ಕೊಡಗಿನ ವಾಸಂತಿ ಭಟ್ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಾವಿನ ಹಿಂದೆ ಖಳನಾಯಕ ನಟನ ಸಹೋದರ ಪೀಟರ್ ರೈ ಕೈವಾಡವಿದೆ ಎಂದು ವಾಸಂತಿ ಸಹೋದರ ವಿಜಯ್ ಆರೋಪಿಸಿದ್ದಾರೆ. ವಾಸಂತಿ ಪತಿ ಶ್ರೀವತ್ಸನ ಸ್ನೇಹಿತನಾಗಿದ್ದ ಪೀಟರ್ ರೈಗೆ ಎಸ್‌ಐಟಿ ನೋಟಿಸ್ ನೀಡಿದ್ದು, ಆತನ ಮೇಲೆ ಅನುಮಾನ ವ್ಯಕ್ತವಾಗಿದೆ. 

ಕೊಡಗು : ಇದೇ ನನ್ನ ಮಗಳು ಅನನ್ಯ ಭಟ್ ಎಂದು ಸುಜಾತ ಭಟ್ ತೋರಿಸಿದ್ದ ಕೊಡಗಿನ ವಾಸಂತಿ ಭಟ್ ಸಾವಿನ ವಿಷಯ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ವಾಸಂತಿ ಸಾವಿನ ಹಿಂದೆ ಖಳನಾಯಕ ನಟನ ಸಹೋದರನ ಕೈವಾಡ ಇರಬಹುದು ಎಂದು ವಾಸಂತಿ ಸಹೋದರ ವಿಜಯ್ ಸುವರ್ಣ ನ್ಯೂಸ್ಗೆ ಹೇಳಿದ್ದಾರೆ. ಹಾಗಾದರೆ ವಾಸಂತಿ ಸಾವಿಗೂ ಖಳನಾಯಕ ನಟನ ಸಹೋದರನಿಗೂ ಏನು ಸಂಬಂಧ ಎನ್ನುವ ಪ್ರಶ್ನೆ ಶುರುವಾಗಿದೆ.

ವಾಸಂತಿ ಸಾವಿನ ಬಳಿಕ ಪತಿ, ಸ್ನೇಹಿತ ಎಸ್ಕೇಪ್!

ಈ ಕುರಿತು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿರುವ ವಿಜಯ್ ಅವರು ವಾಸಂತಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ಪತಿ ಶ್ರೀವತ್ಸ ಅವರ ಸ್ನೇಹಿತ ಪೀಟರ್ ರೈ ಅಲ್ಲಿಂದ ಎಸ್ಕೇಪ್ ಆಗಿದ್ದ. ಅದಕ್ಕೂ ಮೊದಲು ಎರಡು ಮೂರು ಬಾರಿ ವಿರಾಜಪೇಟೆಗೂ ಬಂದಿದ್ದ. ಅಲ್ಲಿ ನನ್ನ ಅಕ್ಕ ಬಾವಂದಿರ ಮನೆಗೆ ಬಂದು ವಾಸಂತಿ ಸಾವಿನ ಬಗ್ಗೆ ವಿಚಾರಿಸಿದ್ದ. ಅಲ್ಲದೆ ಬೆಂಗಳೂರಿನಲ್ಲಿರುವ ಅಕ್ಕ ಬಾವನಿಗೂ ಕರೆ ಮಾಡಿ ವಿಚಾರಿಸಿ, ಗಲಾಟೆ ಮಾಡಿದ್ದ ಎಂದಿದ್ದಾರೆ.

ಕೇಸ್ ಆದ್ರೂ ಚಾರ್ಜ್ ಶೀಟ್ ಸಲ್ಲಿಕೆ ಇಲ್ಲ

ವಾಸಂತಿ ಮೃತಪಟ್ಟ ಬಳಿಕ ಪ್ರಕರಣ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶ್ರೀವತ್ಸ ಅಲಿಯಾಸ್ ಡ್ಯಾನಿ ಮತ್ತು ಆತನ ಸ್ನೇಹಿತ ಪೀಟರ್ ರೈ ವಿರುದ್ಧ ಪ್ರಕರಣ ದಾಖಲಾಗಿತ್ತು. ಶ್ರೀವತ್ಸ ಪ್ರಕರಣದಲ್ಲಿ ಎ1 ಆದರೆ ಪೀಟರ್ ರೈ ಎ2 ಆಗಿದ್ದ. ಇದಾದ ಮೇಲೆ ಆತ ಎಸ್ಕೇಪ್ ಆಗಿದ್ದ. ನಂತರ ಈ ಪ್ರಕರಣದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿಲ್ಲ. ಚಾರ್ಜ್ ಶೀಟ್ ಏಕೆ ಸಲ್ಲಿಕೆ ಆಗಲಿಲ್ಲ ಎನ್ನುವುದು ಪ್ರಶ್ನೆ ಇದೆ.

ವಾಸಂತಿ ಮೃತಪಟ್ಟ ಮೇಲೆ ಆತ ಕಾಣೆ

ವಾಸಂತಿ ಪತಿ ಶ್ರೀವತ್ಸ ಅಲಿಯಾಸ್ ಡ್ಯಾನಿಗೆ ಆತ ಬಹಳ ವರ್ಷಗಳಿಂದ ಪರಿಚಯಸ್ಥನಾಗಿದ್ದ. ಸಾಕಷ್ಟು ಬಾರಿ ಬೆಂಗಳೂರಿನಲ್ಲಿರುವ ವಾಸಂತಿ ಅವರ ಮನೆಗೆ ಬಂದು ಹೋಗುತ್ತಿದ್ದ. ವಾಸಂತಿ ಮೃತಪಟ್ಟ ಮೇಲೆ ಆತ ಕಾಣೆಯಾಗಿದ್ದ. ಪ್ರಕರಣ ದಾಖಲಾದರೂ ನಂತರ ಚಾರ್ಜ್ ಶೀಟ್ ಸಲ್ಲಿಕೆಯೇ ಆಗಲಿಲ್ಲ. ಹೀಗಾಗಿ ಆತನ ಮೇಲೆ ಸಾಕಷ್ಟು ಅನುಮಾನ ಇದೆ . ವಾಸಂತಿ ಮೃತಪಟ್ಟ ಮೇಲೆ ಆತ ಶ್ರೀವತ್ಸ ಅವರನ್ನು ಕೈಬಿಟ್ಟ, ಆತ ಶ್ರೀವತ್ಸ ಅವರ ಸಂಪರ್ಕದಲ್ಲೇ ಇರಲಿಲ್ಲ. ಈ ಎಲ್ಲಾ ವಿಷಯಗಳನ್ನು ಅಕ್ಕ ಎಸ್ಐಟಿಗೆ ಹೇಳಿದ್ದಾರೆ. ಎಸ್ಐಟಿ ಖಳನಾಯಕ ನಟನ ಸಹೋದರ ಪೀಟರ್ ರೈ ಅವರಿಗೆ ನೊಟೀಸ್ ಕೊಟ್ಟಿದ್ದಾರೆ. ಅವರ ಪರಿಚಯಸ್ಥ 20 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ ಎಂದು ವಾಸಂತಿ ಸಹೋದರ ವಿಜಯ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ.