ವೀರಶೈವ ಮಠಾಧೀಶ ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಭಕ್ತಸಾಗರದ ನಡುವೆ ಶರಣಬಸವೇಶ್ವರ ದೇವಸ್ಥಾನದ ಎದುರು ಸಮಾಧಿ ಮಾಡಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು, ಭಕ್ತರು ಅಂತಿಮ ದರ್ಶನ ಪಡೆದರು.
ಕಲಬುರಗಿ: ಪ್ರಸಿದ್ಧ ವೀರಶೈವ ಮಠಾಧೀಶ ಹಾಗೂ ಸಮಾಜಸೇವಕ ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರವನ್ನು ವೀರಶೈವ ಸಂಪ್ರದಾಯದ ವಿಧಿ ವಿಧಾನಗಳಂತೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಶರಣಬಸವೇಶ್ವರ ದೇವಸ್ಥಾನದ ಎದುರುಭಾಗದಲ್ಲೇ ಅಂತ್ಯಸಂಸ್ಕಾರ ನಡೆಯಿತು. ಭೂಮಿ ಒಳಗಡೆ ಸಮಾಧಿ ನಿರ್ಮಿಸಿ, ಐದು ಸಾವಿರ ವಿಭೂತಿ, ಹಾಗೂ ಲಕ್ಷ ಬಿಲ್ವಪತ್ರೆಗಳೊಂದಿಗೆ ವಿಶೇಷ ಅರ್ಚನೆ ನಡೆಸಿ ಶಾಶ್ವತ ಸಮಾಧಿ ಮಾಡಲಾಯಿತು. ಡಾ. ಶರಣಬಸಪ್ಪ ಅಪ್ಪ ಅವರ ಸಮಾಧಿ, ಅವರ ತಂದೆ ಹಾಗೂ 7ನೇ ಪೀಠಾಧಿಪತಿ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿ ಪಕ್ಕದಲ್ಲೇ ನಿರ್ಮಿಸಲಾಯಿತು.
ಅಂತ್ಯಸಂಸ್ಕಾರದಲ್ಲಿ ಕಲಬುರಗಿ ಜಿಲ್ಲೆ ಹಾಗೂ ವಿವಿಧೆಡೆಯ ಮಠಾಧೀಶರು ಭಾಗವಹಿಸಿ ಪೂರ್ಣ ವಿಧಿ ವಿಧಾನಗಳನ್ನು ನೆರವೇರಿಸಿದರು. ಕುಟುಂಬ ಸದಸ್ಯರ ಹೃದಯವಿದ್ರಾವಕ ಆಕ್ರಂಧನ, ಭಕ್ತ ಸಮೂಹದ ಭಾವಪೂರ್ಣ ಜಯಘೋಷಗಳ ನಡುವೆ ಅಂತ್ಯಕ್ರಿಯೆ ಸಂಪನ್ನವಾಯಿತು. ಈ ಸಂದರ್ಭದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲ್, ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಧಾರ್ಮಿಕ ಗಣ್ಯರು ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರ ಕಾರ್ಯಕ್ರಮವು ವೀರಶೈವ ಪರಂಪರೆಯ ಪವಿತ್ರತೆಗೆ ತಕ್ಕಂತೆ ಗಂಭೀರ ಹಾಗೂ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು.
ಭಾವೈಕ್ಯ ಮೆರೆದ ದರ್ಗಾದ ಕುಟುಂಬಸ್ಥರು
ಖಾಜಾ ಬಂದೇ ನವಾಜ್ ದರ್ಗಾ ಸಂಸ್ಥಾನದ ಕುಟುಂಬಸ್ಥರು ಪೂಜ್ಯ ಡಾ. ಶರಣಬಸಪ್ಪ ಅಪ್ಪಾ ಅವರ ಅಂತಿಮ ದರ್ಶನ ಪಡೆದರು. ದರ್ಗಾದ ಕುಟುಂಬಸ್ಥರು ಅಂತಿಮ ದರ್ಶನ ಪಡೆದು ಭಾವೈಕ್ಯ ಮೆರೆದರು. ಕುಟುಂಬ ಸಮೇತ ಆಗಮಿಸಿದ ನವಾಜ್ ದರ್ಗಾದ ಪ್ರಮುಖರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಂತಿಮ ದರ್ಶನ ಪಡೆದರು.
ಇನ್ನು ಅನೇಕ ಮಂದಿ ಭಕ್ತರು, ಕುಟುಂಬದವರು, ಹಿತೈಷಿಗಳು ಆಪ್ತರು ಸೇರಿದಂತೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೂಡ ಅಪ್ಪಾಜಿ ದರ್ಶನ ಪಡೆದರು. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಕಲಬುರಗಿಗೆ ಆಗಮಿಸಿದ ಡಿಕೆಶಿ ಜೊತೆಗೆ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, KKRDB ಅಧ್ಯಕ್ಷ ಡಾ. ಅಜಯಸಿಂಗ್ ಸೇರಿ ಹಲವು ಕಾಂಗ್ರೆಸ್ ನಾಯಕರು ಸಾಥ್ ನೀಡಿದರು.
ವೀರಶೈವ ಮಠಾಧೀಶರಾದ ಡಾ. ಶರಣಬಸಪ್ಪ ಅಪ್ಪ ಅವರ ಅಂತಿಮ ದರ್ಶನದ ಬಳಿಕ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾವಪೂರ್ಣ ನುಡಿನಮನ ಸಲ್ಲಿಸಿದರು. ದೇಶದ ಸ್ವಾತಂತ್ರ್ಯದ ಬಗ್ಗೆ ಚಿಂತನೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಅಪ್ಪಾಜಿಯವರ ಪಾರ್ಥಿವ ಶರೀರ ದೇವರ ಪಾದ ಸೇರಿರುವುದು ದುಃಖಕರ ಸಂಗತಿ ಎಂದು ಅವರು ಹೇಳಿದರು.
“ಸರ್ಕಾರ ಪರವಾಗಿ ಗೌರವ ಸಲ್ಲಿಸಲು, ನಾನು ಹಾಗೂ ಪ್ರಿಯಾಂಕ್ ಖರ್ಗೆ ಸೇರಿದಂತೆ ನಮ್ಮ ಎಲ್ಲರೂ, ಎಲ್ಲಾ ಕಾರ್ಯಕ್ರಮಗಳನ್ನು ಬದಿಗಿಟ್ಟು ಇಲ್ಲಿಗೆ ಬಂದಿದ್ದೇವೆ. ಅಪ್ಪಾಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಎಲ್ಲರೂ ಪ್ರಾರ್ಥಿಸುತ್ತೇವೆ,” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಮುಂದುವರಿದು, “ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪ್ಪಾಜಿ ಈ ಭಾಗದಲ್ಲಿ ನಿಜವಾದ ಕ್ರಾಂತಿ ತಂದಿದ್ದಾರೆ. ನಾವು ಎಲ್ಲರೂ ಈ ಮಠದ ಭಕ್ತರು. ಧಾರ್ಮಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿರುವ ಅಪ್ಪಾಜಿ, ಹೊರರಾಜ್ಯಗಳಲ್ಲಿಯೂ ಹೆಚ್ಚಿನ ಖ್ಯಾತಿ ಪಡೆದಿದ್ದಾರೆ. ಎಲ್ಲಾ ಸಮಾಜದವರು ಅವರ ಭಕ್ತರಾಗಿದ್ದಾರೆ,” ಎಂದು ಶ್ಲಾಘಿಸಿದರು.
“ಕಳೆದ 80 ವರ್ಷಗಳಿಂದ ಉತ್ತರ ಕರ್ನಾಟಕ ಜನತೆಗೆ ಅಪ್ಪಾಜಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಗೆ ಗೌರವ ಸಲ್ಲಿಸಲು ಸರ್ಕಾರ ತೀರ್ಮಾನ ಮಾಡಿಕೊಂಡಿದ್ದು, ನಾವು ಇಲ್ಲಿ ಹಾಜರಾಗಿದ್ದೇವೆ. ಸರ್ಕಾರದ ಎಲ್ಲಾ ಸದಸ್ಯರು ಅವರ ಕುಟುಂಬದ ಜೊತೆ ನಿಂತಿದ್ದಾರೆ,” ಎಂದು ಉಪಮುಖ್ಯಮಂತ್ರಿಗಳು ಹೇಳಿದರು. ಅಪ್ಪಾಜಿಯವರ ನಿಧನದಿಂದ ರಾಜ್ಯದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಳಿಸಲಾಗದ ನಷ್ಟ ಉಂಟಾಗಿದೆ. ಅವರ ಸೇವೆಯನ್ನು ಮುಂದಿನ ಪೀಳಿಗೆಯವರು ಸ್ಮರಿಸುತ್ತಲೇ ಇರುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
