Anchor Anushree: ನಿರೂಪಕಿ ಅನುಶ್ರೀ ಹಾಗೂ ರೋಶನ್‌ ಅವರು ಅದ್ದೂರಿಯಾಗಿ ಕುಟುಂಬಸ್ಥರು, ಸ್ನೇಹಿತರು, ಆಪ್ತರ ಸಾಕ್ಷಿಯಾಗಿ ಮದುವೆ ಆಗಿದ್ದಾರೆ. ಹೀಗಿರುವಾಗ ಪುನೀತ್‌ ರಾಜ್‌ಕುಮಾರ್‌ ಅವರನ್ನು ಮರೆತಿಲ್ಲ. 

ನಿರೂಪಕಿ ಅನುಶ್ರೀ ಹಾಗು ರೋಶನ್‌ ಮದುವೆ ಆಗಿದ್ದಾರೆ. ಬೆಳಗ್ಗೆ 10.56ಕ್ಕೆ ಮಾಂಗಲ್ಯಧಾರಣೆ ಆಗಿದೆ. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ ಅದ್ದೂರಿಯಾಗಿ ಸಿಂಗಾರ ಆಗಿತ್ತು. ಕೆಂಪು, ಕೇಸರಿ ಬಣ್ಣದ ಸೀರೆಯಲ್ಲಿ ಅನುಶ್ರೀ ಅವರು ಕಂಗೊಳಿಸಿದ್ದಾರೆ. ರೋಶನ್‌ ಅವರು ರೇಷ್ಮೆ ಪಂಚೆ, ಶರ್ಟ್‌ ಹಾಕಿ ಮಿಂಚಿದ್ದಾರೆ. ಮದುವೆ ಖುಷಿಯಲ್ಲಿರುವ ಅನುಶ್ರೀ ಅವರು ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ಮರೆತಿಲ್ಲ.

Add Asianetnews Kannada as a Preferred SourcegooglePreferred

ಪುನೀತ್‌ ದೈಹಿಕವಾಗಿ ಇದ್ದಿದ್ದರೆ ಬರುತ್ತಿದ್ದರು

ಅನುಶ್ರೀ ಅವರಿಗೆ ಪುನೀತ್‌ ರಾಜ್‌ಕುಮಾರ್‌ ಅಂದರೆ ತುಂಬ ಇಷ್ಟ. ಸಾಕಷ್ಟು ಬಾರಿ ಅವರು ಅಪ್ಪುನನ್ನು ನೋಡಿದಾಗಲೂ ಕೂಡ “ನನಗೆ ಫ್ಯಾನ್‌ ಮೂಮೆಂಟ್‌ ಕ್ರಿಯೇಟ್‌ ಆಗುತ್ತದೆ” ಎಂದು ಹೇಳಿದ್ದರು. ಇದನ್ನು ಅವರು ಅಪ್ಪು ಬಳಿಯೇ ಹೇಳಿಕೊಂಡಿದ್ದರು. ಪುನೀತ್‌ ಇನ್ನಿಲ್ಲ ಎಂದಾಗ ಅನುಶ್ರೀ ಸಿಕ್ಕಾಪಟ್ಟೆ ಕಣ್ಣೀರು ಕೂಡ ಹಾಕಿದ್ದರು. ಪುನೀತ್‌ ರಾಜ್‌ಕುಮಾರ್‌ ಇಂದು ದೈಹಿಕವಾಗಿ ಇದ್ದಿದ್ದರೆ ಪಕ್ಕಾ ಅನುಶ್ರೀ ಮದುವೆಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಪುನೀತ್‌ ನಮ್ಮ ಜೊತೆಯೇ, ನಮ್ಮ ಮನಸ್ಸಿನಲ್ಲಿ, ಸ್ಮೃರಿಪಟಲದಲ್ಲಿ ಇದ್ದಾರೆ ಎನ್ನೋದು ಕೂಡ ಸತ್ಯ.

ಪುನೀತ್‌ ಅಭಿಮಾನಿ

ಇಂದು ಅನುಶ್ರೀ ಮದುವೆ ಆಗಿದೆ. ಅಲ್ಲಿ ಪುನೀತ್‌ ರಾಜ್‌ಕುಮಾರ್‌ ಫೋಟೋವನ್ನು ಇಡಲಾಗಿದೆ. ಪ್ರತಿ ವೇದಿಕೆಯಲ್ಲಿಯೂ ನಾನು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಎಂದೋ ಅಥವಾ ಪುನೀತ ಕನ್ನಡಿಗರಿಗೆ ಎಂದು ಅನುಶ್ರೀ ಮಾತು ಶುರು ಮಾಡುತ್ತಾರೆ. ಈ ಗುಣ ಅನೇಕರಿಗೆ ಇಷ್ಟ ಆಗಿದೆ. ಅಂದಹಾಗೆ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಅವರು ಅನುಶ್ರೀ ಮದುವೆಗೆ ಬರುವ ಸಾಧ್ಯತೆ ಇದೆ.

ರೋಶನ್‌ ಯಾರು?

ರೋಶನ್‌ ಅವರು ಕೊಡಗು ಮೂಲದ ಉದ್ಯಮಿ ಎನ್ನಲಾಗಿದೆ. ವರ್ಷಗಳಿಂದ ಅನುಶ್ರೀ ಹಾಗೂ ರೋಶನ್‌ ಡೇಟ್‌ ಮಾಡುತ್ತಿದ್ದರು. ಈ ವಿಷಯವು ಅವರ ಆಪ್ತ ವಲಯಕ್ಕೆ ತಿಳಿದಿತ್ತು. ಕಳೆದ ಎರಡು ವರ್ಷಗಳಿಂದ ಅನುಶ್ರೀ ಅವರು “ನಾನು ಮದುವೆ ಆಗ್ತೀನಿ, ಶೀಘ್ರದಲ್ಲಿ ಮದುವೆ ಆಗ್ತೀನಿ” ಎಂದು ಗಟ್ಟಿಯಾಗಿ ಹೇಳಿಕೊಂಡು ಬರುತ್ತಿದ್ದರು. ಈಗ ಈ ಮಾತು ನಿಜವಾಗಿದೆ. ಅನುಶ್ರೀ ಮದುವೆ ನೋಡೋದು ಅವರ ತಾಯಿ ಕನಸಾಗಿತ್ತು, ಅದೀಗ ನೆರವೇರಿದೆ.

ಸಾಧನೆ ಮಾಡಿರೋ ಅನುಶ್ರೀ

ತಂದೆ ಪ್ರೀತಿಯಿಲ್ಲದೆ, ಬಡತನದಲ್ಲಿ ಬೆಳೆದ ಅನುಶ್ರೀ ಈಗ ಹೆಸರು ಮಾಡಿ, ಅದ್ದೂರಿಯಾಗಿ ರೆಸಾರ್ಟ್‌ನಲ್ಲಿ ಮದುವೆ ಆಗ್ತಿರೋದು, ಈ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಆಗಮಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಅನುಶ್ರೀ ಮದುವೆಯು ಖಾಸಗಿಯಾಗಿ ನಡೆದಿದೆ. ಚಿತ್ರರಂಗದ ಆಪ್ತರಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿದೆ.

ಅಭಿಮಾನಿಗಳಿಗೆ ಬೇಸರ

ಅಂದಹಾಗೆ ಅನುಶ್ರೀ ಅಭಿಮಾನಿಗಳು ರೆಸಾರ್ಟ್‌ ಆಚೆ ನಿಂತಿದ್ದು, “ನಮ್ಮಿಂದಲೇ ಅನುಶ್ರೀ ಬೆಳೆದಿದ್ದು, ಅವರ ಮದುವೆಗೆ ಹೋಗೋಕೆ ಅವಕಾಶವೇ ಇಲ್ಲ. ನಾವು ಅಕ್ಷತೆ ಕಾಳು ಹಾಕಿ ಬರುತ್ತಿದ್ದೆವು, ಅದಕ್ಕೂ ಅವಕಾಶ ಇಲ್ಲ. ನಾವು ಬಂದರೆ ಊಟ ಖಾಲಿ ಆಗುತ್ತದೆ ಅಂತ ಅಂದುಕೊಂಡಿರಬಹುದು. ಎಂಎಲ್‌ಎ ಮದುವೆಯಲ್ಲಿ ಕೂಡ ಈ ರೀತಿ ಆಗಿರಲಿಲ್ಲ. ಎಂಎಲ್‌ಎಗಿಂತ ದೊಡ್ಡವರಾ ಇವರು” ಎಂದು ಯುಟ್ಯೂಬ್‌ ಚಾನೆಲ್‌ಗಳ ಬಳಿ ಬೇಸರ ಹೊರಹಾಕಿದ್ದಾರೆ.