ಮೈಕ್ರೋ ಫೈನಾನ್ಸ್‌ ಕಂಪನಿಗಳಿಂದ ಪಡೆದ ಸಾಲ ತೀರಿಸಲಾಗದೆ ಆತ್ಮ*ತ್ಯೆಗೆ ಒಳಗಾದವರ ಕುಟುಂಬಗಳಿಗೆ ಇನ್ನು ಮುಂದೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ವಿಧಾನ ಪರಿಷತ್ತು : ಮೈಕ್ರೋ ಫೈನಾನ್ಸ್‌ ಕಂಪನಿಗಳಿಂದ ಪಡೆದ ಸಾಲ ತೀರಿಸಲಾಗದೆ ಆತ್ಮ*ತ್ಯೆಗೆ ಒಳಗಾದವರ ಕುಟುಂಬಗಳಿಗೆ ಇನ್ನು ಮುಂದೆ ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

Add Asianetnews Kannada as a Preferred SourcegooglePreferred

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಸಿ.ಎನ್‌.ಮಂಜೇಗೌಡ ಅವರ ಪ್ರಶ್ನೆಗೆ ಗುರುವಾರ ಉತ್ತರ ನೀಡಿದ ಅವರು, ಮೈಕ್ರೋ ಫೈನಾನ್ಸ್‌ ಕಂಪನಿಗಳ ಕಿರುಕುಳದಿಂದ ಆತ್ಮ*ತ್ಯೆ ಮಾಡಿಕೊಂಡವರ ಕುಟುಂಬಗಳಿಗೆ ಪರಿಹಾರ ನೀಡುವ ಯಾವುದೇ ಯೋಜನೆ ಈವರೆಗೆ ಜಾರಿಯಲ್ಲಿಲ್ಲ. ಆದರೆ, ಸದಸ್ಯರ ಸಲಹೆಯಂತೆ ಇನ್ನು ಮುಂದೆ ಸಾಲ ತೀರಿಸಲಾಗದೆ ಆತ್ಮ*ತ್ಯೆಗೆ ಒಳಗಾದ ರೈತರ ಕುಟುಂಬಗಳಿಗೆ ನೀಡುತ್ತಿರುವಂತೆ ಸಣ್ಣ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ತೀರಿಸಲಾಗದೆ ಯಾರಾದರೂ ಆತ್ಮ*ತ್ಯೆಗೆ ಒಳಗಾದಲ್ಲಿ ಅವರ ಕುಟುಂಬಕ್ಕೆ ₹5 ಲಕ್ಷ ನೀಡಲಾಗುವುದು. ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಮತ್ತು ಹಣಕಾಸು ಇಲಾಖೆ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಂಜೇಗೌಡ ಅವರು ಫೈನಾನ್ಸ್‌ ಕಂಪನಿಗಳ ಕಿರುಕುಳ ತಡೆಯಲು ಸರ್ಕಾರ ಕಾಯ್ದೆ ತಂದರೂ ಪ್ರಯೋಜನ ಆಗಿಲ್ಲ. ಆತ್ಮ*ತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಯ್ದೆಯ ಉದ್ದೇಶ ವಿಫಲವಾಗುತ್ತಿದೆ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕೇಳಿದರು.

ಇದಕ್ಕೆ ಮುಖ್ಯಮಂತ್ರಿ ಅವರು, 2025ರ ಫೆಬ್ರವರಿಯಲ್ಲಿ ನಾವು ಕರ್ನಾಟಕ ಕಿರು ಸಾಲ ಮತ್ತು ಸಣ್ಣ (ಬಲವಂತದ ಕ್ರಮಗಳ ಪ್ರತಿಬಂಧಕ) ಕಾಯ್ದೆ 2025ನ್ನು ಜಾರಿಗೆ ತಂದಿದ್ದೇವೆ. ಈ ವರ್ಷ ಜನವರಿಯಲ್ಲಿ 21 ಪ್ರಕರಣ, 4 ಆತ್ಮ*ತ್ಯೆ ದಾಖಲಾಗಿತ್ತು. ಕಾಯ್ದೆ ಜಾರಿಯಾದ ಬಳಿಕ ಫೆಬ್ರವರಿಯಲ್ಲಿ 44 ಪ್ರಕರಣ, 10 ಆತ್ಮ*ತ್ಯೆ, ಮಾರ್ಚ್‌ನಲ್ಲಿ 22 ಪ್ರಕರಣ, 2 ಆತ್ಮ*ತ್ಯೆ, ಏಪ್ರಿಲ್‌ನಲ್ಲಿ 10 ಪ್ರಕರಣ, ಜೂನ್‌ನಲ್ಲಿ 1 ಪ್ರಕರಣ, 1ಆತ್ಮ*ತ್ಯೆ, ಜುಲೈನಲ್ಲಿ 5 ಪ್ರಕರಣ ಮತ್ತು 1 ಆತ್ಮ*ತ್ಯೆ ದಾಖಲಾತಿದೆ. ಇದನ್ನು ನೋಡಿದಾಗ ಪ್ರಕರಣಗಳು ಕಡಿಮೆ ಆಗಿದೆ ಎಂದು ಹೇಳಿದರು.

ಕಾಯ್ದೆ ಅನುಷ್ಠಾನದಲ್ಲಿ ಸಣ್ಣಪುಟ್ಟ ದೋಷಗಳಿರಬಹುದು. ಆದರೆ, ಕಾನೂನೇ ಸರಿ ಇಲ್ಲ, ವಿಫಲವಾಗಿದೆ ಎನ್ನುವುದು ಒಪ್ಪುವುದಿಲ್ಲ. ಸಾಲಗಾರರ ಮೇಲೆ ಫೈನಾನ್ಸ್‌ ಕಂಪನಿಗಳ ಕಿರುಕುಳ ತಡೆಗೆ ಕಾಯ್ದೆಯಡಿ ಹಲವು ಕ್ರಮ ಕೈಗೊಂಡಿದ್ದೇವೆ. ಪೊಲೀಸ್‌ ಬೀಟ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮೈಕ್ರೋ ಫೈನಾನ್ಸ್‌ಗಳ ಮೇಲೆ ನಿಗಾ ಇಡಲಾಗಿದೆ. ಈ ಕಂಪನಿಗಳಿಂದ ಆಗುವ ತೊಂದರೆಗಳ ಬಗ್ಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ. ಸಾಲ ಪಡೆದವರಿಗೆ ಕಿರುಕುಳ ನೀಡದಂತೆ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳುವಳಿಕೆ ನೀಡುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.