ರೇಣುಕಾಸ್ವಾಮಿ ಕೊಲೆ ಆರೋಪಿ ತಂದೆ ನಿಧನ, ಅಂತ್ಯಕ್ರಿಯೆಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಕಾಮಾಕ್ಷಿಪಾಳ್ಯ ಪೊಲೀಸರಿಗೆ ಇಮೇಲ್ ಮೂಲಕ ಕೋರ್ಟ್ ಸೂಚನೆ ನೀಡಿದೆ. ನಾಳೆ ಜೈಲಿನಿಂದ ಕರೆತರಲು ಪೊಲೀಸ್ ಸಿದ್ದತೆ ಮಾಡಿಕೊಂಡಿದೆ.

ಬೆಂಗಳೂರು (ಅ.23) ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳು ಇದೀಗ ಪರದಾಡುತ್ತಿದ್ದಾರೆ. ಈ ಪೈಕಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಜಾಮೀನಿನ ಮೇಲೆ ಬಿಡುಗಡೆಯಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಕೊಲೆ ಆರೋಪಡಿ ಜೈಲು ಸೇರಿರುವ ಆರೋಪಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಈ ಪೈಕಿ ಆರೋಪಿ ಪ್ರದೋಶ್ ತಂದೆ ನಿಧನರಾಗಿದ್ದಾರೆ. ಪ್ರದೋಶ್ ಜೈಲು ಸೇರಿದ ಬಳಿಕ ತಂದೆಯ ಆರೋಗ್ಯ ಕ್ಷೀಣಿಸಿತ್ತು. ಇದೀಗ ಪ್ರದೋಶ್ ತಂದೆ ನಿಧನರಾಗಿದ್ದಾರೆ. ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೋರ್ಟ್ ಪ್ರದೋಶ್‌ಗೆ ಅನುಮತಿ ನೀಡಿದೆ.

ಬೆಂಗಾವಲು ನೀಡುವಂತೆ ಕೋರ್ಟ್ ಸೂಚನೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರೋಪಿಗಳ ಪೈಕಿ ಪ್ರದೋಶ್ ಕೂಡ ಒಬ್ಬ. ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ಪ್ರದೋಶ್, ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರದೋಶ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದೆ. ಇದೇ ವೇಳೆ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಬೆಂಗಾವಲು ನೀಡುವಂತೆ ಸೂಚಿಸಿದೆ. ಈ ಕುರಿತು ಪೊಲೀಸರಿಗೆ ಇಮೇಲ್ ಮೂಲಕ ಕೋರ್ಟ್ ಸೂಚನೆ ನೀಡಿದೆ.

ನಾಳೆ ಜೈಲಿನಿಂದ ಆರೋಪಿಯನ್ನು ಕರೆತರಲಿರುವ ಪೊಲೀಸ್

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರದೋಶ್‌ನನ್ನು ನಾಳೆ ಪೊಲೀಸರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕರೆತರಲಿದ್ದಾರೆ. ಪೊಲೀಸ್ ವಾಹನದಲ್ಲಿ ಆರೋಪಿ ಪ್ರದೋಶ್ ಕರೆತಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಈ ವೇಳೆ ಪೊಲೀಸ್ ಬೆಂಗಾವಲು ಪಡೆಯೂ ಇರಲಿದೆ.

ಪರಪ್ಪನ ಆಗ್ರಹಾರದಲ್ಲಿ 7 ಆರೋಪಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂಬ ಅರ್ಜಿ ಸಲ್ಲಿಸಿದ್ದ ಕೋರ್ಟ್, ಸಮಿತಿ ನೇಮಕ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಈ ವರದಿ ದರ್ಶನ್‌ಗೆ ವಿರುದ್ದವಾಗಿದೆ ಎಂದು ಅರಿವಾಗುತ್ತಿದ್ದಂತೆ ಗರಂ ಆಗಿದ್ದರು. ನನ್ನ ಕೈಲಾದಷ್ಟು ಎಲ್ಲರಿಗೂ ಸಹಾಯ ಮಾಡಿದ್ದೇನೆ. ಈಗ ನನಗೆ ಯಾಕೆ ಈ ಶಿಕ್ಷೆ ಎಂದು ಕೂಗಾಡಿದ್ದರು. ನಾನು ಹೀಗೆ ಜೈಲಿನಲ್ಲೇ ಸಾಯಬೇಕಾ, ಬಿಡುಗಡೆಯೇ ಇಲ್ಲವೇ ಎಂದು ದರ್ಶನ್ ಕಿರುಚಾಡಿದ್ದರು. ಬಳಿಕ ದರ್ಶನ್ ಮೌನಕ್ಕೆ ಜಾರಿದ್ದರು.

ಇತ್ತ ಪವಿತ್ರ ಗೌಡ ಕೂಡ ಜೈಲು ವಾಸದಿಂದ ಕಂಗಾಲಾಗಿದ್ದಾರೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ಪವಿತ್ರಾ ಗೌಡ, ಪ್ರತಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ ಈ ಬಾರಿ ನವರಾತ್ರಿ, ದೀಪಾವಳಿ ಎಲ್ಲವೂ ಜೈಲಿನಲ್ಲೇ ಆಚರಿಸುವಂತಾಗಿತ್ತು. ಇಷ್ಟೇ ಅಲ್ಲ ಮಗಳ ಜೊತೆ ಸಮಯ ಕಳೆಯಲು, ಹಬ್ಬ ಆಚರಿಸಲು ಸಾಧ್ಯವಾಗದೇ ಪವಿತ್ರಾ ಗೌಡ ಕೊರಗಿದ್ದರು ಎಂದು ಜೈಲು ಮೂಲಗಳು ಮಾಹಿತಿ ನೀಡಿತ್ತು.