ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬೆನ್ನಲ್ಲೇ ಇದೀಗ ಎನ್‌ಸಿಪಿ ನಾಯಕ ಶರದ್‌ ಪವಾರ್ ಕೂಡ, ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

ನಾಗ್ಪುರ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬೆನ್ನಲ್ಲೇ ಇದೀಗ ಎನ್‌ಸಿಪಿ ನಾಯಕ ಶರದ್‌ ಪವಾರ್ ಕೂಡ, ಕಳೆದ ವರ್ಷ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಗೂ ಮುನ್ನ ಇಬ್ಬರು ವ್ಯಕ್ತಿಗಳು ನನ್ನನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು, ಪ್ರತಿಪಕ್ಷಗಳನ್ನು 160 ಸ್ಥಾನಗಳಲ್ಲಿ ಗೆಲ್ಲಿಸಿ ಕೊಡುವುದಾಗಿ ಅವರು ಸ್ಪಷ್ಟ ಭರವಸೆ ನೀಡಿದ್ದರು. ಆದರೆ ನಾವು ಅವರ ಆಫರ್‌ ತಿರಸ್ಕರಿಸಿದೆವು ಎಂದು ಪವಾರ್ ಹೊಸ ಬಾಂಬ್‌ ಹಾಕಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನ ಈ ಇಬ್ಬರು ವ್ಯಕ್ತಿಗಳು ನನ್ನನ್ನು ಭೇಟಿಯಾಗಿದ್ದರು. 228ರಲ್ಲಿ 160 ಸ್ಥಾನಗಳನ್ನು ಗೆಲ್ಲಿಸಿಕೊಡುವ ಸ್ಪಷ್ಟ ಭರವಸೆ ನೀಡಿದ್ದರು. ನಾನು ಅವರನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಭೇಟಿಗೆ ವ್ಯವಸ್ಥೆ ಮಾಡಿಸಿದೆ. ಅವರು ತಮಗೆ ಏನೇನು ಬೇಕಿದೆ ಎಂಬುದನ್ನು ತಿಳಿಸಿದರು. ಕೊನೆಗೆ ನಾನು ಮತ್ತು ರಾಹುಲ್‌ ಗಾಂಧಿ ಇಬ್ಬರೂ ಇದು ನಮ್ಮ ಮಾರ್ಗ ಅಲ್ಲ, ನಾವು ಜನರ ಮುಂದೆ ಹೋಗಿ ಬೆಂಬಲ ಗಳಿಸಲು ಪ್ರಯತ್ನಿಸೋಣ ಎಂದು ನಿರ್ಧರಿಸಿದೆವು ಎಂದು ಪವಾರ್‌ ಹೇಳಿದರು.

ನಾವು ಈ ವಿಚಾರ ಕುರಿತು ಆಗ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ ಆ ವಿಚಾರ ಈಗಲೂ ನನಗೆ ನೆನಪಿದೆ. ಅವರ ಮಾತು ಕೇಳಿ ನನಗೆ ಅಚ್ಚರಿಯಾಗಿತ್ತು. ಅವರು ಅಷ್ಟು ಖಚಿತವಾಗಿ ಹೇಳಿದರೂ ನನಗೆ ಚುನಾವಣಾ ಆಯೋಗದ ಕುರಿತು ಯಾವುದೇ ಅನುಮಾನ ಇರಲಿಲ್ಲ. ಹೀಗಾಗಿ ನಾನು ಅವರನ್ನು ನಿರ್ಲಕ್ಷಿಸಿದೆ ಎಂದು ತಿಳಿಸಿದರು.