ಸಿಎಂ ಬದಲಾವಣೆ ಚರ್ಚೆಯು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರ ಎಂದು ಬಿಜೆಪಿ ನಾಯಕ ಪಿ. ರಾಜೀವ್ ಆರೋಪಿಸಿದ್ದಾರೆ. ರೈತರ ಆತ್ಮಹತ್ಯೆ, ನೆರೆ ಪರಿಹಾರ ನೀಡದಿರುವುದು. ಹೆಚ್ಚುತ್ತಿರುವ ಅಪರಾಧ ಸಮಸ್ಯೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ನಾಟಕವಾಡುತ್ತಿದೆ ಎಂದು ಟೀಕಿಸಿದ್ದಾರೆ.
ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಮತ್ತೆ ಕುರ್ಚಿ ಕಿತ್ತಾಟದ ಚರ್ಚೆ ತೀವ್ರಗೊಂಡಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ ಹರಿಬಿಟ್ಟಿರುವುದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾತ್ರ. ಸರ್ಕಾರದ ಸಂಪೂರ್ಣ ವೈಫಲ್ಯವನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಈ ರೀತಿಯ ರಾಜಕೀಯ ನಾಟಕ ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಕೆಲವು ತಿಂಗಳಲ್ಲಿ 2002 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಗುತ್ತಿಗೆದಾರರು ಹಣದ ಕೊರತೆಯಿಂದ ಆತ್ಮ*ಹತ್ಯೆ ಮಾಡಿದ್ದಾರೆ, ಮಹಿಳೆಯರ ಮೇಲಿನ ಅತ್ಯಾ*ಚಾರ ಪ್ರಕರಣಗಳು ಹೆಚ್ಚಾಗಿವೆ, ಮಕ್ಕಳ ಹತ್ಯೆ ಘಟನೆಗಳು ಆತಂಕಕಾರಿ ಮಟ್ಟಕ್ಕೇರಿವೆ. ಆದರೆ, ಈ ಎಲ್ಲಾ ವಿಷಯಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ನೆರೆ ಪರಿಹಾರವಾಗಿ ಒಂದು ರೂಪಾಯಿ ಸಹ ಕೊಟ್ಟಲ್ಲ
ಪಿ. ರಾಜೀವ್ ಅವರು ಸರ್ಕಾರದ ನಿರ್ಲಕ್ಷ್ಯದ ಮತ್ತೊಂದು ಉದಾಹರಣೆಯಾಗಿ ಭೀಮಾ ಪಾತ್ರ ಪ್ರದೇಶದಲ್ಲಿ ಉಂಟಾದ ನೆರೆ ಹಾವಳಿ ಬಗ್ಗೆ ಉಲ್ಲೇಖಿಸಿದರು. ಆ ಪ್ರದೇಶದ ಜನತೆ ಅನಾಹುತದಲ್ಲಿ ತತ್ತರಿಸುತ್ತಿದ್ದಾರೆ, ಆದರೆ ಸರ್ಕಾರ ಇಂದಿನ ತನಕ ಒಂದು ರೂಪಾಯಿ ಸಹ ಪರಿಹಾರ ನೀಡಿಲ್ಲ. ಬದಲಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಸಮಸ್ಯೆಯಾದರೂ ಬಂದರೆ ಪ್ರಧಾನಿ ಕಡೆ ಬೆರಳು ತೋರಿಸುತ್ತಾರೆ. ಇವರು ರಾಜ್ಯದ ಜನರಿಗಾಗಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ
ಅವರು ಸರ್ಕಾರದ ಒಳಜಗಳಗಳ ಕುರಿತೂ ವಾಗ್ದಾಳಿ ನಡೆಸಿ, ಸರ್ಕಾರದ ನಾಯಕರು ಜನರ ಸಮಸ್ಯೆಗಳಿಗೆ ಸ್ಪಂದಿಸದೆ, ಅಧಿಕಾರದ ಕುರ್ಚಿ ಕಿತ್ತಾಟದಲ್ಲಿ ತೊಡಗಿದ್ದಾರೆ. ಸಿಎಂ ಬದಲಾವಣೆ, ಉತ್ತರಾಧಿಕಾರಿ ವಿಚಾರ, ಸಚಿವ ಸ್ಥಾನ ಹಂಚಿಕೆ ಇವುಗಳಲ್ಲೇ ಈ ಸರ್ಕಾರ ಬ್ಯುಸಿಯಾಗಿರುವುದು ಜನರಿಗೆ ಸ್ಪಷ್ಟವಾಗಿದೆ ಎಂದು ಟೀಕಿಸಿದರು. ರಾಜ್ಯದ ಜನರ ಸಮಸ್ಯೆಗಳಿಗೆ ಸರ್ಕಾರ ಕಿವಿಗೊಡದೆ ಕುಳಿತಿರುವುದರಿಂದ ಜನರಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಉಂಟಾಗಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಬಹಿರಂಗ ಪಡಿಸಲು ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು. ಪಿ. ರಾಜೀವ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಸಿಎಂ ಬದಲಾವಣೆ ಕುರಿತ ಊಹಾಪೋಹಗಳ ನಡುವೆ ಮತ್ತಷ್ಟು ರಾಜಕೀಯ ತಾಪಮಾನ ಹೆಚ್ಚಿಸಿದೆ.
