ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ 40% ಕ್ಕಿಂತ ಹೆಚ್ಚು ಕಮಿಷನ್ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ (ಆ.20): ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪ ಎಂಬುದನ್ನು ಗುತ್ತಿಗೆದಾರರ ಸಂಘವೇ ಬಹಿರಂಗಗೊಳಿಸಿದೆ. ಬಿಜೆಪಿ ಸರ್ಕಾರದ 40% ಕಮಿಷನ್ ಗಿಂತ ಕಾಂಗ್ರೆಸ್ ಸರ್ಕಾರ ಕಮಿಷನ್ ದುಬಾರಿ ಎಂದು ಸ್ಪೋಟಕ ಮಾಹಿತಿಯನ್ನು ಹೊರಹಾಕಿದೆ.
ಕಾಮಗಾರಿಗಳ ಶಂಖು ಸ್ಥಾಪನೆ, ಗುದ್ದಲಿ ಪೂಜೆಯಿಂದ ಹಿಡಿದು ಕಾಮಗಾರಿ ಮುಗಿಸಿ ಬಿಲ್ ಪಾವತಿ ಮಾಡುವವರಿಗೂ ಕಳೆದ ಸರ್ಕಾರದಲ್ಲಿ ಫೋರ್ಟಿ ಪರ್ಸೆಂಟ್ ಇದ್ದರೆ ಇದೀಗ ಅದಕ್ಕಿಂತ ಜಾಸ್ತಿಯಾಗುತ್ತಿದೆ ಎಂದು ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್
ಶಿವಮೊಗ್ಗ ನಗರದಲ್ಲಿ ನೀರಾವರಿ ನಿಗಮ ನಿಯಮಿತ, ತುಂಗಾ ಮೇಲ್ದಂಡೆ ಮತ್ತು ಭದ್ರಾ ಗುತ್ತಿಗೆದಾರರ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು ರಾಜ್ಯ ಗುತ್ತಿಗೆದರ ಸಂಘದ ಅಧ್ಯಕ್ಷ ಮಂಜುನಾಥ್ ಸ್ವೀಕರಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,
ರಾಜ್ಯದಲ್ಲಿ 9 ಇಲಾಖೆಗಳಿಂದ ಗುತ್ತಿಗೆದಾರರಿಗೆ 32 ಸಾವಿರ ಕೋಟಿಗೂ ಹೆಚ್ಚು ಹಣ ಕಳೆದ ಎರಡು-ಮೂರು ವರ್ಷಗಳಿಂದ ಬಾಕಿಯಿದೆ. ಕಂಟ್ರಾಕ್ಟರ್ ಗಳು ತುಂಬಾ ಸಂಕಷ್ಟದಲ್ಲಿದ್ದಾರೆ. ಯಾರಿಗೂ ಪೇಮೆಂಟ್ ಆಗುತ್ತಿಲ್ಲ. 20 ಪರ್ಸೆಂಟ್ ಕಮೀಷನ್ ನೀಡಿದ ಕೆಲವರಿಗೆ ಬಿಲ್ಗಳು ಆಗುತ್ತಾ ಇದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಮುಖ್ಯ ಮಂತ್ರಿಗಳಿಗೆ ಈಗಾಗಲೇ ಹಲವು ಭಾರಿ ಮನವಿ ಮಾಡಿದ್ದೇವೆ. ಗುತ್ತಿಗೆದಾರ ರಿಂದಲೇ ಈ ಸರ್ಕಾರ ಬಂದಿದೆ ಎಂದು ಮನಸ್ಸಲ್ಲಿಟ್ಟುಕೊಂಡು ಕೂಡಲೇ ಅವರು ಎಲ್ಲಾ ಬಿಲ್ಗಳನ್ನು ಕ್ಲಿಯರ್ ಮಾಡ ಬೇಕಿದೆ. ಯಾಕೆಂದರೆ ಹಿಂದಿನ ಅಧ್ಯಕ್ಷ ರಾದ ಕೆಂಚಯ್ಯನವರು ಮಾಡಿದ ಆರೋಪದಿಂದಲೇ ಈಗಿನ ಸರ್ಕಾರಕ್ಕೆ ಅಧಿಕಾರ ಸಿಕ್ಕಿತ್ತು. ನಾವು ಯಾವ ಕಂಟ್ರಾಕ್ಟರ್ ಗಳು ಕಳಪೆ ಕಾಮಗಾರಿ ಮಾಡುವುದಿಲ್ಲ. ಟೈಮ್ ಬಾಂಡ್ ಆಗಿ ಕೆಲವು ಯೋಜನೆಗಳಿರುತ್ತವೆ. ಕೆಲವೊಂದು ಸಂದರ್ಭದಲ್ಲಿ ಅನುದಾನ ಬಿಡುಗಡೆ ತಡವಾದರೂ ನಾವು ಕೆಲಸ ಮಾಡುತ್ತೇವೆ. ಕೆಲವೊಂದು ಬಾರಿ ತುರ್ತು ಸಂದರ್ಭ ದಲ್ಲಿ ಎಲ್ಲಾ ಅಧಿಕಾರಿಗಳ ಬಾಯಿ ಮಾತಿನಲ್ಲೇ ಕೆಲಸ ಮಾಡಿಕೊಡುವ ಪದ್ಧತಿಯಿದೆ. ಆದರೆ ಕೆಲಸ ಮಾಡಿದ ಮೇಲೆ ಕೆಲಸ ಮಾಡಿಸಿದ ಅಧಿಕಾರಿ ಜವಾಬ್ದಾರಿ ಯಿಂದ ನುಣುಚಿಕೊಳ್ಳುತ್ತಾರೆ. ಆಗ ಗುತ್ತಿಗೆದಾರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ರಾಜ್ಯದಲ್ಲಿ ಅನೇಕ ದುರಂತಗಳಿಗೆ ಇದು ಕೂಡ ಕಾರಣ ವಾಗಿದೆ. ಇದರಲ್ಲಿ 100 ಕ್ಕೆ 100 ಕಾರ್ಯಪಾಲಕ ಅಭಿಯಂತರರದ್ದೇ ತಪ್ಪಾಗಿರುತ್ತದೆ ಎಂದರು.
ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ಪ್ರಮಾಣ ಜಾಸ್ತಿಯಾಗಿದೆ. ಕೆಂಪಣ್ಣನವರು ಆರೋಪ ಮಾಡಿದಾಗ ಕೆಲವರು ವಿರೋಧ ಮಾಡಿದ್ದೆವು. ಆ ಆರೋಪವನ್ನು ಉಪಯೋಗಿಸಿ ಈ ಸರ್ಕಾರ ಅಧಿಕಾರಕ್ಕೆ ಬಂತು. ಆದರೂ ಮತ್ತೆ ಅದಕ್ಕಿಂತ ಹೀನಾಯ ಪರಿಸ್ಥಿತಿ ಈಗ ಬಂದಿರುವುದು ನಮ್ಮ ದುರ್ಧೈವ. 40% ಆರೋಪ ಸುಳ್ಳಲ್ಲ. ಪೂಜೆಯಿಂದ ಹಿಡಿದು ಬಿಲ್ಲನ್ನು ಮಾಡುವವರೆಗೆ ಎಲ್ಲವನ್ನು ಲೆಕ್ಕ ಹಾಕಿದರೆ ಹಿಂದೆ ಅಷ್ಟಾಗುತ್ತಿತ್ತು. ಈಗ ಅದಕ್ಕಿಂತ ಹೆಚ್ಚು ನೀಡಬೇಕಾಗಿದೆ. ಕೆಲವು ಸ್ಥಳೀಯ ಗುತ್ತಿಗೆದಾರರು ಮತ್ತು ಸ್ಥಳೀಯ ಜನಪ್ರತಿ ನಿಧಿಗಳ ಮೇಲೆ ಅವಲಂಭಿತವಾಗಿರುತ್ತದೆ. ಮಾತುಕತೆ ಆದರೆ ಮಾತ್ರ ಪೂಜೆಗೆ ಬರುತ್ತೇನೆ ಎನ್ನುವವರು ಇದ್ದಾರೆ. ಈಗ ಕೆಲಸ ಮಾಡುವುದು ಸುಲಭವಲ್ಲ. ನೂರಾರು ಮೂಕರ್ಜಿಗಳು ಬರುತ್ತವೆ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ನಗರಾಭಿವೃದ್ಧಿ ಸಚಿವರು ಕೆಲವೇ ಕೆಲವು ಕಂಟ್ರಾಕ್ಟರ್ಗಳಿಗೆ ಬೆಂಗಳೂರಿನಲ್ಲೇ ಗುತ್ತಿಗೆ ನೀಡುತ್ತಿರುವುದು ನಿಜ ಮತ್ತು ಅವರು ನಿಗಧಿತ ದರಕ್ಕಿಂತ ಕಡಿಮೆ ತೋರಿಸುತ್ತಿರುವುದು ನಿಜ. ಇದು ಭೈರತಿ ಸುರೇಶ್ ರವರ ಆಯ್ದ ಗುತ್ತಿಗೆದಾರರಿಗೆ ಕಂಟ್ರಾಕ್ಟರ್ ಗಳು ಹೋಗುತ್ತಿರುವುದು ನಿಜ ಎಂದು ಕಮಿಷನ್ ದಂದೆಯ ಅನಾವರಣಗೊಳಿಸಿದರು
ಒಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಡು ಭ್ರಷ್ಟ ಸರ್ಕಾರ ಎಂಬ ಗುತ್ತಿಗೆದಾರರ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ವಿಪಕ್ಷಗಳಿಗೆ ಆಹಾರವಾಗುವುದಂತೂ ಸತ್ಯ
ಶಿವಮೊಗ್ಗದಿಂದ ರಾಜೇಶ್ ಕಾಮತ್ ಏಷ್ಯಾನೆಟ್ ಸುವರ್ಣ ನ್ಯೂಸ್
