ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬುರುಡೆ ಟೀಂ ತಾನು ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನು ಏಮಾರಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು/ನವದೆಹಲಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬುರುಡೆ ಟೀಂ ತಾನು ಸುಪ್ರೀಂಕೋರ್ಟ್‌ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನು ಏಮಾರಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸುಪ್ರೀಂಕೋರ್ಟ್‌ನಲ್ಲಿ ತಮಗಾಗಿದ್ದ ಮುಖಭಂಗ ಮುಚ್ಚಿಟ್ಟು, ಈ ಟೀಂ ದೂರು ಕೊಟ್ಟಿತ್ತು. ಈ ದೂರು ಆಧರಿಸಿ, ಸರ್ಕಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ದೂರುದಾರರ ಹೇಳಿಕೆ ಆಧರಿಸಿ, ಧರ್ಮಸ್ಥಳ ಗ್ರಾಮದಲ್ಲಿ ಉತ್ಖನನ ಕೂಡ ನಡೆಸಿದೆ.

ಬುರುಡೆ ಪ್ರಕರಣದ ಎಫ್‌ಐಆರ್‌ ದಾಖಲಿಸುವುದಕ್ಕೂ ಮೊದಲೇ ಸುಪ್ರೀಂಕೋರ್ಟ್‌ಗೆ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಅಕ್ರಮವಾಗಿ ಹೂಳಲಾಗಿದೆ ಎಂಬ ವಿಚಾರದ ಕುರಿತು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್‌ ವಕೀಲ ಕೆ.ವಿ. ಧನಂಜಯ್ ಅವರು ಬುರುಡೆ ಟೀಂ ಪರವಾಗಿ ಅರ್ಜಿ ಸಲ್ಲಿಸಿ, ವಾದ ಮಂಡಿಸಿದ್ದರು. ಮೇ 5ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಅರ್ಜಿಯನ್ನು ವಜಾಗೊಳಿಸಿತ್ತು. ಇದು ನಿಜವಾದ ಅರ್ಥದಲ್ಲಿ ‘ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಶನ್‌’ ಅಲ್ಲ, ಬದಲಾಗಿ ‘ಪೈಸಾ ಇಂಟರೆಸ್ಟ್‌ ಲಿಟಿಗೇಶನ್‌’ ಎಂದು ಛೀಮಾರಿ ಹಾಕಿತ್ತು ಎಂಬ ಸಂಗತಿ ಬಯಲಾಗಿದೆ.

‘ಈ ರಿಟ್ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನಾಗಿ ಪರಿಗಣಿಸುವುದು ಅದರ ಉದಾತ್ತ ಉದ್ದೇಶವನ್ನು ಕೆಡಿಸುತ್ತದೆ. ಇದು ನಿಜವಾದ ಅರ್ಥದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲ, ಬದಲಾಗಿ ಇದನ್ನು ‘ಪಬ್ಲಿಸಿಟಿ ಇಂಟರೆಸ್ಟ್‌ ಲಿಟಿಗೇಶನ್‌’, ‘ಪೈಸಾ ಇಂಟರೆಸ್ಟ್‌ ಲಿಟಿಗೇಶನ್‌, ‘ಪ್ರೈವೇಟ್‌ ಇಂಟರೆಸ್ಟ್‌ ಲಿಟಿಗೇಶನ್‌’ ಅಥವಾ ‘ಪೊಲಿಟಿಕಲ್‌ ಇಂಟರೆಸ್ಟ್‌ ಲಿಟಿಗೇಶನ್‌’ ಎಂದೂ ಕರೆಯಬಹುದು’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಇದನ್ನು ಆದೇಶದಲ್ಲೂ ದಾಖಲಿಸಿದೆ.

ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅರ್ಜಿಯಲ್ಲಿ ದೂರುದಾರನ ಹೆಸರನ್ನು ‘ಎಕ್ಸ್ಎಕ್ಸ್‌ಎಕ್ಸ್‌’ ಎಂದು ನಮೂದಿಸಲಾಗಿತ್ತು. ನ್ಯಾ। ಬಿ.ವಿ. ನಾಗರತ್ನ ಹಾಗೂ ನ್ಯಾ। ಸತೀಶ್‌ ಚಂದ್ರ ಶರ್ಮಾ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು.

ಗಮನಾರ್ಹ ಎಂದರೆ, ಸುಪ್ರೀಂಕೋರ್ಟ್‌ ತಮ್ಮ ಅರ್ಜಿ ಸ್ವೀಕರಿಸಲು ನಿರಾಕರಿಸುವ ಅಂಶವನ್ನು ಬುರುಡೆ ಟೀಂ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಸರ್ವೋಚ್ಚ ನ್ಯಾಯಾಲಯ ತಪರಾಕಿ ಹಾಕಿ ಅರ್ಜಿ ವಜಾಗೊಳಿಸಿದ ಬಳಿಕವೂ ಚಿನ್ನಯ್ಯ ಮೂಲಕ ದೂರು ಕೊಡಿಸಿ, ಎಸ್‌ಐಟಿ ರಚನೆಗೆ ಕಾರಣವಾಗಿತ್ತು.

- ‘ಎಕ್ಸ್‌ಎಕ್ಸ್‌ಎಕ್ಸ್‌’ ಹೆಸರಲ್ಲಿ ಸುಪ್ರೀಂಗೆ ಪಿಐಎಲ್‌ ಸಲ್ಲಿಸಲಾಗಿತ್ತು. ಧನಂಜಯ ವಾದ ಮಂಡಿಸಿದ್ದರು

- ಮೇ 5ರಂದು ಈ ಅರ್ಜಿಯನ್ನು ಹಿಗ್ಗಾಮುಗ್ಗಾ ಛೀಮಾರಿ ಹಾಕಿ ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು

- ಇದು ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಶನ್‌ ಅಲ್ಲ ಪಬ್ಲಿಸಿಟಿ, ಪೈಸಾ, ಪೊಲಿಟಿಕಲ್‌ ಇಂಟರೆಸ್ಟ್‌ ಲಿಟಿಗೇಶನ್‌

- ಈ ಅರ್ಜಿಯನ್ನು ಪರಿಗಣಿಸಿದರೆ ಪಿಐಎಲ್‌ನ ಉದಾತ್ತ ಉದ್ದೇಶವನ್ನೇ ಕೆಡಿಸಿದಂತೆ ಎಂದಿದ್ದ ಕೋರ್

ಸಿದ್ದು ನಾಡಿನ ಕ್ಷಮೆ ಕೇಳಲಿ

ಬುರುಡೆ ಗ್ಯಾಂಗ್‌ನ ಅರ್ಜಿ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ, ಅದರ ಹಿಂದೆ ವಸೂಲಾತಿ ವಿಚಾರ ಇದೆ ಎಂದು ಸುಪ್ರೀಂಕೋರ್ಟ್‌ಗೆ ಅನಿಸಿತ್ತು. ಆದರೆ ಅದು ರಾಜ್ಯದ ಮುಖ್ಯಮಂತ್ರಿಗೆ ಯಾಕೆ ಅನಿಸಿಲ್ಲ? ಧರ್ಮಸ್ಥಳ ಮಂಜುನಾಥೇಶ್ವರನ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಮುಖ್ಯಮಂತ್ರಿಗಳು ಈ ನಾಡಿನ ಕ್ಷಮೆ ಕೇಳಬೇಕು.

- ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ