ಸಿಂಧನೂರಿನಲ್ಲಿ 11 ದಿನಗಳ ದಸರಾ ಉತ್ಸವಕ್ಕೆ ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ, ರೈತರು ಕಾಲಕ್ಕೆ ತಕ್ಕಂತೆ ಹೊಸ ಬೆಳೆಗಳಿಗೆ ಬದಲಾಗಬೇಕು ಎಂದು ಸಲಹೆ ನೀಡಿದ್ದು, ಈ ಬಾರಿ ಗ್ರಾಮೀಣ, ರೈತ, ಆರೋಗ್ಯ, ಶಿಕ್ಷಣ  ಎಂದು ವಿನೂತನವಾಗಿ ಆಯೋಜಿಸಲಾಗಿದೆ.

ರಾಯಚೂರು: ಸಿಂಧನೂರು ದಸರಾ ಉತ್ಸವ ಸಡಗರ ಸಂಭ್ರಮದಿಂದ ನಡೆದಿದೆ. 11 ದಿನಗಳ ಕಾಲ ನಡೆಯುವ ದಸರಾ ಕಾರ್ಯಕ್ರಮಗಳಿಗೆ ಇವತ್ತು ಸಚಿವ ಶರಣಬಸಪ್ಪ ದರ್ಶನಾಪುರ ಚಾಲನೆ ನೀಡಿದ್ರು. ಸಿಂಧನೂರು ತಾಲೂಕಿನ ಸೋಮಲಾಪುರದ ಅಂಬಾ ಮಠದಲ್ಲಿ ಆಯೋಜನೆ ಮಾಡಿದ ಸಮಾರಂಭ ಉದ್ದೇಶಿಸಿ ಮಾತನಾಡಿದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಈ ಭಾಗದಲ್ಲಿ ಮೊದಲು ಎಲ್ಲೆಡೆ ಹೈಬ್ರಿಡ್ ಹತ್ತಿ ಬೆಳೆ ತೆಗೆಯುತ್ತಿದ್ದರು.1985 ರಿಂದ ಹತ್ತಿ ಬೆಳೆಯ ಜಾಗದಲ್ಲಿ ಭತ್ತದ ಬೆಳೆ ಬಂದಿತು. ಕಾಲಕ್ಕೆ ತಕ್ಕಂತೆ ನಮ್ಮ ಭಾಗದ ರೈತರು ಹೊಸ ಬೆಳೆಗೆ ಬದಲಾಗಬೇಕು ಎಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಸಲಹೆ ಮಾಡಿದರು. ಸೋಮಲಾಪುರದ ಅಂಬಾ ದೇವಸ್ಥಾನದ ಬಳಿ ಸೆ.23ರಂದು ಆರಂಭಗೊಂಡ ಗ್ರಾಮೀಣ ದಸರಾ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗೆ ಚಟಾಕಿ ಹಾರಿಸಿದ ಶಾಸಕ

ನಮಗೂ ವಯಸ್ಸಾಗುತ್ತಾ ಬಂದಿತು, ತುಂಗಭದ್ರಾ ಡ್ಯಾಂಗೂ ವಯಸ್ಸಾಯಿತು ಎಂದು ಹೇಳುತ್ತ ಸಭಾಂಗಣವನ್ನು ನಗೆಗಡಲಲ್ಲಿ ಮುಳುಗಿಸಿದ ಶಾಸಕರು, ಕಾಲ ಬದಲಾಗುತ್ತಿದೆ. ಅಂತೆಯೇ ನಾವು ಬದಲಾಗಬೇಕು. ಹೊಸತನಕ್ಕೆ ನಾವೆಲ್ಲ ಸಿದ್ಧರಾಗಲೇಬೇಕು ಎಂದು ಸಲಹೆ ಮಾಡಿದರು. ನಮ್ಮ ಸಾಮಾಜಿಕ ಪರಿಕಲ್ಪನೆ ಬದಲಾಗಲೇಬೇಕು. ಎಲ್ಲರೂ ಶಿಕ್ಷಣ ಪಡೆಯಬೇಕು. ರೈತರು ಕೃಷಿಯಲ್ಲಿ ತಂತ್ರಜ್ಞಾನ ಬಳಸಬೇಕು. ಗ್ರಾಮೀಣ ಕಲೆ ಉಳಿಯಬೇಕು. ಆರೋಗ್ಯ ಕಾಯ್ದುಕೊಳ್ಳಬೇಕು. ಗಿಡ ಮರ ಹೆಚ್ಚು ಹೆಚ್ಚು ಬೆಳೆಸಬೇಕು. ಈ ನಿಟ್ಟಿನಲ್ಲಿ ಯೋಚಿಸಿಯೇ ನಾವು ಗ್ರಾಮೀಣ ದಸರಾ, ರೈತ ದಸರಾ, ಆರೋಗ್ಯ ದಸರಾ, ಶಿಕ್ಷಣ ದಸರಾ, ಹಸಿರು ದಸರಾ ಎಂದು ವಿನೂತನ ರೀತಿಯಲ್ಲಿ ದಸರಾ ಉತ್ಸವ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

ಸೋನಾಮಸೂರಿ ಬೆಳೆ ಬಗ್ಗೆ ಸಂತಸ

ನಮ್ಮ‌ ಭಾಗದ ರೈತರು ಪ್ರಸಿದ್ಧ ಸೋನಾಮಸೂರಿ ಬೆಳೆ ತೆಗೆಯುತ್ತ ಕೃಷಿ ವಿಜ್ಞಾನಿಗಳಿಗಿಂತಲೂ ಮುಂದಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದ ಶಾಸಕರು, ಎಲ್ಲ ಗ್ರಾಮ ಪಂಚಾಯತಗಳಲ್ಲಿ ಆಯೋಜ‌ನೆ ಮಾಡಿದ, ಹೊಸ ಸಾಮಾಜಿಕ ಸಂದೇಶದ ಕಿರು ನಾಟಕಗಳನ್ನು ಸಾರ್ವಜನಿಕರು ವೀಕ್ಷಣೆ ಮಾಡಬೇಕು. ಆ ನಾಟಕಗಳಲ್ಲಿನ ಸಂದೇಶ ಅರಿತು ಬದಲಾವಣೆಯತ್ತ ಹೆಜ್ಜೆ ಇಡಬೇಕು ಎಂದು ಮನವಿ ಮಾಡಿದರು.

ಎರಡನೇ ವರ್ಷವೂ ಅದ್ದೂರಿ:

ನಮ್ಮ ಸಿಂಧನೂರ ದಸರಾ ಉತ್ಸವವು ಎರಡನೇ ವರ್ಷಕ್ಕೆ ಕಾಲಿರಿಸಿ ಅದ್ದೂರಿಯಾಗಿ ನಡೆಯುತ್ತಿದೆ. ಮೊದಲನೇ ವರ್ಷ ದಸರಾ ಕಾರ್ಯಕ್ರಮವು ಯಶ ಕಂಡ ಬಳಿಕ ತಾಲೂಕಿನ ಎಲ್ಲ ಭಾಗದ ಜನರು ಸೇರಿ ಗ್ರಾಮೀಣ ಪ್ರದೇಶದ ಜೊತೆಗೆ ಸಿಂಧನೂರ ಸಿಟಿಯಲ್ಲಿ ದಸರಾ ಆಚರಣೆ ಆಗಬೇಕು ಎಂದು ನಿರ್ಧರಿಸಿ ಈ ಬಾರಿ ಗ್ರಾಮೀಣ ದಸರಾ ಎಂದು ಐದು ದಿನಗಳ ಕಾಲ ಗ್ರಾಮಗಳಲ್ಲಿ ಕೂಡ ದಸರಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಿಂಧನೂರ ಸೇರಿದಂತೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದ ನಾನಾ ಕಾರ್ಯಕ್ರಮಗಳ ವೀಕ್ಷಣೆ‌ ಮಾಡಬೇಕು ಎಂದು ಸಮಾರಂಭದ ಮೂಲಕ ಮನವಿ ಮಾಡಿದರು.