ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸದ್ಯ ತಮ್ಮ ಸಿನಿಮಾದ ಸಕ್ಸಸ್ ಸಂಭ್ರಮವನ್ನು ದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸುತ್ತಿದ್ದಾರೆ. ಬಿಹಾರದ ಮುಂಡೇಶ್ವರಿ ದೇವಿ ಭೇಟಿಯ ಬಳಿಕ, ಸದ್ಯ ಅವರು ಕಾಶಿ-ವಾರಣಾಸಿಯಲ್ಲಿ ಗಂಗಾರತಿಯಲ್ಲಿ ಪಾಲ್ಗೊಂಡು ನಮಿಸಿದ್ದಾರೆ
'ಕಾಂತಾರ 1' ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕೃತಜ್ಞತೆ ಸಲ್ಲಿಕೆ
'ಕಾಂತಾರ 1' ಚಿತ್ರದ ಅಭೂತಪೂರ್ವ ಯಶಸ್ಸಿಗೆ ಕೃತಜ್ಞತೆ ಸಲ್ಲಿಸುತ್ತಿರುವ ನಟ ರಿಷಬ್ ಶೆಟ್ಟಿಯವರು (Rishab Shetty) ಕರ್ನಾಟಕ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಭಾರತದ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಕಾಂತಾರ (Kantara Chapter 1) ಯಶಸ್ಸನಲ್ಲಿ ದೇವರು-ದೈವಗಳ ಬಲವಾದ ಆಶೀರ್ವಾದವಿದೆ ಎಮದು ನಂಬಿರುವ ರಿಷಬ್ ಶೆಟ್ಟಿಯವರು ಇಂದು ಬಿಹಾರದ ಮುಂಡೇಶ್ವರಿ ದೇವಸ್ಥಾನಕ್ಕೆ ಕೂಡ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ.
ಬಿಹಾರದಲ್ಲಿರುವ ಮುಂಡೇಶ್ವರ ದೇವಸ್ಥಾನವು (ಮುಂಡೇಶ್ವರಿ ದೇವಿ ದೇವಸ್ಥಾನ) ಬಿಹಾರದ ಕೈಮೂರ್ ಜಿಲ್ಲೆಯ ಮುಂಡೇಶ್ವರಿ ಬೆಟ್ಟಗಳ ಮೇಲಿದೆ. ಇದು ದುರ್ಗಾ ದೇವತೆ ಮತ್ತು ಶಿವನಿಗೆ ಸಮರ್ಪಿತವಾಗಿದೆ ಮತ್ತು ವಿಶ್ವದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ.
ಕನ್ನಡದ ಹೆಮ್ಮೆಯ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಇಂದು, ಅಂದರೆ 18 ಅಕ್ಟೋಬರ್ 2025ರಂದು ಬಿಹಾರದ ಮುಂಡೇಶ್ವರದ ಮುಂಡೇಶ್ವರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ಪೂಜೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾದ ಅಭೂತಪೂರ್ವ ವಿಜಯಕ್ಕೆ, ಅಮೋಘ ಎನ್ನಿಸುವ ಗಳಿಕೆಗೆ ರಿಷಬ್ ಶೆಟ್ಟಿಯವರು ತಾವು ನಂಬಿದ ದೈವ-ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿಯವರು ಮೈಸೂರಿನ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಹೋಗಿ ನಮಿಸಿ, ತಮಗೆ ಹಾಗೂ ಕಾಂತಾರ ಸಿನಿಮಾ ತಂಡಕ್ಕೆ ಸಿಕ್ಕ ಯಶಸ್ಸಿಗೆ ದೇವಿ ಮುಂದೆ ತಲೆಬಾಗಿ ನಮಸ್ಕರಿಸಿ ಬಂದಿದ್ದಾರೆ. ಇದೀಗ, ಮುಂಡೇಶ್ವರಿ ದೇವಿಗೆ ತಲೆಬಾಗಿ ಬಂದಿದ್ದಾರೆ.
ಕಾಂತಾರ ನಾಗಾಲೋಟ
ಕಾಂತಾರ ಸಿನಿಮಾ ಇಂದು ಜಗತ್ತಿನೆಲ್ಲೆಡೆ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಕಾಂತಾರ ಸಿನಿಮಾ ಜಾಗತಿಕ ಕಲೆಕ್ಷನ್ ರೂ. 717.50 ಕೋಟಿ ಗಳಿಕೆ ಮಾಡಿ ನಾಗಾಲೋಟದಿಂದ ಮುನ್ನುಗ್ಗುತ್ತಿದೆ. ಈ ಸಿನಿಮಾದ ಗಳಿಕೆ ಇದೀಗ ಯಾವಮಟ್ಟದಲ್ಲಿ ಇದೆ ಎಂದರೆ ಬಿಡುಗಡೆಯಾಗಿ ಕೇವಲ 15 ದಿನಕ್ಕೆ ಬರೋಬ್ಬರಿ 717.50 ಕೋಟಿ ಗಳಿಸಿ ಈ ವರ್ಷದ ಎರಡನೇ ಅತೀ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಹೀಗೇ ಈ ಚಿತ್ರದ ಗಳಿಕೆ ಮುಂದುವರಿದರೆ, ಇದು 'ಕೆಜಿಎಫ್ 2' ಗಳಿಕೆಯನ್ನೂ ಮೀರಿ 'ನಂಬರ್ ಒನ್' ಸ್ಥಾನದಲ್ಲಿ ಕುಳಿತುಕೊಳ್ಳುವುದು ಪಕ್ಕಾ ಎನ್ನಬಹುದು.
ವಾರಣಾಸಿಯಲ್ಲಿ ಗಂಗಾರತಿಯಲ್ಲಿ ಪಾಲ್ಗೊಂಡು ನಮಿಸಿದ್ದಾರೆ
ಅಂದಹಾಗೆ, ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸದ್ಯ ತಮ್ಮ ಸಿನಿಮಾದ ಸಕ್ಸಸ್ ಸಂಭ್ರಮವನ್ನು ದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸುತ್ತಿದ್ದಾರೆ. ಬಿಹಾರದ ಮುಂಡೇಶ್ವರಿ ದೇವಿ ಭೇಟಿಯ ಬಳಿಕ, ಸದ್ಯ ಅವರು ಕಾಶಿ-ವಾರಣಾಸಿಯಲ್ಲಿ ಗಂಗಾರತಿಯಲ್ಲಿ ಪಾಲ್ಗೊಂಡು ನಮಿಸಿದ್ದಾರೆ, ಆಶೀರ್ವಾದ ಪಡೆದಿದ್ದಾರೆ. ಮುಂದೆ ಅವರು ಯಾವ ಟೆಂಟಪ್ಗೆ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಕನ್ನಡ ಸಿನಿಮಾ ಕಾಂತಾರ ಚಾಪ್ಟರ್ 1 ಇದೀಗ ಜಾಗತಿಕ ಮಟ್ಟದಲ್ಲಿ ಕನ್ನಡ-ಕರ್ನಾಟಕದ ಕೀರ್ತಿಪತಾಕೆಯನ್ನು ಹಾರಿಸಿ ಮೆರೆಯುತ್ತಿದೆ.
ಕಾಂತಾರ ಚಾಪ್ಟರ್ 1 ಸಿನಿಮಾದ ಬಳಿಕ ತಾವು ಈ ಮೊದಲೇ ಒಪ್ಪಿಕೊಂಡಿದ್ದ 'ಹನುಮಾನ್' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಅದಕ್ಕೆ ತಾವೀಗ ಸೂಕ್ತ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವ ಅವರು, ಸಿಕ್ಕಿರುವ ಗ್ಯಾಪ್ನಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ಭಕ್ತಿ ಹಾಗೂ ಸಂಸ್ಕಾರ ಮೆರೆಯುತ್ತಿದ್ದಾರೆ. ಏನೇ ಆಗಲಿ, ಕನ್ನಡದ ಸಿನಿಮಾವೊಂದು ಇಂದು ಈ ಮಟ್ಟಕ್ಕೆ ವಿಶ್ವಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆ ಮೂಡಿಸಿದೆ.
