ಬೆಂಗಳೂರಿನ ಇಂದಿರಾನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಅಪರಿಚಿತ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಕ್ತರು ಮತ್ತು ಸ್ಥಳೀಯರು ಈ ಕೃತ್ಯವನ್ನು ಖಂಡಿಸಿದ್ದಾರೆ.
ಬೆಂಗಳೂರು (ಮೇ.25): ಅಪರಿಚಿತ ಮಹಿಳೆಯೋರ್ವಳು ರಾಯರ ಮಠದಲ್ಲಿ ಚಪ್ಪಲಿ ಎಸೆದು ಪರಾರಿಯಾದ ಆಘಾತಕಾರಿ ಘಟನೆ ಇಂದು ಬೆಳಗಿನ ಜಾವ 5:17ರ ಸುಮಾರಿಗೆ ಬೆಂಗಳೂರಿನ ಇಂದಿರಾನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದಿದೆ.
ಬೆಳಗಿನ ಜಾವ ಮಠಕ್ಕೆ ಬಂದಿರುವ ಅಪರಿಚಿತ ಮಹಿಳೆಯೊಬ್ಬಳು ಮಠದ ಕಿಟಕಿಯಿಂದ ಚಪ್ಪಲಿ ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾಳೆ.ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆಾದಲ್ಲಿ ಸೆರೆಯಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ಗೆ ಈ ದೃಶ್ಯ ಲಭ್ಯವಾಗಿದೆ. ಈ ಕೃತ್ಯವನ್ನು ಭಕ್ತರು ಮತ್ತು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ, ಇದು ರಾಯರ ಮಹಾತ್ಮೆಗೆ ಅವಮಾನ ಮಾಡಲು ಈ ಕೃತ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಹಿಂದಿನ ಉದ್ದೇಶ ಏನೆಂಬುದು ತಿಳಿದಿಲ್ಲ. ಮಹಿಳೆ ಚಪ್ಪಲಿ ಎಸೆದಿರುವದು ಹರಕೆಯೋ, ಸಿಟ್ಟೋ, ಅಥವಾ ಬೇರೆ ಯಾವುದೋ ಉದ್ದೇಶವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: BSY Visit to Mantralaya: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಯರ ಮುಂದೆ ಸಂಕಲ್ಪ
ರಾಯರ ಮಹಾತ್ಮೆ:
ಶ್ರೀ ರಾಘವೇಂದ್ರ ಸ್ವಾಮಿಗಳು, ೧೬೭೧ರಲ್ಲಿ ಮಂತ್ರಾಲಯದಲ್ಲಿ ಜೀವಂತವಾಗಿ ಬೃಂದಾವನ ಪ್ರವೇಶ ಮಾಡಿದವರು, ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ರಕ್ಷಣೆ ನೀಡುವವರೆಂದು ವಿಶ್ವದಾದ್ಯಂತ ಲಕ್ಷಾಂತರ ಭಕ್ತರಿಂದ ಆರಾಧಿಸಲ್ಪಡುತ್ತಾರೆ. ದೇಶಾದ್ಯಂತ ರಾಯರ ದೇವಸ್ಥಾನಗಳಲ್ಲಿ ನಿತ್ಯವೂ ಪೂಜೆ, ದಾಸೋಹ, ಮತ್ತು ಭಜನೆಗಳು ನಡೆಯುತ್ತವೆ. ಇಂದಿರಾನಗರದ ರಾಯರ ಮಠವೂ ಭಕ್ತರಿಗೆ ಪವಿತ್ರ ಕೇಂದ್ರವಾಗಿದೆ.
ಈ ಘಟನೆಯಿಂದ ಭಕ್ತರ ಮನಸ್ಸಿಗೆ ಧಕ್ಕೆಯುಂಟಾಗಿದ್ದು, ರಾಯರ ಮಹಾತ್ಮೆಯ ಬಗ್ಗೆ ಚರಿತ್ರೆಗಳು ಮತ್ತು ಭಕ್ತರ ಅನುಭವಗಳು ಇಂದಿಗೂ ಸ್ಫೂರ್ತಿಯಾಗಿರುವಾಗ ಇಂತಹ ಕೃತ್ಯವು ಸಮಾಜದಲ್ಲಿ ಆತಂಕ ಉಂಟುಮಾಡಿದೆ. ಸ್ಥಳೀಯರು ಈ ಘಟನೆಯನ್ನು ಖಂಡಿಸಿ, ಮಠದ ಪಾವಿತ್ರ್ಯತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.
