ಕಲಬುರಗಿಯ ಸೇಡಂನಲ್ಲಿ ಪಥ ಸಂಚಲನ ಹೊರಟ RSS ಕಾರ್ಯಕರ್ತರು ಅರೆಸ್ಟ್, ಅನುಮತಿ ಇಲ್ಲದೆ ಆರ್‌ಎಸ್ಎಸ್ ಕಾರ್ಯಕರ್ತರು ಪಥಸಂಚಲನ ಮಾಡಲಾಗುತ್ತಿದೆ ಎಂದು ಪೊಲೀಸರು ಸಂಘದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. 

ಸೇಡಂ (ಅ.19) ಕರ್ನಾಟಕದಲ್ಲಿ ಇದೀಗ ಆರ್‌ಎಸ್ಎಸ್ ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಜೋರಾಗುತ್ತಿದೆ.ಶಾಲಾ ಆವರಣದಲ್ಲಿ ಆರ್‌ಎಸ್ಎಸ್ ಚಟುವಟಿಕೆ ಬ್ಯಾನ್ ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ, ಸಿದ್ದರಾಮಯ್ಯ ಸಂಪುಟ ತೆಗೆದುಕೊಂಡ ನಿರ್ಧಾರದ ಬಳಿಕ ಸಂಘರ್ಷ ಹೆಚ್ಚಾಗಿದೆ. ಆರ್‌ಎಸ್ಎಸ್ ಪಥಸಂಚಲನಕ್ಕೆ ಅಡ್ಡಿ ಆತಂಕಗಳೇ ಎದುರಾಗುತ್ತಿದೆ. ಕೆಲೆವೆಡೆ ಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆಯುವ ಅನಿವಾರ್ಯತೆ ಆರ್‌ಎಸ್ಎಸ್‌ಗೆ ಎದುರಾಗಿದೆ. ಇದರ ನಡುವೆ ಕಲುಬುರಗಿ ಜಿಲ್ಲೆಯ ಸೇಡಂನಲ್ಲಿ ಸಂಘರ್ಷ ತೀವ್ರಗೊಂಡಿದೆ. ಸೇಡಂನಲ್ಲಿ ಪಥಸಂಚಲನ ಹೊರಟ ಆರ್‌ಎಸ್ಎಸ್ ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನೂರಾರು ಗಣವೇಶಧಾರಿಗಳು ಅರೆಸ್ಟ್

ಸೇಡನಂ ಮಾತೃಛಾಯ ಶಾಲೆಯಿಂದ ಪಥ ಸಂಚಲನ ಹೊರಟ ಆರ್‌ಎಸ್ಎಸ್ ಕಾರ್ಯಕರ್ತರು ತುಸ ದೂರ ಸಾಗುತ್ತಿದ್ದಂತೆ ಪೊಲೀಸರು ಅಡ್ಡಗಟ್ಟಿದ್ದಾರೆ. ಪಥಸಂಚಲನ ತಡೆ ನೀಡಿ, ಗಣವೇಶಧಾರಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅನುಮತಿ ಇಲ್ಲದೆ ಪಥಸಂಚಲನ ನಡೆಸುತ್ತಿದ್ದಾರೆ ಎಂದು ಆರ್‌ಎಸ್ಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಸೇಡಂ ಪಥಸಂಚಲನಕ್ಕೆ ಅನುಮತಿ ನೀಡದ ಜಿಲ್ಲಾಡಳಿತ

ಕಲಬುರಗಿ ಜಿಲ್ಲೆ ಸೇಡಂನಲ್ಲಿ RSS ಪಥ ಸಂಚಲನಕ್ಕೆ ತಾಲೂಕು ಆಡಳಿತ ಅನುಮತಿ ನೀಡಿಲ್ಲ. ಮನವಿ ಪತ್ರ , ಇತರ ಮಾಹಿತಿ ಒಳಗೊಂಡ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರೂ ಅನುಮತಿ ನೀಡಿಲ್ಲ ಅನ್ನೋ ಆರೋಪಗಳು ಕೇಳಿಬಂದಿದೆ. ಇತ್ತ ತಾಲೂಕಾ ಆಡಳಿತಕ್ಕೆ ಸೆಡ್ಡು ಹೊಡೆದ ಆರ್‌ಎಸ್ಎಸ್ ಕಾರ್ಯಕರ್ತರು ಪಥ ಸಂಚಲನ ಆರಂಭಿಸಿದ್ದರು. ಒಂದೆಡೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಚಿತ್ತಾಪುರ ಬೆನ್ನಲ್ಲೇ ಕಲಬುರಗಿಯಲ್ಲಿ ತೀವ್ರಗೊಂಡ ಸಂಘರ್ಷ

ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನೀಡದ ಕಾರಣ, ಸಂಘದ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದರು. ಅನುಮತಿ ನಿರಾಕರಣೆ ಮಾಹಿತಿ ಕೊರತೆ ಎಂಬ ಕಾರಣ ನೀಡಿದ್ದ ಸರ್ಕಾರಕ್ಕೆ ಕೋರ್ಟ್, ನವೆಂಬರ್ 2ರ ಪಥಸಂಚಲನಕ್ಕೆ ಅರ್ಜಿ ಪರಿಗಣಿಸುವಂತೆ ಸೂಚಿಸಿದೆ. ಇದೇ ವೇಳೆ ಆರ್‌ಎಸ್ಎಸ್ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ. ಪ್ರಿಯಾಂಕ್ ಖರ್ಗೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಸ್ಎಸ್ ಬೃಹತ್ ಪಥಸಂಚಲನಕ್ಕೆ ತಯಾರಿ ಮಾಡಿಕೊಂಡಿತ್ತು. ಪಥಸಂಚಲನಕ್ಕೆ ಆರ್‌ಎಸ್ಎಸ್ ಕಾರ್ಯಕರ್ತರು ನಗರದಲ್ಲಿ ಭಾಗವಾ ಧ್ವಜ, ಕೇಸರಿ ಧ್ವಜಗಳನ್ನು ಹಾಕಲಾಗಿತ್ತು. ಆದರೆ ಜಿಲ್ಲಾಡಳಿತ ರಾತ್ರೋರಾತ್ರಿ ಇವೆಲ್ಲವನ್ನು ತೆರವು ಮಾಡಿತ್ತು. ಇತ್ತ ಪಥಸಂಚಲನಕ್ಕಾಗಿ ಆರ್‌ಎಸ್ಎಸ್ ಜಿಲ್ಲಾಡಳಿತದಿಂದ ಅನುಮತಿ ಕೋರಿತ್ತು. ಆದರೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಹೀಗಾಗಿ ಸಂಘರ್ಷ ತಾರಕಕ್ಕೇರಿತ್ತು. ಆರ್‌ಎಸ್ಎಸ್ ಕಾರ್ಯಕರ್ತರು ರಿಟ್ ಅರ್ಜಿ ಮೂಲಕ ಕೋರ್ಟ್ ಮೆಟ್ಟಿಲೇರಿದ್ದರು.

ಆರ್‌ಎಸ್ಎಸ್ ಪಥಸಂಚಲನ ನಿರಾಕರಣಕ್ಕೆ ಕೊಟ್ಟ ಕಾರಣ ಭಾರಿ ಚರ್ಚೆ

ಆರ್‌ಎಸ್ಎಸ್ ಪಥಸಂಚಲನದಲ್ಲಿ ಗಣವೇಶಧಾರಿಗಳು ತಮ್ಮ ದಂಡ ಹಿಡಿದು ಪಥಸಂಚಲನ ಮಾಡುತ್ತಾರೆ. ಇದು ದೇಶದ ಯಾವುದೇ ಮೂಲೆಯಲ್ಲಿನ ಪಥಸಂಚಲನದಲ್ಲೂ ಇದೇ ನಿಯಮ ಎಂದು ಆರ್‌ಎಸ್ಎಸ್ ಕಾರ್ಯಕರ್ತರು ಅನುಮತಿ ನಿರಾಕರಣೆಗೆ ಬೇಸರ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ಪಥಸಂಚಲನದ ವೇಳೆ ಯಾವ ಆಯುಧ ಬಳಕೆ, ಯಾವ ಲಾಠಿ ಬಳಕೆ ಮಾಹಿತಿ ನೀಡಬೇಕು ಎಂದು ಸೂಚಿಸಿತ್ತು. ಇಷ್ಟೇ ಅಲ್ಲ ಪಥಸಂಚಲನದಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಬೇಕು. ಇಷ್ಟೇ ಅಲ್ಲ ಸಂಘದ ನೋಂದಣಿ ಪ್ರತಿಯನ್ನು ಇದುವರೆಗೂ ನೀಡಿಲ್ಲ. ಹೀಗಾಗಿ ಅನುಮತಿ ನಿರಾರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.