ಧರ್ಮಸ್ಥಳದ 'ಆಪರೇಷನ್ ಬುರುಡೆ' ಪ್ರಕರಣದಲ್ಲಿ ಅರಣ್ಯ ಇಲಾಖೆ ಪ್ರವೇಶಿಸಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ವ್ಯಾಪ್ತಿಯಲ್ಲಿ ಶವ ಸಂಸ್ಕಾರ ಅಥವಾ ಉತ್ಖನನಕ್ಕೆ ಅನುಮತಿ ಕಡ್ಡಾಯ ಎಂದು ಹೇಳಿದ್ದಾರೆ. ನಿಯಮ ಉಲ್ಲಂಘನೆಯಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು (ಆ.20): ಧರ್ಮಸ್ಥಳದ 'ಆಪರೇಷನ್ ಬುರುಡೆ' ಪ್ರಕರಣದಲ್ಲಿ ಇದೀಗ ಅರಣ್ಯ ಇಲಾಖೆಯೂ ಪ್ರವೇಶಿಸಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಯಾವುದೇ ಶವ ಸಂಸ್ಕಾರ ಅಥವಾ ಉತ್ಖನನ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಂಡ್ರೆ ತಿಳಿಸಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸಚಿವರು, "ಅರಣ್ಯ ವ್ಯಾಪ್ತಿಯಲ್ಲಿ ಶವ ಸಂಸ್ಕಾರ ಅಥವಾ ಉತ್ಖನನ ಮಾಡಬೇಕಾದರೆ ಉಪ ಸಂರಕ್ಷಣಾಧಿಕಾರಿಯ ಅನುಮತಿ ಕಡ್ಡಾಯ. ಈ ಪ್ರಕರಣದಲ್ಲಿ ಉತ್ಖನನಕ್ಕೆ ಪರವಾನಗಿ ಪಡೆದಿದ್ದಾರೆ ಎಂದು ಮಾಹಿತಿ ಇದೆ, ಆದರೂ ಸಂಪೂರ್ಣ ವರದಿ ನೀಡುವಂತೆ ಉಪ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇನೆ," ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಮೀಸಲು ಅರಣ್ಯ, ವನ್ಯಜೀವಿ ಧಾಮ ಅಥವಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಶವ ಹೂಳಲು ಅವಕಾಶವಿಲ್ಲ. ಒಂದು ವೇಳೆ, ಅನಾಮಿಕ ದೂರುದಾರನ ಸುಳ್ಳು ಮಾಹಿತಿಯಿಂದ ಅರಣ್ಯ ನಾಶವಾಗಿದ್ದರೆ ಅದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ಅದು ಪೊಲೀಸರ ಜವಾಬ್ದಾರಿ, ಅವರು ದೂರುದಾರನ ಮೇಲೆ ಕ್ರಮ ಜರುಗಿಸಬೇಕು," ಎಂದು ಸ್ಪಷ್ಟಪಡಿಸಿದ್ದಾರೆ.
ಕೋರ್ಟ್ ಸೂಚನೆ ನೀಡಿದರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಯಾವುದೇ ಅಭಿವೃದ್ಧಿ ಕಾರ್ಯಕ್ಕೂ ಕೂಡ ಅರಣ್ಯ ಇಲಾಖೆ ಮತ್ತು ಕೇಂದ್ರ ಸರ್ಕಾರದ ಅನುಮತಿ ಬೇಕು ಎಂದು ಖಂಡ್ರೆ ವಿವರಿಸಿದ್ದಾರೆ. ಈ ಪ್ರಕರಣದ ಉತ್ಖನನ ಸಂದರ್ಭದಲ್ಲಿ ಅರಣ್ಯ ಕಾಯ್ದೆಯ ನಿಯಮ ಉಲ್ಲಂಘನೆಯಾಗಿದೆಯೇ ಎಂದು ವರದಿ ತರಿಸಿಕೊಂಡು ಪರಿಶೀಲನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಅರಣ್ಯ ವ್ಯಾಪ್ತಿಯ ಜಮೀನಿನಲ್ಲಿ ಶವಸಂಸ್ಕಾರ ಮಾಡಿದ್ದರೆ ವರದಿ ತೆಗೆದುಕೊಳ್ಳುತ್ತೇನೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ಉತ್ಖನನದ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾಯ್ದೆ ನಿಯಮ ಉಲ್ಲಂಘನೆ ಆದರೆ ಕಾನೂನು ಕ್ರಮ ಆಗುತ್ತೆ. ಹೀಗಾಗಿ ವರದಿ ತರಿಸಿಕೊಳ್ಳುತ್ತೇನೆ. ಅರಣ್ಯದಲ್ಲಿ ಹೆಣ ಹೂಳಲು ಯಾವುದೇ ಅವಕಾಶ ಇಲ್ಲ . ಮೀಸಲು ಅರಣ್ಯ, ವನ್ಯಜೀವಿ ಧಾಮ ಹುಲಿ ಸಂರಕ್ಷಿತ ಪ್ರದೇಶ ಇಲ್ಲೆಲ್ಲೂ ಕೂಡ ಹೆಣ ಹೂಳಲು ಬರೋದಿಲ್ಲ. ಅಭಿವೃದ್ಧಿ ಕಾರ್ಯಕ್ಕೂ ಕೂಡ ಅರಣ್ಯ ಇಲಾಖೆ ಅನುಮತಿ ಬೇಕು. ಕೇಂದ್ರ ಸರ್ಕಾರದಿಂದಲೂ ಕೂಡ ಅನುಮತಿ ಬೇಕಾಗುತ್ತದೆ. ಕೋರ್ಟ್ ಸೂಚನೆ ಕೊಟ್ಟಿದ್ದರೂ ಕೂಡ ನಿಯಮ ಮಾತ್ರ ಫಾಲೋ ಮಾಡಲೇಬೇಕು. ಕೋರ್ಟ್ ಸೂಚನೆ ಕೊಟ್ಟರೂ ಅನುಮತಿ ಪಡೆದೆ ಉತ್ಖನನ ಮಾಡಬಹುದು ಎಂದಿದ್ದಾರೆ.
