ದೀಪಾವಳಿಗೆ ಬೆಂಗಳೂರು ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಹಲೆವೆಡೆ ಭಾರಿ ಮಳೆ, ವಾಯುಭಾರ ಕುಸಿತದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಿಸುತ್ತಿದೆ. ಎರಡೂ ದಿನ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರು (ಅ.19) ದೀಪಾವಳಿ ಸಂಭ್ರಮದಲ್ಲಿರುವ ಕರ್ನಾಟಕ ಮಂದಿಗೆ ಮಳೆರಾಯ ಅಡ್ಡಿಯಾಗಿದ್ದಾನೆ. ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ರಾಜ್ಯಕ್ಕೆ ಮಳೆ ಅಲರ್ಟ್ ನೀಡಿದೆ. ಬೆಂಗಳೂರು ಸೇರಿದಂತೆ 23 ಜಿಲ್ಲೆಗಳಿಗೆ ಇಂದು ಹಾಗೂ ನಾಳೆ ಯೆಲ್ಲೋ ಅಲರ್ಟ್ ನೀಡಿದೆ. ಚಾಮರಾಜನಗರ, ಕೊಡಗು, ಮಂಡ್ಯ, ರಾಮನಗರ, ಉತ್ತರಕನ್ನಡ, ಮಂಗಳೂರು, ಉಡುಪಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆಗಳ ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರಿಗೆ ಇಂದು ನಾಳೆ ಯಲ್ಲೋ ಆರ್ಲಟ್ ಘೋಷಣೆ

ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಇನ್ನೆರಡು ದಿನ ಇದೇ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇಂದು ಹಾಗೂ ನಾಳೆ ಬೆಂಗಳೂರಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸಂಜೆ ವೇಳೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಚುರುಕುಗೊಂಡಿದೆ. ಉತ್ತರಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗುತ್ತಿದೆ. ಇಂದು ಸಂಜೆ ಆಗುತ್ತಿದ್ದಂತೆ ಮಳೆ ಪ್ರಾರಂಭಗೊಂಡಿದೆ. ದೀಪಾವಳಿ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರಿಗೂ, ವ್ಯಾಪಾರಸ್ಥರಿಗೂ ಸಮಸ್ಯೆಯಾಗಿದೆ. ಅನಿರೀಕ್ಷಿತವಾಗಿ ಸುರಿದ ಈ ಮಳೆಯಿಂದ ತಾತ್ಕಾಲಿಕವಾಗಿ ವ್ಯಾಪಾರ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಇತ್ತ ರಸ್ತೆಗಳಲ್ಲಿ ನೀರು ತುಂಬಿದ ಕಾರಣ ವಾಹನ ಸವಾರರು ಪರದಾಡಿದರು.

ಹಾವೇರಿ ಜಿಲ್ಲೆಯ ಹಲವೆಡೆ ಮಳೆರಾಯನ ಅರ್ಭಟ

ಹಾವೇರಿಯಲ್ಲಿ ಇಂದು ಭಾರಿ ಮಳೆಯಾಗಿದೆ. ಭಾರಿ ಮಳೆಯಿಂದ ಮೆಕ್ಕೆಜೋಳದ ರಾಶಿ ನೀರುಪಾಲಾಗಿದ್ದು, ರೈತ ಕಂಗಾಲಾಗಿದ್ದಾನೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಂಕಾಪುರದ NH 48 ರ ಬೈಪಾಸ್ ರಸ್ತೆಯಲ್ಲಿ ಒಣಗಲು ಹಾಕಿದ್ದ ಮೆಕ್ಕೆ ಜೋಳ ನೀರು ಪಾಲಾಗಿದೆ. ಕಟಾವು ಮಾಡಿ ಒಣಗಿಸಿ ರಾಶಿ ಮಾಡಲು ಹಾಕಿದ್ದ ಮೆಕ್ಕೆಜೋಳ ನೀರು ಪಾಲಾಗಿದೆ. ಟಾರ್ಪಲಿನ್ ಹಾಕಿ ಮೆಕ್ಕೆಜೋಳದ ರಾಶಿ ಮುಚ್ಚಿಕೊಳ್ಳಲು ರೈತರು ಪರದಾಡಿದ್ದಾರೆ. ಭಾರಿ ಕಸರತ್ತು ಮಾಡಿ ಮಳೆಯ ನೀರಿನಲ್ಲಿಯೇ ಮೆಕ್ಕೆ ಜೋಳ ಬಾಚಿ ಟ್ಯಾಕ್ಟರ್ ರೈತರು ತುಂಬಿದ್ದಾರೆ. ಸಾಲಸೂಲ ಮಾಡಿ ಬೆಳೆದಿದ್ದ ಫಸಲು ಮಳೆರಾಯನ ಪಾಲಾಗಿದೆ. ಎಕರೆ 20 ರಿಂದ 30 ಸಾವಿರ ರುಪಾಯಿ ಖರ್ಚು ‌ಮಾಡಿದ್ದ ರೈತರು ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಿಕ್ಕಮಗಳೂರಿನಲ್ಲೂ ಮಳೆ

ಚಿಕ್ಕಮಗಳೂರಿನಲ್ಲಿ ಅತ್ಯಂತ ಪ್ರಸಿದ್ದ ದೇವಿರಮ್ಮನ ಜಾತ್ರೆ ನಡೆಯುತ್ತಿದೆ. ಆದರೆ ಇದೇ ವೇಳೆ ಭಾರಿ ಮಳೆ ಸುರಿದಿದೆ. ಹೀಗಾಗಿ ಭಾರೀ ಮಳೆ ಮಧ್ಯೆಯೂ 45 ಸಾವಿರಕ್ಕೂ ಹೆಚ್ಚು ಭಕ್ತರು ಬೆಟ್ಟ ಹತ್ತಿದ್ದಾರೆ.