ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕಪರನಕೊಪ್ಪಲು ಗ್ರಾಮದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರನ್ನು ಗ್ರಾಮದ ಸ್ವಪಕ್ಷ ಕಾರ್ಯಕರ್ತ ಹನುಮಂತು ಅವರು ಅಡ್ಡಗಟ್ಟಿ ಏರು ದನಿಯಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

ಶ್ರೀರಂಗಪಟ್ಟಣ (ಆ.11): ಕರೆ ಸ್ವೀಕರಿಸಲಿಲ್ಲ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡರನ್ನು ಕಾಂಗ್ರೆಸ್‌ನ ಕಾರ್ಯಕರ್ತನೊಬ್ಬ ತರಾಟೆಗೆ ತೆಗೆದುಕೊಂಡು ಏರುಧ್ವನಿಯಲ್ಲಿ ಮಾತನ್ನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕಪರನಕೊಪ್ಪಲು ಗ್ರಾಮದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕರನ್ನು ಗ್ರಾಮದ ಸ್ವಪಕ್ಷ ಕಾರ್ಯಕರ್ತ ಹನುಮಂತು ಅವರು ಅಡ್ಡಗಟ್ಟಿ ಏರು ದನಿಯಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

ತಾವು ಕಾಂಗ್ರೆಸ್‌ಗೆ ಬಂದ ವೇಳೆ ನನಗೆ ಕರೆ ಮಾಡಿ ಕಾಂಗ್ರೆಸಲ್ಲೇ ಉಳಿಯಲು ಹೇಳಿದ್ದಿರಿ. ಆದರೆ, ಈಗ 10 ಸಲ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಏಕೆ? ಗೆದ್ದಾಗ ಬೇಕಿತ್ತು. ಈಗ ನಾವು ಬೇಡವಾ? ಎಂದು ಕೂಗಾಡಿದ್ದಾರೆ. ನಮ್ಮ ಗ್ರಾಮಕ್ಕೆ ಆಗಮಿಸಿದ್ದೀರಿ. ನಮಗೆ ಮಾಹಿತಿಯೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಕಾರ್ಯಕರ್ತರು ಹಾಗೂ ಶಾಸಕರ ಹಿಂಬಾಲಕರು ಹನುಮಂತು ಅವರೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಂತೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಎಲ್ಲರನ್ನೂ ಸಮಾಧಾನ ಮಾಡಿದ್ದಾರೆ.

ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಿದ್ಧತೆ ಮಾಡಿ: ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 30ಕ್ಕೂ ಹೆಚ್ಚು ಸಾಧಕರನ್ನು ಅಭಿನಂದಿಸಬೇಕು ಎಂದರು.

ಶಾಲಾ ಮಕ್ಕಳಿಗೆ ಸಂವಿಧಾನ ಕುರಿತಾಗಿ ಆಶುಭಾಷಣೆ ಸ್ಪರ್ಧೆ, ದೇಶದ ಸಂವಿಧಾನದ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮ ಇರಬೇಕು. ಗ್ರಾಪಂ ಹಾಗೂ ಪುರಸಭೆಯಿಂದ ಹಕ್ಕು ಪತ್ರ, ಇ-ಸ್ವತ್ತುಗಳ ಫಲಾನುಭವಿಗಳಿಗೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ಬೆಳಗ್ಗೆ 7-30ಕ್ಕೆ ಪುರಸಭೆ ಕಚೇರಿಯಲ್ಲಿ ಧ್ವಜಾರೋಹಣ, ನಂತರ ಮಕ್ಕಳನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿ ಬತ್ತೇರಿ ವರೆಗೆ ಮೆರವಣಿಗೆ ನಡೆಸಿ ಐತಿಹಾಸಿಕ ಬತೇರಿಯಲ್ಲಿ ತಹಸೀಲ್ದಾರ್ ಅವರಿಂದ ಧ್ವಜಾರೋಹಣ ಕಾರ್ಯ ನಡೆಸಬೇಕು. ಆನಂತರ ತಾಲೂಕು ಕ್ರೀಡಾಂಗಣಕ್ಕೆ ಮಕ್ಕಳು ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಎಂದರು.

ರೈತರಿಗೆ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು. 21 ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಪಂಚಾಯ್ತಿ ವಶದಲ್ಲಿರಬೇಕು. ಪಟ್ಟಣ ಪುರಸಭೆ ಸೇರಿದಂತೆ ಸರ್ಕಾರಿ ಜಾಗ ಒತ್ತುವರಿ ತೆರವು ಮಾಡಿಸಿ ಆ ಜಾಗಗಳಿಗೆ ನಿವೇಶನ-ವಸತಿ ಇಲ್ಲದವರಿಗೆ ಹಕ್ಕು ಪತ್ರ ನೀಡಲು ಮುಂದಾಗಬೇಕು ಎಂದರು. ತಹಸೀಲ್ದಾರ್ ಹಾಗೂ ತಾಪಂ ಇಒ ಅವರ ಸಲಹೆಗಳ ಪಡೆದು ಎಲ್ಲಾ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮಗಳ ನಡೆಸಿ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮ ವಹಿಸಬೇಕು. ಪ್ರತಿ ಹೋಬಳಿಗಳಲ್ಲಿ ಕನಿಷ್ಠ 500 ಮಂದಿಗೆ ಇ-ಸ್ವತ್ತುಗಳ ದಾಖಲೆಗಳನ್ನು ನೀಡಲು ಸಹಕಾರ ನೀಡಿ ಎಂದು ಸೂಚಿಸಿದರು.