ವಿಜಯಪುರದಲ್ಲಿ ಒಳಮೀಸಲಾತಿ ವಿರುದ್ಧ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಂದ ಬೃಹತ್ ಪ್ರತಿಭಟನೆ. ಹಂದಿ ಮರಿ, ತಲೆಯ ಮೇಲೆ ಚಪ್ಪಲಿ ಹೊತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು.
ವಿಜಯಪುರ (ಸೆ.7): ಒಳಮೀಸಲಾತಿ ಹೆಸರಿನಲ್ಲಿ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳ ಜೊತೆಗೆ ಇನ್ನೂ 63 ಜಾತಿಗಳನ್ನು ಸೇರಿಸಿ, ಶೇ.5 ಮೀಸಲಾತಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಲಂಬಾಣಿ, ಬೋವಿ, ಕೊರಚ, ಕೊರಮ, ಸಮುದಾಯಗಳು ಹಂದಿ ಮರಿ, ತಲೆಯ ಮೇಲೆ ಚಪ್ಪಲಿ ಹೊತ್ತು ಪ್ರತಿಭಟಿಸಿದವು.
ಬೃಹತ್ ಪ್ರತಿಭಟನೆ:
ಪ್ರತಿಭಟನೆ ವೇಳೆ ಹಂದಿ ಮರಿಗಳನ್ನು ಹಾಗೂ ತಲೆಯ ಮೇಲೆ ಚಪ್ಪಲಿಗಳನ್ನು ಹೊತ್ತು ಸರ್ಕಾರದ ವಿರುದ್ಧ ಕಿಡಿಕಾರಿದರು. ಅಲ್ಲದೇ ಡಾ.ನಾಗಮೋಹನದಾಸ್ ವರದಿ ಮರುಪರಿಶೀಲಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕೃಷಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ ರದ್ದುಗೊಳಿಸಿದ ಕೆಪಿಎಸ್ಸಿ! ಎಸ್ಸಿ ಒಳಮೀಸಲಾತಿಯಿಂದಾಗಿ ಹೊಸ ಅಧಿಸೂಚನೆ!
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ನೂರಾರು ಪ್ರತಿಭಟನಾಕಾರರು ಭಾಗವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರ ಭಾವಚಿತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಹಂದಿಗಳನ್ನು ಹಿಡಿಯುವ ಬಲೆಯಲ್ಲಿ ಡಿಸಿಎಂ ಹಾಗೂ ಸಿಎಂ ಭಾವಚಿತ್ರಗಳನ್ನು ಹಾಕಿ ಪ್ರತಿಭಟಿಸಿದರು.
