ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಬಿಜೆಪಿ ಮನಸ್ಥಿತಿ ಬಯಲು. ಸರ್ಕಾರದ ಕಾರ್ಯಕ್ರಮವೇ ಹೊರತು ಮಹಾರಾಜರದ್ದಲ್ಲ ಎಂದು ಬಿ.ಕೆ. ಹರಿಪ್ರಸಾದ್ ತಿರುಗೇಟು.
ಬೆಂಗಳೂರು (ಆ.27): ಸಾಹಿತಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧಿಸುವ ಮೂಲಕ ಬಿಜೆಪಿಯವರ ಮನಸ್ಥಿತಿ ಬಹಿರಂಗವಾಗಿದೆ. ಮೈಸೂರು ದಸರಾ ಆಚರಣೆ ಸರ್ಕಾರದ ಕಾರ್ಯಕ್ರಮ, ಅದು ಮೈಸೂರು ಮಹಾರಾಜರ ವಂಶದವರ ಕಾರ್ಯಕ್ರಮವಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.
ಮೈಸೂರು ಮಹಾರಾಜರು ಪ್ರಗತಿಪರರು. 1918ರಲ್ಲಿ ಎಲ್ಲರಿಗೂ ಸಮಾನತೆ ಸಿಗಬೇಕು ಎಂದವರು. ಇದು ಮಹಾರಾಜರ ವಂಶದ ಕಾರ್ಯಕ್ರಮ ಅಲ್ಲ, ಸರ್ಕಾರದ ಕಾರ್ಯಕ್ರಮ. ಮಹಾರಾಜರ ಮನೆಯಲ್ಲಿ ನಡೆಯುವ ಪೂಜೆ, ಕೈಂಕರ್ಯದಲ್ಲಿ ಭಾಗಿಯಾಗಿದ್ದರೆ ಏನಾದರೂ ಹೇಳಬಹುದು. ಆದರೆ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಯಾರೂ ವಿರೋಧಿಸಲಾಗದು ಎಂದು ಹೇಳಿದರು.
ಬಿಜೆಪಿಯ ವಾಟ್ಸಾಪ್ ಯುನಿವರ್ಸಿಟಿ, ನಾಗ್ಪುರ ಯುನಿವರ್ಸಿಟಿಯಲ್ಲಿ ಬುಕರ್ ಪ್ರಶಸ್ತಿ ಬಂದವರು ಯಾರೂ ಇಲ್ಲ. ಅವರು ಸಾಮಾಜಿಕ ಹೋರಾಟಗಾರ್ತಿ. ಅಂತಹವರು ಉದ್ಘಾಟನೆ ಮಾಡುವುದು ಸ್ವಾಗತಾರ್ಹ. ಇದನ್ನೂ ವಿರೋಧಿಸುವ ಬಿಜೆಪಿಯವರ ಮನಸ್ಥಿತಿ ಬಹಿರಂಗವಾಗಿದೆ. ಮಹಿಳೆಯರನ್ನು ಬಿಜೆಪಿಯವರು ಒಪ್ಪುವುದೇ ಇಲ್ಲ. ಅವರು ಎಂದೂ ಪ್ರಗತಿಪರ ಚಿಂತಕರು, ಹೋರಾಟಗಾರ್ತಿಯರನ್ನು ಒಪ್ಪುವುದಿಲ್ಲ ಎಂದರು.
