Rabies death: ಬೀದಿ ನಾಯಿ ಕಡಿತಕ್ಕೊಳಗಾದ ಬಾಲಕ ರೇಬೀಸ್‌ನಿಂದ ಸಾವನ್ನಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ವರದಿಯಾಗಿದೆ. ಮೂರು ವರ್ಷದ ಬಾಲಕ ಅರ್ಮಾನ್ ಆಟವಾಡುತ್ತಿದ್ದಾಗ ಬೀದಿ ನಾಯಿ ಆತನ ಮೇಲೆ ದಾಳಿ ಮಾಡಿತ್ತು. ಆದರೆ ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ.

ಬೀದಿನಾಯಿ ದಾಳಿಗೆ ಬಾಲಕ ಬಲಿ

ಬೀದಿ ನಾಯಿ ಕಡಿತಕ್ಕೊಳಗಾದ ಬಾಲಕ ರೇಬೀಸ್‌ನಿಂದ ಸಾವನ್ನಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಿಂದ ವರದಿಯಾಗಿದೆ. ಮೂರು ವರ್ಷದ ಬಾಲಕ ಅರ್ಮಾನ್ ಆಟವಾಡುತ್ತಿದ್ದಾಗ ಬೀದಿ ನಾಯಿ ಆತನ ಮೇಲೆ ದಾಳಿ ಮಾಡಿತ್ತು. ಆದರೆ ಕುಟುಂಬದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ, ಕುಟುಂಬದವರಿಗೆ ಆತ ಬಿದ್ದಿದ್ದಾನೆ ಎಂದು ಯಾರೋ ಮಾಹಿತಿ ನೀಡಿದ್ದರು. ಹೀಗಾಗಿ ಮಗುವಿನ ದೇಹವನ್ನೆಲ್ಲಾ ಪರೀಕ್ಷೆ ಮಾಡಿದ ಪೋಷಕರಿಗೆ ಎಲ್ಲೂ ಗಾಯಗಳು ಕಾಣಿಸಿಕೊಂಡಿರಲಿಲ್ಲ, ಹೀಗಾಗಿ ಅವರೂ ಸುಮ್ಮನಾಗಿದ್ದರು. ಆದರೆ ನಾಯಿ ದಾಳಿ ನಡೆಸಿದ ಸುಮಾರು 10 ದಿನಗಳ ನಂತರ, ಮಗುವಿನಲ್ಲಿ ರೇಬೀಸ್ ಲಕ್ಷಣಗಳು ಗೋಚರಿಸಿದ್ದು, ನಂತರ ಮಗು ಸಾವನ್ನಪ್ಪಿತು ಎಂದು ಕುಟುಂಬದವರು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮಗುವಿಗೆ ನಾಯಿ ಕಚ್ಚಿದ ಬಗ್ಗೆ ಕುಟುಂಬಕ್ಕೆ ಮಾಹಿತಿ ಇರಲಿಲ್ಲ..

ಘಟನೆ ನಡೆದ ಎಂಟು ದಿನಗಳ ನಂತರ ಮಗು ಅರ್ಮಾನ್ ತಲೆ ಕೆರೆದುಕೊಳ್ಳಲು ಪ್ರಾರಂಭಿಸಿದಾಗ, ಕುಟುಂಬದವರು ತಲೆಯ ಮೇಲೆ ಕೂದಲಿನ ಕೆಳಗೆ ನಾಯಿ ಕಚ್ಚಿದ ಗಾಯ ಅದರ ಹಲ್ಲಿನ ಗುರುತುಗಳು ಇರುವುದನ್ನು ಗಮನಿಸಿದರು. ಆದರೆ ನಾಯಿ ದಾಳಿಯ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ, ನಾಯಿ ದಾಳಿಯ ಬಗ್ಗೆ ಯಾರೂ ನಮಗೆ ಮಾಹಿತಿ ನೀಡಲಿಲ್ಲ. ಆಟವಾಡುವಾಗ ಬಿದ್ದೆ ಎಂದು ಮಗು ಅರ್ಮಾನ್ ಹೇಳಿದ್ದಾನೆ ಎಂದು ಅರ್ಮಾನ್‌ನ ಚಿಕ್ಕಪ್ಪ ಶೇಖ್ ರಹೀಸ್ ಹೇಳಿದ್ದಾರೆ.

ಆದರೆ ಅರ್ಮಾನ್ ತಲೆ ಕೆರೆದುಕೊಳ್ಳಲು ಪ್ರಾರಂಭಿಸಿದಾಗ, ನಾವು ಆತನ ತಲೆಯನ್ನು ಗಮನಿಸಿದಾಗ ಅಲ್ಲಿ ನಾಯಿ ಕಚ್ಚಿದ ಗಾಯದ ಗುರುತು ಇರುವುದು ಕಂಡುಬಂದು ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಅವನಿಗೆ ಚಿಕಿತ್ಸೆ ನೀಡುವುದಕ್ಕೆ ನಿರಾಕರಿಸಲಾಯಿತು. ಹೀಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ದೆವು, ಇತರ ಎರಡು ಆಸ್ಪತ್ರೆಗಳೂ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಲ್ಲದೇ ನಿಮ್ಮ ಮಗು ಬದುಕುಳಿಯುವುದಿಲ್ಲ ಎಂದು ಅರ್ಮಾನ್ ಅವರ ಕುಟುಂಬಕ್ಕೆ ತಿಳಿಸಿವೆ ಎಂದು ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.

ಬೀದಿನಾಯಿಯನ್ನು ಹಿಡಿಯುವಂತೆ ಕುಟುಂಬದವರ ಆಗ್ರಹ

2 ವರ್ಷದ ಮಗು ಅರ್ಮಾನ್‌ನಲ್ಲಿ ಕಾಣಿಸಿಕೊಂಡ ರೇಬಿಸ್ ರೋಗ ಲಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿದ ಅವನ ಚಿಕ್ಕಪ್ಪ, ಅವನು ನೀರು ಕುಡಿಯಲು ಹೆದರುತ್ತಿದ್ದನು. ಅವನು ತನ್ನ ದೇಹವನ್ನು ಕೆರೆದುಕೊಂಡು ಕಂಬಳಿಯ ಕೆಳಗೆ ಅಡಗಿಕೊಂಡಿದ್ದನು. ಬೀದಿ ನಾಯಿ ಜೊಲ್ಲು ಸುರಿಸುವಂತೆ, ಅರ್ಮಾನ್‌ನ ಬಾಯಿಂದ ನೀರು ತೊಟ್ಟಿಕ್ಕುತ್ತಿತ್ತು ಎಂದು ಅವರು ಹೇಳಿದ್ದಾರೆ.

ಘಟನೆ ಹಿನ್ನೆಲೆ ಅರ್ಮಾನ್‌ ಕುಟುಂಬಕ್ಕೆ ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯಾಧಿಕಾರಿಗಳು ಸೂಚಿಸಿದ್ದಾರೆ. ತಮ್ಮ ಮಗುವಿನ ಸಾವಿನಿಂದ ಕುಟುಂಬದವರು ಆಘಾತಕ್ಕೊಳಗಾಗಿದ್ದು, ಯಾರಿಗೂ ಈ ಗತಿ ಬರಬಾರದು ಎಂದು ಆಶಿಸಿದ್ದಾರೆ. ಬೀದಿ ನಾಯಿಗಳನ್ನು ಹಿಡಿದು ಇಂತಹ ಘಟನೆಗಳನ್ನು ತಡೆಯಬೇಕೆಂದು ಅವರು ಆಡಳಿತಕ್ಕೆ ಒತ್ತಾಯಿಸಿದ್ದಾರೆ.