇದರಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಈಗ ಬಹಳ ಸುದ್ದಿಯಲ್ಲಿದ್ದಾರೆ.
ಸಾವಿನ ಸೂಚನೆ ಸಿಗ್ತಿದ್ದಂತೆಯೇ ರಾಮ ಮಂದಿರದ ಉದ್ಘಾಟನೆಗಾಗಿ ಭಜನೆ ರೆಕಾರ್ಡ್ ಮಾಡಿದ ಲತಾ ದೀದಿ!
ನಿತೀಶ್ ತಿವಾರಿ ಅವರು ರಾಮಾಯಾಣವನ್ನು ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ, ರಾಮನಾಗಿ ಮಿಂಚಲಿರುವ ರಣಬೀರ್ ಕಪೂರ್ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದಾರಂತೆ. ಇವರು ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ರಣಬೀರ್ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಇದೀಗ ರಣಬೀರ್ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದಾರೆ@
ರಣಬೀರ್ ಕಪೂರ್ ಅವರು ‘ಅನಿಮಲ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿದ್ದಾರೆ. ಇದರ ಮಧ್ಯೆಯೇ ರಾಮಾಯಣವೂ ಶುರುವಾಗಿದೆ. ರಣಬೀರ್ ಅವರ ಈ ಹೇಳಿಕೆ ಸ್ಟಂಟ್ಗಾಗಿ, ಪಬ್ಲಿಸಿಟಿಗಾಗಿ ಎಂದು ಟ್ರೋಲ್ ಮಾಡಲಾಗುತ್ತಿದೆ. ಯಾರು ಏನೇ ಹೇಳಿದರೂ ತಾವು ತಮ್ಮ ಮಾತಿಗೆ ಬದ್ಧ ಎಂದಿರುವ ನಟ, ರಾಮಾಯಣ ಸಿನಿಮಾದ ಶೂಟಿಂಗ್ ಮುಗಿಯುವವರೆಗೂ ಮದ್ಯ, ಮಾಂಸ ಮುಟ್ಟುವುದಿಲ್ಲ ಎಂದಿದ್ದಾರೆ. ಶ್ರೀರಾಮಚಂದ್ರನಷ್ಟೇ ಪರಿಶುದ್ಧವಾಗಿರುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಸಸ್ಯಾಹಾರಿ ಪ್ರಿಯರು ತುಂಬಾ ಖುಷಿಯಾಗಿದ್ದಾರೆ. ನಮೋ ನಮಃ ನಿಮಗೆ ಎನ್ನುತ್ತಿದ್ದಾರೆ. ಜೈಶ್ರೀರಾಮ್ ಎಂದೂ ನಟನಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.