ಯೂಟ್ಯೂಬರ್ ಮುಕುಳೆಪ್ಪ ಅವರ ವಿವಾಹ ವಿವಾದವು ಹೊಸ ತಿರುವು ಪಡೆದಿದೆ. ನಿಯಮಬಾಹಿರ ವಿವಾಹ ನೋಂದಣಿ ಆರೋಪದ ಮೇಲೆ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಇದೀಗ ಪತ್ನಿ ಗಾಯತ್ರಿ ಠಾಣೆಗೆ ಹಾಜರಾಗಿ ತಾನು ಸ್ವಇಚ್ಛೆಯಿಂದ ಮದುವೆಯಾಗಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿ: ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ವಿವಾಹ ವಿವಾದ ಹೊಸ ತಿರುವು ಪಡೆದುಕೊಂಡಿದೆ. ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ. ಇದೀಗ ಹಣ ಪಡೆದು ನಿಯಮ ಬಾಹಿರವಾಗಿ ಕ್ವಾಜಾ ಅಲಿಯಾಸ್ ಮುಕಳಪ್ಪ ಹಾಗೂ ಗಾಯತ್ರಿ ವಿವಾಹ ನೊಂದಣಿ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಹಿಂದೂಪರ ಸಂಘಟನೆ ಹಾಗೂ ಯುವತಿಯ ತಾಯಿ ಶಿವಕ್ಕ ಸಬ್ ರಿಜಿಸ್ಟರ್ ಗೆ ತರಾಟೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿ–ಧಾರವಾಡ ನಿವಾಸಿಗಳಾದವರನ್ನು ಸುಳ್ಳು ದಾಖಲೆಗಳ ಮೂಲಕ ಮುಂಡಗೋಡ ನಿವಾಸಿಗಳೆಂದು ತೋರಿಸಿ, ಜೂನ್ 5ರಂದು ಒಂದೇ ದಿನದಲ್ಲಿ ದಾಖಲೆ ಪಡೆದು ತಕ್ಷಣವೇ ವಿವಾಹ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.ವಿವಾಹ ನೋಂದಣಿ ಕಾಯ್ದೆಯ ಪ್ರಕಾರ, ಮದುವೆಯ ನೋಂದಣಿಗೆ ಕನಿಷ್ಠ ಒಬ್ಬರು ಸ್ಥಳೀಯ ನಿವಾಸಿಯಾಗಿರಬೇಕು. ಆದರೆ ಈ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂಬುದು ಸಂಘಟನೆಗಳ ದೂರು. ಇದರಿಂದಾಗಿ, ಸಬ್ ರಿಜಿಸ್ಟ್ರಾರ್ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲು ಗಾಯತ್ರಿಯ ತಾಯಿ ಶಿವಕ್ಕ ಮುಂದಾಗಿದ್ದಾರೆ.
ಇದಕ್ಕೂ ಮುನ್ನ, ಯುವತಿ ಗಾಯತ್ರಿಯ ಪೋಷಕರು ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಮಗಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ, ಯುವತಿಯ ಪತ್ತೆ ಹಾಗೂ ಆರೋಪಿ ಬಂಧನಕ್ಕಾಗಿ ಜಾಲ ಬೀಸಿದ್ದರು.
ಇಂದು (ಸೆಪ್ಟೆಂಬರ್ 22) ಗಾಯತ್ರಿ ತಮ್ಮ ವಕೀಲರೊಂದಿಗೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಹಾಜರಾಗಿ, ಸ್ಪಷ್ಟನೆ ನೀಡಿದರು. “ನಾನು ಸ್ವಇಚ್ಛೆಯಿಂದ ಜೂನ್ 5ರಂದು ಮುಕುಳೆಪ್ಪ ಅವರನ್ನು ಮದುವೆಯಾದೆ. ಈ ಮದುವೆ ಬಗ್ಗೆ ನನ್ನ ಕುಟುಂಬಕ್ಕೂ ಮಾಹಿತಿ ಇತ್ತು ಮತ್ತು ಅವರ ಅನುಮತಿಯೇ ಇತ್ತು. ಮದುವೆ ಬಳಿಕ ನಾನು ನನ್ನ ತಾಯಿಯ ಮನೆಯಲ್ಲಿ ವಾಸವಿದ್ದೆ. ಯಾರೂ ನನ್ನನ್ನು ಅಪಹರಿಸಿಲ್ಲ, ಬಲವಂತ ಮಾಡಿಲ್ಲ. ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ನಾನು ಸ್ವಇಚ್ಛೆಯಿಂದ ಮದುವೆಯಾಗಿದ್ದೇನೆ. ಇದರ ನಡುವೆ ನಾನು ಸ್ವಇಚ್ಛೆಯಿಂದ ಮದುವೆ ಆಗಿದ್ದೇನೆ. ನಾವಿಬ್ಬರೂ ಎರಡೂವರೆ ವರ್ಷ ಪ್ರೀತಿಸಿ ಮದುವೆ ಆಗಿದ್ದೇವೆ
ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕುಳಪ್ಪನ ಪತ್ನಿ ಗಾಯತ್ರಿ ಹೇಳಿಕೆ ನೀಡಿದ್ದಾಳೆ. ನಮ್ಮ ತಂದೆ ತಾಯಿ ಹೇಳಿಕೆ ಎಲ್ಲಾ ಸುಳ್ಳು. ಈಗ ಬರ್ತಿರೋ ಸುದ್ದಿ ಎಲ್ಲಾ ಸುಳ್ಳು. ಅಪಹರಣ, ಜೀವಬೆದರಿಕೆ ಅಂತ ಸುಳ್ಳು ಸುದ್ದಿ ಹೇಳ್ತಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಗೆ ಬಂದು ಸ್ಪಷ್ಟನೆ ನೀಡಿದ್ದೇನೆ. ಪೊಲೀಸರು ಪದೇ ಪದೇ ಕರೆದು ಕಿರಿಕಿರಿ ಮಾಡ್ತಾ ಇದ್ದಾರೆ. ನಾನು ಸ್ಪಷ್ಟವಾಗಿ ಹೇಳಿಕೆ ನೀಡಿದ್ದೇನೆ. ಜೂನ್ 5ಕ್ಕೆ ಮದುವೆ ಆಗಿದ್ದೇವೆ. ಮೂರು ತಿಂಗಳು ನಾವೆಲ್ಲಾ ಚೆನ್ನಾಗೆ ಇದ್ವಿ. ನಮ್ಮ ಪಾಲಕರನ್ನ ಯಾರು ಮೈಂಡ್ ವಾಶ್ ಮಾಡಿದ್ದಾರೋ ಗೊತ್ತಿಲ್ಲ. ಕೆಲವೊಂದು ಆಡಿಯೋಗಳು ಎಡಿಟ್ ಮಾಡಿದ್ದು ಇರಬಹುದು. ನಾನು ಈಗ ಗಂಡನ ಮನೆಗೆ ಹೋಗ್ತೇನೆ. ನಾವು ಮುಂಡಗೋಡಕ್ಕೆ ಚಿತ್ರೀಕರಣಕ್ಕಾಗಿ ಹೋಗ್ತಿದ್ವಿ. ಹೀಗಾಗಿ ಅಲ್ಲೇ ರಿಜಿಸ್ಟರ್ ಮದುವೆ ಆದ್ವಿ ಎಂದು ಪೊಲೀಸರ ವಿಚಾರಣೆ ನಂತರ ಗಾಯತ್ರಿ ಹೇಳಿಕೆ ನೀಡಿದ್ದಾಳೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ
ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, 20ರಂದು ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಗಾಯತ್ರಿಯ ಪೋಷಕರು ಅಪಹರಣ ಹಾಗೂ ಬಲವಂತದ ವಿವಾಹದ ಕುರಿತು ದೂರು ದಾಖಲಿಸಿದ್ದರು. ತನಿಖೆಯ ಬಳಿಕ ಗಾಯತ್ರಿ ಸ್ವಯಂ ಇಚ್ಛೆಯಿಂದ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳನ್ನೂ ತನಿಖೆಗೆ ಸೇರಿಸಲಾಗಿದೆ. ಅಗತ್ಯವಿದ್ದರೆ ಗಾಯತ್ರಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗುವುದು. ಇದಕ್ಕೆ ಅಂತಿಮ ನಿರ್ಧಾರವನ್ನು ಆಕೆ ಹಾಗೂ ಸಂಬಂಧಿತ ಅಧಿಕಾರಿಗಳು ಕೈಗೊಳ್ಳುತ್ತಾರೆ” ಎಂದು ತಿಳಿಸಿದರು.
