ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಕುಟುಂಬ ಸದಸ್ಯರಲ್ಲಿಯೇ ಇರುವ ಕೆಲವರ ಗುಣ, ಅಭ್ಯಾಸಗಳು ಆ ಮನೆಯನ್ನು ಬಡತನದತ್ತ ನೂಕುತ್ತವೆ. ಲಕ್ಷ್ಮಿ ದೇವಿಯನ್ನು ಮನೆಯಿಂದ ದೂರವಿಡುತ್ತದೆ. ಹಾಗಾದರೆ ಆ ಗುಣಗಳು ಯಾವುವು? 

ಆಚಾರ್ಯ ಚಾಣಕ್ಯರು ಆಡದೆ ಉಳಿದ ವಿಷಯಗಳೇ ಇಲ್ಲ ಅನ್ನಬಹುದು. ಅವರು ಉತ್ತಮ ರಾಜ ಹೇಗಿರಬೇಕು, ಮಂತ್ರಿ ಹೇಗಿರಬೇಕು, ಉತ್ತಮ ಗಂಡ- ಹೆಂಡತಿ ಹೇಗಿರಬೇಕು ಎಂದೆಲ್ಲ ಹೇಳುವುದರ ಜೊತೆಗೆ ಉತ್ತಮ ಮನೆ- ಮನೆತನ- ಮನೆಯಲ್ಲಿ ಇರುವವರು ಹೇಗಿರಬೇಕು ಎಂದೂ ಹೇಳಿದ್ದಾರೆ. ಮನೆಯಲ್ಲಿರುವವರು ಹೇಗಿದ್ದರೆ ಅಂಥ ಮನೆ ಏಳಿಗೆ ಹೊಂದುತ್ತದೆ, ಹೇಗಿದ್ದರೆ ಅದು ನಾಶವಾಗುತ್ತದೆ ಎಂದೂ ಹೇಳಿದ್ದಾರೆ. ಒಳ್ಳೆಯ ಮನೆಯು ಕುಟುಂಬದ ಸಂಪತ್ತು ಮತ್ತು ಸಂತೋಷವನ್ನು ರಕ್ಷಿಸುತ್ತದೆ. ಜೀವನದ ಸಂತೋಷದ ಮೂಲ ಅಡಿಪಾಯವು ಮನೆಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಚಾಣಕ್ಯನು ಮನೆಯನ್ನು ಸಂಪತ್ತು, ಸಂತೋಷ ಮತ್ತು ಸ್ಥಿರತೆಯ ಸಂಕೇತವೆಂದು ಪರಿಗಣಿಸುತ್ತಾರೆ. ಮನೆ ಎಂಬುದು ಧಾರ್ಮಿಕ ಮತ್ತು ನೈತಿಕ ವಾತಾವರಣವನ್ನು ಹೊಂದಿರುವ ಸ್ಥಳ. ಅಂಥ ಮನೆಯನ್ನು ಹಾಳುಗೆಡಹಲು ಈ ಕೆಳಗಿನ ಸಂಗತಿಗಳು ಸಾಕಾಗುತ್ತವೆ. ಅವು ಯಾವುವು?

ಮನಸ್ತಾಪ ಹೊಂದಿರುವ ಮನೆ

ಕುಟುಂಬದ ಸದಸ್ಯರ ನಡುವೆ ಜಗಳಗಳು, ಭಿನ್ನಾಭಿಪ್ರಾಯಗಳು ಇರುವ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಎನ್ನುವ ನಂಬಿಕೆಯಿದೆ. ಜಗಳ ಮತ್ತು ಮನಸ್ತಾಪ ಹೊಂದಿರುವ ಮನೆಗಳಲ್ಲಿ ನಕಾರಾತ್ಮಕತೆಯು ಹೆಚ್ಚಾಗಿರುತ್ತದೆ. ಇಂತಹ ಸನ್ನಿವೇಶಗಳು ಮನೆಗಳಲ್ಲಿ ಸಂಪತ್ತಿನ ನಾಶವಾಗುವಂತೆ ಮಾಡುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ಮೂರ್ಖರ ಆವಾಸಸ್ಥಾನ

ಅಜ್ಞಾನಿಗಳನ್ನು ಎಲ್ಲಿ ಗೌರವಿಸಲ್ಪಡುತ್ತಾರೋ ಮತ್ತು ಜ್ಞಾನಿಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಮೂರ್ಖರು, ಅಜ್ಞಾನಿಗಳು ಹೊಂದಿರುತ್ತಾರೋ, ಅಲ್ಲಿ ಸಂಪತ್ತು ಉಳಿಯುವುದಿಲ್ಲ. ಅಜ್ಞಾನಿಗಳು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ತಪ್ಪು ಚಟುವಟಿಕೆಗಳಲ್ಲಿ ಹಣವನ್ನು ವ್ಯರ್ಥ ಮಾಡುತ್ತಾರೆ. ಹಾಗಾಗಿ, ಅಜ್ಞಾನಿಗಳಿರುವ ಮನೆಗಳಲ್ಲಿ ನೀವು ವಾಸವಾಗದೆ ಇರುವುದೇ ಉತ್ತಮ.

​ಸೋಮಾರಿಗಳ ನೆಲೆ

​ಸೋಮಾರಿ ಜನರನ್ನು ಹೊಂದಿರುವ, ಅಂದರೆ ಕೆಲಸ ಮಾಡದೇ ಎಲ್ಲೆಂದರಲ್ಲಿ ಮನಬಂದಂತೆ ಓಡಾಡಿಕೊಂಡು ಇರುವವರು ಸೋಮಾರಿಗಳಾಗಿರುತ್ತಾರೆ. ಇಂತಹ ಸೋಮಾರಿಗಳು ಇರುವಲ್ಲಿ ಹಣದ ಸಮಸ್ಯೆ ಎಂಬುದು ತಪ್ಪಿದ್ದಲ್ಲ. ವ್ಯಕ್ತಿಯಲ್ಲಿನ ಸೋಮಾರಿತನವು ಆತನ ಶ್ರಮವನ್ನು ನಾಶಪಡಿಸುತ್ತದೆ. ಮತ್ತು ಆ ವ್ಯಕ್ತಿಗೆ ಹಣದ ಕೊರತೆಯನ್ನು ಅಥವಾ ಸಮಸ್ಯೆಯನ್ನು ಸೃಷ್ಟಿಮಾಡುತ್ತದೆ.

ಅಪನಂಬಿಕೆಯ ಗೂಡು

ಕುಟುಂಬದ ಸದಸ್ಯರ ನಡುವೆ ಪರಸ್ಪರ ನಂಬಿಕೆ ಇರಬೇಕಾದುದ್ದು ತುಂಬಾನೇ ಮುಖ್ಯವಾಗಿರುತ್ತದೆ. ಯಾವ ಮನೆಗಳಲ್ಲಿ ಕುಟುಂಬದ ಸದಸ್ಯರ ನಡುವೆ ಪರಸ್ಪರ ನಂಬಿಕೆ ಎನ್ನುವಂತಹದ್ದು ಇರುವುದಿಲ್ಲವೋ ಅಂತವರ ಮನೆಯಲ್ಲಿ ಸಂಪತ್ತು ಎನ್ನುವಂತಹದ್ದು ಎಂದಿಗೂ ಉಳಿಯುವುದಿಲ್ಲ ಎಂದು ಹೇಳಲಾಗಿದೆ. ಕುಟುಂಬದ ಸದಸ್ಯರ ನಡುವಿನ ಅಪನಂಬಿಕೆಯು ಮನೆಯಲ್ಲಿ ವೈಷಮ್ಯ ಮತ್ತು ಜಗಳವನ್ನು ಸೃಷ್ಟಿ ಮಾಡುತ್ತದೆ. ಮತ್ತು ಸಂಪತ್ತಿನ ನಾಶವಾಗುವಂತೆ ಮಾಡುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

​ಕೊಳಕು ತುಂಬಿರುವ ನಿವಾಸ

ಯಾವ ಮನೆಗಳಲ್ಲಿ ಕೊಳಕು, ಅಶುಚಿತ್ವ ಮತ್ತು ಅವ್ಯವಸ್ಥೆ ಮೇಲುಗೈ ಸಾಧಿಸಿರುತ್ತದೆಯೋ ಅಂತಹ ಮನೆಗಳಲ್ಲಿ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ ಎಂದು ಹೇಳಿದ್ದಾರೆ. ಯಾವ ಮನೆಯಲ್ಲಿ ಕೊಳಕು ತುಂಬಿಕೊಂಡಿರುತ್ತದೆಯೋ ಅಂತಹ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತದೆ. ಇದು ನಕಾರಾತ್ಮಕತೆಯನ್ನು ತನ್ನತ್ತ ಬಹುಬೇಗನೇ ಆಕರ್ಷಿಸುತ್ತದೆ. ಹಾಗೂ ಮನೆಯಲ್ಲಿನ ಸಮೃದ್ಧಿಯನ್ನು ನಾಶಪಡಿಸುತ್ತದೆ ಎಂದು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ.

ಅನಗತ್ಯ ಶೋಕಿಲಾಲತೆ

ಇವುಗಳಲ್ಲದೆ ಅನಗತ್ಯ ಖರ್ಚು, ಸಾಲ, ಜೂಜು, ಇತರರನ್ನು ಮೋಸ ಮಾಡುವ ಗುಣ ಇರುವ ಜನರನ್ನು ಕೂಡ ಬಡತನ ಆಕರ್ಷಿಸುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ಹಾಗೇ ಚಾಡಿ ಹೇಳುವುದು, ತಮಗಿಂತ ಬಡವರ ಮೇಲೆ ಅನಗತ್ಯ ಕರುಣೆ, ತನಗಿಂದ ಶ್ರೀಮಂತರ ಮುಂದೆ ಅನಾವಶ್ಯಕ ಸಮಯ ಕಳೆಯುವುದು ಇದೆಲ್ಲವೂ ಹಾನಿಕರ. ಶ್ರೀಮಂತರಾಗಲು, ಕಷ್ಟಪಟ್ಟು ಕೆಲಸ ಮಾಡುವುದು ಮಾತ್ರವಲ್ಲ, ಬುದ್ಧಿವಂತ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎನ್ನುತ್ತಾರೆ.