ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ಕರಾರಸಾ ನಿಗಮವು ಅಕ್ಟೋಬರ್ 17 ರಿಂದ 20, 2025 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಗಳಿಗೆ 2,500 ಹೆಚ್ಚುವರಿ ಬಸ್ಗಳನ್ನು ಓಡಿಸಲಿದೆ. ಈ ವಿಶೇಷ ಸಾರಿಗೆಗಳಿಗೆ ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವ ಸೌಲಭ್ಯವಿದೆ.
ಬೆಂಗಳೂರು (ಅ.13): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕರಾರಸಾ ನಿಗಮ)ವು ರಾಜ್ಯಾದ್ಯಂತ ಹಾಗೂ ಅಂತರರಾಜ್ಯಕ್ಕೆ ಒಟ್ಟು 2,500 ಹೆಚ್ಚುವರಿ ಬಸ್ಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ನರಕ ಚತುರ್ದಶಿ (ಅ. 20) ಮತ್ತು ಬಲಿಪಾಡ್ಯಮಿ (ಅ. 22) ಹಬ್ಬವಿರುವುದರಿಂದ ಈ ವಿಶೇಷ ಸಾರಿಗೆಗಳನ್ನು ಅಕ್ಟೋಬರ್ 17 ರಿಂದ 20, 2025 ರವರೆಗೆ ಬೆಂಗಳೂರಿನಿಂದ ಕಾರ್ಯಾಚರಣೆ ಮಾಡಲಾಗುತ್ತದೆ.
ಬೆಂಗಳೂರಿನಿಂದ ಹೆಚ್ಚುವರಿ ಸಾರಿಗೆ ವಿವರ:
ಕರಾರಸಾ ನಿಗಮವು ಬೆಂಗಳೂರಿನಲ್ಲಿ ಮೂರು ಪ್ರಮುಖ ಬಸ್ ನಿಲ್ದಾಣಗಳಿಂದ ವಿವಿಧ ಸ್ಥಳಗಳಿಗೆ ಬಸ್ಗಳನ್ನು ನಿರ್ವಹಿಸಲಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ.
ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಮತ್ತು ಮಡಿಕೇರಿ ಮಾರ್ಗಗಳ ಕಡೆಗೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ: ತಮಿಳುನಾಡು (ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ) ಮತ್ತು ಕೇರಳ (ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್) ಕಡೆಗೆ ಪ್ರತಿಷ್ಠಿತ ಸಾರಿಗೆಗಳ ಕಾರ್ಯಾಚರಣೆ.
ದೀಪಾವಳಿ ನಂತರದ ಆಗಮನ:
ಹಬ್ಬ ಮುಗಿದ ನಂತರ, ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹಿಂದಿರುಗುವ ಪ್ರಯಾಣಿಕರಿಗಾಗಿ ಅಕ್ಟೋಬರ್ 22 ಮತ್ತು 26, 2025 ರಂದು ಸಹ ವಿಶೇಷ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಅಲ್ಲದೆ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕೆ ಅನುಗುಣವಾಗಿ ಸ್ಥಳೀಯ ವಿಶೇಷ ಸಾರಿಗೆಗಳನ್ನು ಓಡಿಸಲಾಗುತ್ತದೆ.
ಮುಂಗಡ ಟಿಕೆಟ್ ಬುಕಿಂಗ್ ಮತ್ತು ರಿಯಾಯಿತಿಗಳು:
ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡ ಆಸನ ಕಾಯ್ದಿರಿಸುವಿಕೆ ಸೌಲಭ್ಯ ಕಲ್ಪಿಸಲಾಗಿದೆ.
ಆನ್ಲೈನ್ ಬುಕಿಂಗ್: ಟಿಕೆಟ್ಗಳನ್ನು www.ksrtc.karnataka.gov.in ವೆಬ್ಸೈಟ್ ಮೂಲಕ ಬುಕ್ ಮಾಡಬಹುದು.
ರಿಯಾಯಿತಿಗಳು:
ಸಮೂಹ ರಿಯಾಯಿತಿ: ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5 ರಷ್ಟು ರಿಯಾಯಿತಿ ಲಭ್ಯ.
ಹೋಗುವ ಮತ್ತು ಬರುವ ಟಿಕೆಟ್ಗೆ ರಿಯಾಯಿತಿ: ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.
ಇತರೆ ಬುಕಿಂಗ್ ಕೌಂಟರ್ಗಳು: ಕರ್ನಾಟಕದ ಎಲ್ಲ ಬುಕಿಂಗ್ ಕೌಂಟರ್ಗಳ ಜೊತೆಗೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿರುವ ಪ್ರಮುಖ ನಗರಗಳಲ್ಲಿನ ನಿಗಮದ ಕೌಂಟರ್ಗಳ ಮೂಲಕವೂ ಮುಂಗಡ ಟಿಕೆಟ್ ಕಾಯ್ದಿರಿಸಬಹುದು.
ಪ್ರಯಾಣಿಕರು ಟಿಕೆಟ್ನಲ್ಲಿ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ಅಪ್ ಪಾಯಿಂಟ್ನ ಹೆಸರನ್ನು ಗಮನಿಸಿ ನಿಲ್ದಾಣಕ್ಕೆ ಆಗಮಿಸುವಂತೆ ಕರಾರಸಾ ನಿಗಮ ಕೋರಿದೆ.
