‘ಎನ್‌ಡಿಎ ಕೂಟಕ್ಕೆ ಚುನಾವಣೆಯಲ್ಲಿ ಸೋಲುವ ಭಯವಿದೆ. ‘ಬಿಜೆಪಿ ಒತ್ತಡದಿಂದಾಗಿ ನಮ್ಮ ಪಕ್ಷದ 3 ಅಭ್ಯರ್ಥಿಗಳು ಬಿಹಾರ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ’ ಎಂದು ಜನ್‌ ಸುರಾಜ್‌ ಪಕ್ಷದ ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌ ಆರೋಪಿಸಿದ್ದಾರೆ.

ಪಟನಾ: ‘ಬಿಜೆಪಿ ಒತ್ತಡದಿಂದಾಗಿ ನಮ್ಮ ಪಕ್ಷದ 3 ಅಭ್ಯರ್ಥಿಗಳು ಬಿಹಾರ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ’ ಎಂದು ಜನ್‌ ಸುರಾಜ್‌ ಪಕ್ಷದ ಮುಖ್ಯಸ್ಥ ಪ್ರಶಾಂತ್‌ ಕಿಶೋರ್‌ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಡಿಎ ಕೂಟಕ್ಕೆ ಚುನಾವಣೆಯಲ್ಲಿ ಸೋಲುವ ಭಯವಿದೆ. ಆದ್ದರಿಂದ ವಿಪಕ್ಷಗಳ ಅಭ್ಯರ್ಥಿಗಳನ್ನು ಬೆದರಿಸಿ ನಾಮಪತ್ರ ಹಿಂಪಡೆಯುವಂತೆ ಬೆದರಿಸುತ್ತಿದೆ. ಇದು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಈ ಮೊದಲು ದೇಶದಲ್ಲಿ ಹೀಗೆಂದೂ ಆಗಿರಲಿಲ್ಲ’ ಎಂದು ಆರೋಪಿಸಿದರು. ಜತೆಗೆ ಅಭ್ಯರ್ಥಿಗಳ ಭದ್ರತೆಯನ್ನು ಖಚಿತಪಡಿಸುವಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡಿದರು.

ಬಿಜೆಪಿ ವಿರುದ್ಧ ನೇರ ಟೀಕೆ ಮಾಡಿದ ಪಿಕೆ, ‘ಈ ಹಿಂದೆ ಸೂರತ್‌ನಲ್ಲಿ ತಮ್ಮ ಅಭ್ಯರ್ಥಿಗಳಿಗೆ ಎದುರಾಳಿಗಳೇ ಇಲ್ಲದಂತೆ ಮಾಡಿದ್ದ ಪಕ್ಷ, ಈಗ ಅದನ್ನೇ ಮಾಡಲು ಬಯಸುತ್ತಿದೆ. ಹೀಗೆ ಮಾಡುತ್ತಿರುವುದಕ್ಕೆ ಜನ ಕೇವಲ 240 ಸೀಟುಗಳಲ್ಲಿ ಗೆಲ್ಲಿಸಿ ಶಿಕ್ಷಿಸಿದ್ದಾರೆ ಎಂದು ಅದಕ್ಕೆ ಅರ್ಥವೇ ಆಗುತ್ತಿಲ್ಲ’ ಎಂದರು. ಈ ಮೊದಲು ಎಲ್ಲಾ 243 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಜನ್‌ ಸುರಾಜ್‌ ಇದೀಗ 240 ಕಡೆ ಮಾತ್ರ ಸೆಣಸಲಿದೆ.