ನಾನೀಗ ಯಾರೂ ಅಲ್ಲ, ನನ್ನಲ್ಲೀಗ ಏನೂ ಇಲ್ಲ: ಅನಿಲ್ ಅತ್ತಿದ್ದು ಕೇಳಸ್ತಲ್ವಾ?

By Web DeskFirst Published Feb 16, 2019, 12:40 PM IST
Highlights

ಸುಪ್ರೀಂ ಕೋರ್ಟ್‌ನಲ್ಲಿ ‘ಐ ಆ್ಯಮ್ ನಥಿಂಗ್’ ಎಂದ ಅನಿಲ್ ಅಂಬಾನಿ| ಎಲ್ಲವೂ ನನ್ನ ಕೈ ಮೀರಿದೆ ಎಂದು ಅಲವತ್ತುಕೊಂಡ ಅನಿಲ್| ಎರಿಕ್ಸನ್ ಕಂಪನಿಗೆ 550 ಕೋಟಿ ರೂ. ಸಾಲ ತೀರಿಸಬೇಕಾಗಿದೆ ಅನಿಲ್| ಸುಪ್ರೀಂ ಕೋರ್ಟ್‌ನಲ್ಲಿ ಅನಿಲ್ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ| ಅನಿಲ್ ಅಂಬಾನಿಗೆ ಸಮಯ ಕೊಡುವಂತೆ ಮನವಿ ಮಾಡಿದ ಮುಕುಲ್ ರೋಹ್ಟಗಿ| ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್|

ಮುಂಬೈ(ಫೆ.16): ‘ಎಲ್ಲವೂ ನನ್ನ ಕೈ ಮೀರಿದೆ. ಈಗ ನಾನು ಯಾರೂ ಅಲ್ಲ, ಕೊಡಲು ನನ್ನ ಬಳಿ ಏನೂ ಇಲ್ಲ...’ಇದು ಅನಿಲ್ ಅಂಬಾನಿ ಸುಪ್ರೀಂ ಕೋರ್ಟ್‌ನಲ್ಲಿ ಅಲವತ್ತುಕೊಂಡ ಪರಿ.

ಹೌದು, ಎರಿಕ್ಸನ್‌ ಕಂಪನಿಗೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಶನ್ಸ್ 550 ಕೋಟಿ ರೂ. ಸಾಲ ನೀಡಬೇಕಿದ್ದು, ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ.

ವಿಚಾರಣೆ ವೇಳೆ ಅನಿಲ್ ಅಂಬಾನಿ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ, ಅನಿಲ್ ಅವರ ಸಂದೇಶವನ್ನು ಕೋರ್ಟ್‌ಗೆ ತಿಳಿಸಿದರು. ಸದ್ಯ ಅನಿಲ್ ಅಂಬಾನಿ ದಿವಾಳಿತನದ ಕುರಿತು ದಿವಾಳಿ ನ್ಯಾಯಾಲಯದಲ್ಲಿ ಪ್ರತ್ಯೇಕ ವಿಚಾರಣೆ ನಡೆಯುತ್ತಿದ್ದು, ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಅವಧಿಯೊಳಗಾಗಿ ಸಾಲ ತೀರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಎರಿಕ್ಸನ್ ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ದುಶ್ಯಂತ್ ದವೆ ಮತ್ತು ಅನಿಲ್ ಖೇರ್, ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಅನಿಲ್ ಅಂಬಾನಿ 550 ಕೋಟಿ ರೂ. ಸಾಲ ತೀರಿಸಬೇಕಿದ್ದು, ಕಂಪನಿಗೆ ನ್ಯಾಯ ಒದಗಿಸಿ ಕೊಡಬೇಕಿದೆ ಎಂದು ಮನವಿ ಮಾಡಿದರು.

ಆದರೆ ಅನಿಲ್ ಅಂಬಾನಿ ಸಾಲ ತೀರಿಸಲು ತೀವ್ರ ಪ್ರಯತ್ನ ಪಡುತ್ತಿದ್ದು, ಹಣ ಹೊಂದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮುಕುಲ್ ರೋಹ್ಟಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಸದ್ಯ ವಾದ ವಿವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.

click me!