ಮದ್ದೂರು ಕಲ್ಲು ತೂರಾಟ ಪ್ರಕರಣದ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡಲ್ಲ ಎಂದ ಡಿಕೆ ಶಿವಕುಮಾರ್. ಬಿಜೆಪಿ ನಾಯಕರ ಭೇಟಿಗೆ ಪ್ರತಿಕ್ರಿಯಿಸಿ, ಜನರನ್ನು ಒಡೆಯುವುದೇ ಅವರ ಕೆಲಸ ಎಂದು ವಾಗ್ದಾಳಿ ನಡೆಸಿದರು. ಸತೀಶ್ ಜೈಲ್ ಬಂಧನವನ್ನು ಖಂಡಿಸಿದರು.

ಬೆಂಗಳೂರು (ಸೆ.10): ಮದ್ದೂರು ಕಲ್ಲು ತೂರಾಟ ಪ್ರಕರಣದ ಬಗ್ಗೆ ನನಗೆ ಪೂರ್ಣ ಮಾಹಿತಿ ಇಲ್ಲ. ನಾನು ಊರಿನಲ್ಲಿ ಇರಲಿಲ್ಲ, ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆಗಳನ್ನು ಪತ್ರಿಕೆಯಲ್ಲಿ ನಾನೂ ಗಮನಿಸಿದ್ದೇನೆ. ಆದರೆ ಮಾಹಿತಿ ತಿಳಿಯದೆ ನಾನು ಆ ಬಗ್ಗೆ ಮಾತನಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.

Add Asianetnews Kannada as a Preferred SourcegooglePreferred

ಬಿಜೆಪಿ ನಾಯಕರು ಮದ್ದೂರಿಗೆ ಭೇಟಿ ನೀಡುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಬಿಜೆಪಿ ಅವರಿಗೆ ಬೇರೆ ಕೆಲಸವಿಲ್ಲ. ಜನರನ್ನು ಡಿವೈಡ್ ಮಾಡುವುದು, ಬೆಂಕಿ ಹಚ್ಚುವುದೇ ಅವರ ಕೆಲಸ ಎಂದು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಅಭಿವೃದ್ಧಿ ಮಾಡಿಲ್ಲ. ದೆಹಲಿಗೆ ಹೋಗಿ ನರೇಗಾ, ತೆರಿಗೆ ಹಣ, ಕಾವೇರಿ, ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮತಿ ತರಲಿ. ಅದುಬಿಟ್ಟು ಮದ್ದೂರಿನಲ್ಲಾದ ಗಲಾಟೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡು ಹಿಂದೂ-ಮುಸ್ಲಿಂ ಅಂತಾ ಡಿವೈಡ್ ಮಾಡುವುದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದು ಬೆಂಗಳೂರು ಶಾಸಕರ ಸಭೆ: ಡಿಕೆ ಶಿವಕುಮಾರ:

ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಬೆಂಗಳೂರು ನಗರ ಶಾಸಕರ ಸಭೆ ಕರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿನ್ನೆಯೇ ಸಭೆ ನಿಗದಿಯಾಗಿತ್ತು. ನಾನು ಊರಿನಲ್ಲಿ ಇಲ್ಲ ಎಂದಿದ್ದರಿಂದ ಇಂದು ಆಗುತ್ತಿದೆ. ನೀರಾವರಿ ವಿಚಾರಗಳ ಬಗ್ಗೆ ಚರ್ಚಿಸುತ್ತೇವೆ ಎಂದರು. ಇದೇ ವೇಳೆ ಗ್ರೇಟರ್ ಬೆಂಗಳೂರು ಉಸ್ತುವಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಗ್ರೇಟರ್ ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಮಂತ್ರಿಗಳು ಕೇವಲ ಕ್ಷೇತ್ರದ ಕೆಲಸ ಮಾಡದೆ, ಜಿಲ್ಲೆಗಳ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಪಕ್ಷದಿಂದಲೂ ಇನ್ಮುಂದೆ ಜವಾಬ್ದಾರಿ ನೀಡುತ್ತೇವೆ ಎಂದರು.

ಸತೀಶ್ ಸೈಲ್ ಬಂಧಿಸುವವ ಅಗತ್ಯವೇನಿತ್ತು?

ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಇಡಿ ಬಂಧನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಕೆ ಶಿವಕುಮಾರ ಅವರು, ಸತೀಶ್ ಸೈಲ್ ಅವರನ್ನು ಬಂಧಿಸುವ ಅಗತ್ಯ ಏನಿತ್ತು? ಕಾಂಗ್ರೆಸ್ ಶಾಸಕರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮನ್ನು ಹುಡುಕಿ ಹುಡುಕಿ ದಾಳಿ ಮಾಡುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.