Dr Vishnuvardhan Memorial Bengaluru: ಡಾ ವಿಷ್ಣುವರ್ಧನ್‌ ಸಮಾಧಿ ನೆಲಸಮ ಮಾಡಿದ್ದಕ್ಕೆ ಅಭಿಮಾನಿಗಳು, ಚಿತ್ರರಂಗ ಆಕ್ರೋಶ ಹೊರಹಾಕಿದೆ. ಹೀಗಿರುವಾಗ ಕಿಚ್ಚ ಸುದೀಪ್‌ ಅವರು ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. 

ಡಾ ವಿಷ್ಣುವರ್ಧನ್‌ ಸಮಾಧಿ ( Dr Vishnuvardhan Memorial Bengaluru ) ತೆರವುಗೊಳಿಸಿದ ವಿಚಾರವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆ, ಪ್ರತಿಭಟನೆ ನಡೆಯುತ್ತಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ನಟ ಡಾ ವಿಷ್ಣುವರ್ಧನ್ ಸ್ಮಾರಕ ಮಾಡಲು ಅವರ ಅಭಿಮಾನಿಗಳು ರೆಡಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಟ ಬಾಲಣ್ಣ ಕುಟುಂಬದ ಒಡೆತನದಲ್ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಈ ಬಗ್ಗೆ ಕನ್ನಡ ನಟ-ನಟಿಯರು ಬೇಸರ ಹೊರಹಾಕಿದ್ದಾರೆ. ಬಾಲಣ್ಣ ಕುಟುಂಬ, ವಿಷ್ಣುವರ್ಧನ್‌ ಅಭಿಮಾನಿಗಳು, ವಿಷ್ಣುವರ್ಧನ್‌ ಕುಟುಂಬದ ಸುತ್ತ ಚರ್ಚೆ ನಡೆಯುತ್ತಿದೆ.

Add Asianetnews Kannada as a Preferred SourcegooglePreferred

ಅಮೃತಮಹೋತ್ಸವ ನಡೆಯಲಿದೆ!

ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಸೆಪ್ಟೆಂಬರ್ 18ರಂದು ಅಮೃತಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಮಹತ್ವದ ಕೆಲಸಕ್ಕೆ ವಿಷ್ಣು ಫ್ಯಾನ್ಸ್ ಮುಂದಾಗುತ್ತಿದ್ದಾರೆ. ಈ ಕುರಿತು ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿಂದು ವಿಷ್ಣುವರ್ಧನ್‌ ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ವಿಷ್ಣು ಸ್ಮಾರಕದ ಬ್ಲ್ಯೂ ಪ್ರಿಂಟ್ ಅನಾವರಣ

ಸೆಪ್ಟೆಂಬರ್ 2ರಂದು ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಕಿಚ್ಚ ಸುದೀಪ್‌ ಅವರು ವಿಷ್ಣುವರ್ಧನ್‌ರ ಅಪ್ಪಟ ಅಭಿಮಾನಿ. ಸುದೀಪ್ ಹುಟ್ಟುಹಬ್ಬದಂದೇ ಸಾಹಸಸಿಂಹ ಸ್ಮಾರಕದ ಬ್ಲ್ಯೂಪ್ರಿಂಟ್‌ನ್ನು ಸ್ವತಃ ಕಿಚ್ಚ ಸುದೀಪ್‌ ಅವರೇ ಅನಾವರಣ ಮಾಡಲಿದ್ದಾರೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಜನ್ಮದಿನದಂದು ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅನ್ನುವುದನ್ನು ವೀರಕಪುತ್ರ ಅವರು ತಿಳಿಸಿದ್ದಾರೆ.

ವೀರಕಪುತ್ರ ಶ್ರೀನಿವಾಸ್ ಏನು ಹೇಳಿದರು?

ವೀರಕಪುತ್ರ ಶ್ರೀನಿವಾಸ್ ಮಾತನಾಡಿ, “ಅಮೃತವರ್ಷ ಆಚರಿಸಲು ಮೂರು ವರ್ಷದಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಅದೇ ದಿನದಂದು ಸ್ಮಾರಕ ಕೆಲಸ ನಿರ್ಮಾಣ ಕೆಲಸ ಆರಂಭಿಸುತ್ತಿದ್ದೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಸರ್ ಬರ್ತಡೇ ದಿನದಂದು ಸ್ಮಾರಕ ಹೇಗಿರಲಿದೆ ಎಂಬ ಮಾಡೆಲ್ ಪರಿಚಯಿಸುತ್ತೇವೆ. ಕಿಚ್ಚ ಸುದೀಪ್ ಅವರು ಕೆಂಗೇರಿ ಹತ್ರ 1/2 ಎಕರೆ ಜಾಗ ಖರೀದಿ ಮಾಡಿದ್ದಾರೆ. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು ಹಾಕುತ್ತೇವೆ. ಇದು ಪುಣ್ಯಭೂಮಿಗೆ ಸಮ ಎಂದು ವಾದ ಮಾಡಲು ಹೋಗುವುದಿಲ್ಲ. ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪ್ಯಾರೆಲ್ ಎಂದು ಹೇಳುವುದಿಲ್ಲ. ಇದು ಅಸಂಖ್ಯಾತ ಭಾವನೆ ಬೆಸೆದ ಜಾಗ ಇದು. ಪುಣ್ಯಭೂಮಿ ಉಳಿಸಿಕೊಳ್ಳುತ್ತೇವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ. ಕುಟುಂಬದವರು ನಿನ್ನೆ ಹೇಳಿದ್ದಾರೆ. ನೀವೆಲ್ಲರೂ ನಿರ್ಧಾರ ಮಾಡಿಕೊಂಡು ಬನ್ನಿ ಎಂದಿದ್ದಾರೆ. ಅದಕ್ಕಾಗಿ ರೂಪುರೇಷೆ ಸಿದ್ದ ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಾದಾ ಅವರ ದರ್ಶನ ಕೇಂದ್ರ ಮಾಡುತ್ತೇವೆ. ಅದು ಅರ್ಥಪೂರ್ಣ ಕೆಲಸಕ್ಕೆ ವೇದಿಕೆಯಾಗಲಿದೆ ಎಂಬುದನ್ನು ಸೆಪ್ಟೆಂಬರ್ 2ಕ್ಕೆ ಮಾಹಿತಿ ನೀಡುತ್ತೇನೆ ಎಂದರು.

ಅಮೃತ ಮಹೋತ್ಸವಕ್ಕೆ ಚಿತ್ರರಂಗ ಭಾಗಿ!

ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ವಿಷ್ಣುವರ್ಧನ್‌ರ ಅಮೃತ ಮಹೋತ್ಸವ ನಡೆಯಲಿದೆ.ಇದನ್ನು ಒಂದು ದಿನ ಆಚರಿಸೋಕೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಈ ಅಮೃತ ಮಹೋತ್ಸವದಲ್ಲಿ ಇಡೀ ಚಿತ್ರರಂಗವೇ ಭಾಗಿ ಆಗಲಿದೆ ಅಂತಲೂ ಹೇಳಬಹುದು ಎಂದಿದ್ದಾರೆ.

75ನೇ ಜನ್ಮದಿನ ಆಚರಣೆ!

ವಿಷ್ಣುವರ್ಧನ್‌ ಅವರು ದೈಹಿಕವಾಗಿ ನಮ್ಮೊಂದಿಗೆ ಇದ್ದಿದ್ದರೆ ಈ ವರ್ಷ 75ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಷ್ಣುವರ್ಧನ್‌ ಸದಾ ನಮ್ಮೊಂದಿಗೆ ಇರುತ್ತಾರೆ ಎನ್ನೋದು ಕೂಡ ಸತ್ಯ. 2009ರಲ್ಲಿ ವಿಷ್ಣುವರ್ಧನ್ ನಿಧನರಾದಮೇಲೆ ಪ್ರತಿ ವರ್ಷ ಅವರ ಪುಣ್ಯಸ್ಮರಣೆ ದಿನ, ಜನ್ಮದಿನಕ್ಕೆ ಅಭಿಮಾನ್‌ ಸ್ಟುಡಿಯೋ ಬಳಿ ಹೋಗಿ ದಾದಾ ಸ್ಮಾರಕದ ಮುಂದೆ ಒಂದಿಷ್ಟು ಸಮಯ ಕಳೆಯುತ್ತಿದ್ದರು. ಈ ವರ್ಷ ವಿಷ್ಣು ಅಭಿಮಾನಿಗಳಿಗೆ ಆ ಭಾಗ್ಯ ಇಲ್ಲದಂತಾಗಿದೆ.