ಬೆಂಗಳೂರಿನ ಬನಶಂಕರಿ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬ ಹಾಸಿಗೆ ಹಾಸಿಕೊಂಡು ಮಲಗಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,   ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು ನಗರದ ಸಂಚಾರ ದಟ್ಟಣೆ ಇರುವ ಬನಶಂಕರಿ ರಸ್ತೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಬಿಎಂಟಿಸಿ ಬಸ್‌ಗಳು, ಆಟೋಗಳು ಹಾಗೂ ನೂರಾರು ವಾಹನಗಳು ಓಡಾಡುವ ಈ ರಸ್ತೆಯ ಮಧ್ಯದಲ್ಲಿ ಒಬ್ಬ ವ್ಯಕ್ತಿ ಹಾಸಿಗೆ ಹಾಸಿಕೊಂಡು, ಕಾಲು ಮೇಲೆ ಕಾಲು ಹಾಕಿಕೊಂಡು ಆರಾಮವಾಗಿ ಮಲಗಿರುವುದು ಕಂಡುಬಂದಿದೆ. ವ್ಯಕ್ತಿಯ ಈ ವಿಚಿತ್ರ ಅವತಾರದಿಂದ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ವೈರಲ್ ವಿಡಿಯೋ

ಈ ಘಟನೆಗೆ ಸಾಕ್ಷಿಯಾದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ಸದ್ಯ ಭಾರೀ ವೈರಲ್ ಆಗಿದೆ. ವೀಡಿಯೋದಲ್ಲಿ ಆ ವ್ಯಕ್ತಿ ನಡುರಸ್ತೆಯಲ್ಲೇ ಮಲಗಿರುವುದನ್ನು ಕಂಡ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಹುಚ್ಚುತನದ ಪರಮಾವಧಿ” ಎಂದು ಟೀಕಿಸಿದ್ದಾರೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥನೋ ಅಥವಾ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ನಾನೋ ಎಂಬ ಪ್ರಶ್ನೆ ಎದ್ದಿದೆ. ಇಂತಹ ವರ್ತನೆ ಕೇವಲ ಅವನ ಜೀವವನ್ನಷ್ಟೇ ಅಲ್ಲದೆ ನಿರಪರಾಧಿ ಪ್ರಯಾಣಿಕರ ಜೀವವನ್ನೂ ಅಪಾಯಕ್ಕೆ ತಳ್ಳುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.

ಪೊಲೀಸರ ಪ್ರತಿಕ್ರಿಯೆ

ಸಂಬಂಧಿಸಿದ ವೀಡಿಯೋವನ್ನು ಟ್ರಾಫಿಕ್ ಪೊಲೀಸರನ್ನೂ ಟ್ಯಾಗ್ ಮಾಡಲಾಗಿದ್ದು, ಪೊಲೀಸರು ಸ್ಥಳೀಯ ಠಾಣೆಗೆ ವಿವರ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಕೂಡಾ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಂಚಾರದಲ್ಲಿ ಅಡೆತಡೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ. ಈ ಘಟನೆ ಮತ್ತೊಮ್ಮೆ ಬೆಂಗಳೂರಿನ ಸಂಚಾರ ಅವ್ಯವಸ್ಥೆಯನ್ನು ಎತ್ತಿ ತೋರಿಸಿದ್ದು, ರಸ್ತೆಯಲ್ಲಿ ನಡೆಯುವ ಪ್ರತಿಯೊಂದು ಅಸಾಮಾನ್ಯ ಘಟನೆ ಕೂಡ ಸಾಮಾನ್ಯ ಜನರ ಜೀವಕ್ಕೆ ಅಪಾಯ ತರುವುದು ಎಂಬುದನ್ನು ನೆನಪಿಸುತ್ತದೆ.

ಸಾರ್ವಜನಿಕರ ಆಕ್ರೋಶ

ಕರ್ನಾಟಕ ಪೋರ್ಟಪೋಲಿಯೋ ಎಂಬ ಟ್ವಿಟ್ಟರ್ ಹ್ಯಾಂಡಲ್‌ ಈ ಬಗ್ಗೆ ವಿಡಿಯೋವನ್ನು ಶೇರು ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಟ್ಯಾಗ್ ಮಾಡಿದೆ. "ಇದು ನಿಜಕ್ಕೂ ಆಘಾತಕಾರಿ ಘಟನೆ. ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಅಸಾಧಾರಣ ಗೊಂದಲದ ದೃಶ್ಯ ಕಂಡುಬಂತು. ಒಂದು ವಿಚಿತ್ರ ಘಟನೆಯಲ್ಲಿ, ಒಬ್ಬ ವ್ಯಕ್ತಿ ರಸ್ತೆ ಮಧ್ಯದಲ್ಲಿ ಹಾಸಿಗೆಯ ಮೇಲೆ ಮಲಗಿರುವುದು ಕಾಣಿಸಿತು, ಇದರಿಂದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ವಾಹನ ಸವಾರರು ಬಲವಂತವಾಗಿ ನಿಲ್ಲಬೇಕಾಗಿ ಬಂತು, ಅವನು ಎದ್ದು ಹೋಗುವವರೆಗೆ ಕಾಯಬೇಕಾಯಿತು. ಇದರಿಂದ ರಸ್ತೆ ಮೇಲೆ ಇದ್ದ ಎಲ್ಲರಿಗೂ ಅಪಾಯಕಾರಿ ಪರಿಸ್ಥಿತಿ ಉಂಟಾಯಿತು.

ಇಂತಹ ವರ್ತನೆ ಸಂಪೂರ್ಣವಾಗಿ ಅಜಾಗರೂಕ ಹಾಗೂ ಸ್ವೀಕಾರಾರ್ಹವಲ್ಲ. ಆ ವ್ಯಕ್ತಿ ಮಾನಸಿಕ ಅಸ್ವಸ್ತನಾಗಿರಲಿ ಅಥವಾ ಉದ್ದೇಶಪೂರ್ವಕವಾಗಿ ಇಂತಹ ಕೃತ್ಯದಲ್ಲಿ ತೊಡಗಿರಲಿ, ಅದು ಅವನ ಸ್ವಂತ ಜೀವವನ್ನಷ್ಟೇ ಅಲ್ಲ, ನಿರಪರಾಧಿ ಪ್ರಯಾಣಿಕರ ಜೀವವನ್ನೂ ಅಪಾಯಕ್ಕೆ ತಳ್ಳುವ ಅತ್ಯಂತ ಬೇಜವಾಬ್ದಾರಿಯುತ ನಡೆ. ಆಕಸ್ಮಿಕವಾಗಿ ಯಾವದಾದರೂ ವಾಹನ ಅವನಿಗೆ ಡಿಕ್ಕಿ ಹೊಡೆದರೆ ಹೊಣೆ ಯಾರು? ರಸ್ತೆ ಬಳಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲದ ಚಾಲಕನೋ, ಅಥವಾ ಈ ಅಪಾಯವನ್ನು ತಾನೇ ಸೃಷ್ಟಿಸಿದ ವ್ಯಕ್ತಿಯೋ?

ಜನನಿಬಿಡ ಸಾರ್ವಜನಿಕ ರಸ್ತೆಯಲ್ಲಿ ಮಲಗುವುದು ಕೇವಲ ತೊಂದರೆಯಲ್ಲ, ಅದು ಗಂಭೀರ ಸುರಕ್ಷತಾ ಅಪಾಯ ಹಾಗೂ ಮೂಲಭೂತ ನಾಗರಿಕ ಪ್ರಜ್ಞೆಯ ಉಲ್ಲಂಘನೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಅಡೆತಡೆಗಳನ್ನು ತೆರವುಗೊಳಿಸಬೇಕು, ಆ ವ್ಯಕ್ತಿಯ ಸುರಕ್ಷತೆಯನ್ನು ಖಚಿತಪಡಿಸಬೇಕು ಮತ್ತು ಇತರರಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಚಲಿಸಲು ಉದ್ದೇಶಿಸಲಾದ ರಸ್ತೆಯಲ್ಲಿ ಇಂತಹ ಬೇಜವಾಬ್ದಾರಿಯುತ ನಡವಳಿಕೆಯನ್ನು ಯಾವ ರೀತಿಯಲ್ಲೂ ಸಹಿಸಲಾಗುವುದಿಲ್ಲ" ಎಂದು ಬರೆದುಕೊಂಡಿದೆ.

ಈ ಫೋಸ್ಟ್ ಗೆ ಕಮಂಟ್‌ ಮಾಡಿರುವ ಬೆಂಗಳೂರು ನಗರ ಪೊಲೀಸರು ಮತ್ತು ಬೆಂಗಳೂರು ಸಂಚಾರ ಪೋಲೀಸರರು ಈ ಸ್ಥಳದ ಬಗ್ಗೆ ಮಾಹಿತಿ ನೀಡಿ ಎಂದು ವಿನಂತಿಸಿಕೊಂಡಿದ್ದಾರೆ.

Scroll to load tweet…