Coldrif cough syrup deaths case: ರಾಜಸ್ಥಾನ, ಮ ಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರೀಫ್ ಕಫ್ ಸಿರಪ್ ಕರ್ನಾಟಕದಲ್ಲಿ ವಿತರಣೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಇತರೆ ಬ್ರಾಂಡ್ ಸಿರಪ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಬೆಂಗಳೂರು (ಅ.4): ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕೋಲ್ಡ್ರೀಫ್ ಕಫ್ ಸಿರಪ್ನಿಂದ ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗಿವೆ. ತಮಿಳುನಾಡು, ಪಾಂಡಿಚೆರಿ ಸೇರಿದಂತೆ ಹಲವು ರಾಜ್ಯಗಳಿಗೆ ಈ ಔಷಧಿಯ ಸರಬರಾಜು ಆಗಿರುವ ಮಾಹಿತಿ ಇದೆ. ಆದರೆ, ಕರ್ನಾಟಕದಲ್ಲಿ ಕೋಲ್ಡ್ರೀಫ್ ಸಿರಪ್ ವಿತರಣೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ರಾಜಸ್ಥಾನ, ಮದ್ಯ ಪ್ರದೇಶದಲ್ಲಿ ಕಫ್ ಸಿರಪ್ ನಿಂದ ಮಕ್ಕಳ ಸಾವು ಪ್ರಕರಣ ಸಂಬಂಧ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಮುಂಜಾಗ್ರತಾ ಕ್ರಮವಾಗಿ, ಕರ್ನಾಟಕದಲ್ಲಿ ಬೇರೆ ಬ್ರಾಂಡ್ಗಳ ಕಫ್ ಸಿರಪ್ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಅದರ ಬಗ್ಗೆ ತಿಳಿಸುತ್ತೇವೆ. ಕರ್ನಾಟಕದಲ್ಲಿ ಯಾವುದೇ ರೀತಿಯ ಪರಿಣಾಮ ಇಲ್ಲ, ಜನರು ಆತಂಕಪಡುವ ಅಗತ್ಯವಿಲ್ಲ ಎಂದರು.
ಈ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಡ್ರಗ್ ಕಂಟ್ರೋಲ್ ಇಲಾಖೆಯೊಂದಿಗೆ ಮಾತನಾಡಿದ್ದೇನೆ ಎಂದ ಸಚಿವರು, ಕರ್ನಾಟಕದಲ್ಲಿ ಎಲ್ಲೂ ಕೂಡ ಕೋಲ್ಡ್ರೀಫ್ ವಿತರಣೆ ಆಗಿಲ್ಲ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಮಾತ್ರ ಈ ಸಿರಪ್ ಸರಬರಾಜಾಗಿದ್ದು, ಲ್ಯಾಬ್ ವರದಿಗಳಲ್ಲಿ ಔಷಧಿಯಿಂದ ತೊಂದರೆಯಾಗಿರುವುದು ದೃಢಪಟ್ಟಿದೆ. ಇದರ ಪರಿಣಾಮವಾಗಿ, ಔಷಧಿಯ ತಯಾರಿಕೆಯನ್ನು ನಿಲ್ಲಿಸಲಾಗಿದೆ. ದೇಶಾದ್ಯಂತ ಕೋಲ್ಡ್ರೀಫ್ ಸಿರಪ್ನ ಮಾರಾಟವನ್ನು ನಿಷೇಧಿಸಲಾಗಿದ್ದು, ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.
ಈ ಹಿಂದೆ ಜಮ್ಮು ಮತ್ತು ಆಫ್ರಿಕಾದಲ್ಲಿ ಸಹ ಭಾರತದಿಂದ ಸರಬರಾಜಾದ ಕಫ್ ಸಿರಪ್ನಿಂದ ಇದೇ ರೀತಿಯ ತೊಂದರೆಗಳು ಕಂಡುಬಂದಿದ್ದವು. ಲಾಭದ ದೃಷ್ಟಿಯಿಂದ ಕೆಲವು ಕಂಪನಿಗಳು ಇಂತಹ ತಪ್ಪುಗಳನ್ನು ಮಾಡಿವೆ ಎಂದು ಸಚಿವ ಗುಂಡೂರಾವ್ ಆರೋಪಿಸಿದರು.
ಕರ್ನಾಟಕದಲ್ಲಿ ಔಷಧಿಗಳ ಪರೀಕ್ಷೆ ಮತ್ತು ತಪಾಸಣೆ ಅತ್ಯಂತ ಕಟ್ಟುನಿಟ್ಟಾಗಿ ನಡೆಯುತ್ತದೆ ಎಂದು ಹೇಳಿದ ಸಚಿವರು, ಕರ್ನಾಟಕದ ಮಾದರಿಯನ್ನೇ ಎಲ್ಲ ರಾಜ್ಯಗಳಿಗೆ ಅಳವಡಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರು. ಕರ್ನಾಟಕದ ಜನರಿಗೆ ಆತಂಕವಿಲ್ಲ, ಆದರೆ ಎಚ್ಚರಿಕೆಯಿಂದ ಔಷಧಿಗಳನ್ನು ಬಳಸಲು ಸೂಚಿಸಲಾಗಿದೆ.
