ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯಲ್ಲಿ ತೆಪ್ಪ ಮುಗುಚಿ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಮೀನುಗಾರಿಕೆ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದ್ದರೂ, ಇದು ಅಕ್ರಮ ಮರಳು ದಂಧೆಯ ಪರಿಣಾಮವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆ: ತುಂಗಾಭದ್ರಾ ನದಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಶನಿವಾರ ಸಂಜೆ ನಡೆದಿದೆ. ಹೊನ್ನಾಳಿ ಪಟ್ಟಣದ ಪಕ್ಕದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ತೆಪ್ಪ ಮುಗುಚಿ ಇಬ್ಬರು ನೀರುಪಾಲಾಗಿದ್ದಾರೆ.

Add Asianetnews Kannada as a Preferred SourcegooglePreferred

ಘಟನೆಯಲ್ಲಿ ಮೃತಪಟ್ಟವರನ್ನು ತಿಪ್ಪೇಶ್ (25) ಮತ್ತು ಮುಕ್ತಿಯಾರ್ (19) ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಇಬ್ಬರು ಯುವಕರು ನದಿಯಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದರು. ಆ ವೇಳೆ ತೆಪ್ಪ ನಿಯಂತ್ರಣ ತಪ್ಪಿ ಅಚ್ಚಾನಕ್ಕೇ ಮುಗುಚಿ ಬಿದ್ದಿದೆ. ತೀವ್ರವಾದ ನೀರಿನ ಹರಿವಿನಲ್ಲಿ ಇಬ್ಬರೂ ಮುಳುಗಿ ನೀರುಪಾಲಾಗಿದ್ದಾರೆ.

ಅಗ್ನಿಶಾಮಕ ದಳದಿಂದ ತೀವ್ರ ಹುಡುಕಾಟ ಕಾರ್ಯಾಚರಣೆ

ಅಪಘಾತದ ಮಾಹಿತಿ ಲಭ್ಯವಾದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಕಳೆದ ಎರಡು ಗಂಟೆಗಳಿನಿಂದ ಮೃತದೇಹಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ನದಿಯ ಆಳ ಹಾಗೂ ನೀರಿನ ವೇಗ ಹೆಚ್ಚು ಇರುವುದರಿಂದ ಕಾರ್ಯಾಚರಣೆಗೆ ಸ್ವಲ್ಪ ಅಡಚಣೆ ಉಂಟಾಗಿದೆ. ಘಟನೆಯ ನಂತರ ಮೃತರ ಕುಟುಂಬಸ್ಥರು ಸ್ಥಳಕ್ಕಾಗಮಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತು. ಸ್ಥಳದಲ್ಲೇ ದುಃಖದ ವಾತಾವರಣ ನಿರ್ಮಾಣವಾಗಿತ್ತು.

ಮರಳು ದಂಧೆ ಶಂಕೆ

ಈ ಘಟನೆ ಕುರಿತಂತೆ ಸ್ಥಳೀಯ ಸಾರ್ವಜನಿಕರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಯುವಕರು ಕೇವಲ ಮೀನುಗಾರಿಕೆಗೆ ಮಾತ್ರವಲ್ಲ, ಮರಳು ದಂಧೆ ನಡೆಸುವ ವೇಳೆ ತೆಪ್ಪ ಮುಗುಚಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೊನ್ನಾಳಿ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಿಖರ ಕಾರಣ ಪತ್ತೆಹಚ್ಚಲು ಪಾನ್ಸುಳಿ ಮತ್ತು ತಾಂತ್ರಿಕ ತಂಡದ ಸಹಾಯದಿಂದ ತನಿಖೆ ಮುಂದುವರಿಸಲಾಗಿದೆ.

ಕಾನೂನು ಕ್ರಮ

ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಈ ಘಟನೆ ಮೀನುಗಾರಿಕೆಯ ವೇಳೆ ಸಂಭವಿಸಿದ ಅಪಘಾತವಾಗಿರಬಹುದು. ಆದರೆ ಸ್ಥಳೀಯರ ಆರೋಪ ಮತ್ತು ಮರಳು ದಂಧೆ ಕುರಿತು ಬಂದಿರುವ ಮಾಹಿತಿಯನ್ನೂ ತನಿಖೆಯ ಅಂಗವಾಗಿ ಪರಿಶೀಲಿಸಲಾಗುತ್ತಿದೆ. ಅಗ್ನಿಶಾಮಕ ದಳದ ಶೋಧ ಕಾರ್ಯಾಚರಣೆ ಮುಗಿದ ಬಳಿಕ ಶವಗಳನ್ನು ಪತ್ತೆಹಚ್ಚಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.