‘ಬ್ರಹ್ಮಗಂಟು’ ಧಾರಾವಾಹಿಯು ಗುಣ ಮತ್ತು ಸೌಂದರ್ಯದ ನಡುವಿನ ಸಂಘರ್ಷದ ಕಥೆಯಾಗಿದ್ದು, ಇದೀಗ ರೋಚಕ ತಿರುವು ಪಡೆದಿದೆ. ಇದರ ನಾಯಕ-ನಾಯಕಿ ದಿಯಾ ಪಾಲಕ್ಕಲ್ ಮತ್ತು ಭುವನ್ ಸತ್ಯ ಅವರು ಜೀ ಕುಟುಂಬ ಅವಾರ್ಡ್ಸ್ನಲ್ಲಿ ಆಟವೊಂದರಲ್ಲಿ ಭಾಗವಹಿಸಿದ್ದು, ಲೇಖನವು ಅವರ ನಟನಾ ಹಿನ್ನೆಲೆಯನ್ನೂ ವಿವರಿಸುತ್ತದೆ.
ಬ್ರಹ್ಮಗಂಟು ಸೀರಿಯಲ್ ( Brahmagantu Serial) ಈಗ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಸೌಂದರ್ಯಕ್ಕಿಂತ ಗುಣನೇ ಮೇಲು ಎಂದು ಹೇಳಹೊರಟಿರುವ ಈ ಸೀರಿಯಲ್ನಲ್ಲಿ ಗೆಲ್ಲುವುದು ಯಾವುದು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇಲ್ಲಿ ಸೋಡಾ ಗ್ಲಾಸ್, ಎಣ್ಣೆ ಕೂದಲು, ಹಲ್ಲಿಗೆ ಕ್ಲಿಪ್, ಜಡೆಗೆ ರಿಬ್ಬನ್, ಮುಖಕ್ಕೆ ಕಪ್ಪು ಬಣ್ಣ ಬಳಿದುಕೊಂಡಿರೋ ದೀಪಾಳೆ ಇದಕ್ಕೆ ನಾಯಕಿ. ಯಾವುದೋ ಒಂದು ಸನ್ನಿವೇಶದಲ್ಲಿ ಸುರಸುಂದರಾಂಗ ಚಿರುನ್ನ ಮದ್ವೆಯಾಗ್ತಾಳೆ. ಅಲ್ಲಿಂದ ಇಲ್ಲಿಯವರೆಗೂ ಅವಳು ಎದುರಿಸಿದ್ದು ಬಾಡಿ ಶೇಮಿಂಗೇ. ಆದರೆ ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯ ಎಂದು ಸಾಧಿಸಲು ಹೊರಟಿದ್ದಾಳೆ ದೀಪಾ. ಆದರೆ ಸೌಂದರ್ಯ ಮುಖ್ಯ ಎನ್ನೋದು ವಿಲನ್ ಅತ್ತಿಗೆ ಸೌಂದರ್ಯಳ ಮಾತು. ಸದ್ಯ ಇದು ಸೌಂದರ್ಯ v/s ಗುಣ ಎಂದಾಗಿದೆ.
ಜೀ ಕುಟುಂಬ ಅವಾರ್ಡ್ ಗೇಮ್
ಇದು ಸೀರಿಯಲ್ ಸ್ಟೋರಿ ಆದ್ರೆ ಸದ್ಯ ಬ್ರಹ್ಮಗಂಟು ಸೀರಿಯಲ್ ನಾಯಕ-ನಾಯಕಿ ಈಗ ಜೀ ಕುಟುಂಬ ಅವಾರ್ಡ್ಗೆ ಬಂದಿದ್ದಾರೆ. ಅಂದಹಾಗೆ ಈ ಸೀರಿಯಲ್ನ ದೀಪಾ ಉರ್ಫ್ ದಿಶಾಳ ರಿಯಲ್ ಹೆಸರು ದಿಯಾ ಪಾಲಕ್ಕಲ್ ಹಾಗೂ ನಾಯಕ ಚಿರು ಹೆಸರು ಭುವನ್ ಸತ್ಯ. ಇವರಿಬ್ಬರೂ ಈ ಅವಾರ್ಡ್ಗೆ ನಾಮಿನೇಟ್ ಆಗಿದ್ದು, ಇವರಿಬ್ಬರನ್ನೂ ಕುತೂಹಲದ ಆಟದ ಮೂಲಕ ಬರಮಾಡಿಕೊಳ್ಳಲಾಗಿದೆ. ಇದರಲ್ಲಿ ಜೀ ಕನ್ನಡದ ಬೇರೆ ಬೇರೆ ಸೀರಿಯಲ್ಗಳ ಪಾತ್ರಧಾರಿಯಗಳ ಮುಖವನ್ನು ಇಡಲಾಗಿದೆ. ಆ್ಯಂಕರ್ ಒಂದೊಂದು ಹೆಸರು ಹೇಳುತ್ತಿದ್ದಂತೆಯೇ ಅವರು ಅದನ್ನು ಪಿಕ್ ಮಾಡಬೇಕು. ಆರಂಭದಲ್ಲಿ ದಿಯಾ ಅವರು ಗೆದ್ದಂತೆ ಕಂಡರೂ ಕೊನೆಯಲ್ಲಿ ಗೆದದ್ದು ಚಿರಾಗ್ ಉರ್ಫ್ ಭುವನ್ ಅವರು. ಅದರ ಇಂಟರೆಸ್ಟಿಂಗ್ ವಿಡಿಯೋ ಅನ್ನು ವಾಹಿನಿ ಶೇರ್ ಮಾಡಿಕೊಂಡಿದೆ.
ದಿಯಾ ಹಿನ್ನೆಲೆ
ಇನ್ನು ದಿಯಾ ಕುರಿತು ಹೇಳುವುದಾದರೆ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.
ಭುವನ್ ಕುರಿತು...
ಚಿರು ಪಾತ್ರಧಾರಿ ಭುವನ್ ಸತ್ಯ (Bhuvan Satya) ಕುರಿತು ಹೇಳುವುದಾದರೆ, ಅವರಿಗೆ 'ಬ್ರಹ್ಮಗಂಟು' ಎರಡನೇ ಧಾರಾವಾಹಿ. ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಪುಣ್ಯವತಿ' ಧಾರಾವಾಹಿಯು ಶುರುವಾದ ಒಂದೇ ವರ್ಷಕ್ಕೆ ತನ್ನ ಪ್ರಸಾರ ನಿಲ್ಲಿಸಿತ್ತು. ಟಿಆರ್ಪಿ ಕಡಿಮೆ ಇದ್ದ ಕಾರಣದಿಂದಲೋ ಏನೋ, ಸುಖಾಂತ್ಯ ಕಾಣುವ ಮೂಲಕ 'ಪುಣ್ಯವತಿ' ಧಾರಾವಾಹಿ ಕೊನೆಗೊಂಡಿತ್ತು. ಅವರ ನಟನೆಗೆ ಫ್ಯಾನ್ಸ್ ಸಂಖ್ಯೆ ಹೆಚ್ಚುತ್ತಲೇ ಸಾಗಿತ್ತು. 'ಪುಣ್ಯವತಿ' ಧಾರಾವಾಹಿ ಮುಗಿದು ವರ್ಷ ಕಳೆಯುವಷ್ಟರಲ್ಲಿ ಚಿರಾಗ್ ಆಗಿ ಬ್ರಹ್ಮಗಂಟುವಿನಲ್ಲಿ ಕಾಣಿಸಿಕೊಂಡಿದ್ದಾರೆ.
